ಬೆಂಗಳೂರು ಓಕೆ, ಬೇರೆ ಕಡೆ ಲಾಕ್ಡೌನ್ ಯಾಕೆ? ಬಿಜೆಪಿಯಲ್ಲೇ ಅಪಸ್ವರ
ಶಿವಮೊಗ್ಗ, ಜ 5: ಓಮಿಕ್ರಾನ್ ಸೋಂಕು ಹರಡುತ್ತಿರುವುದಕ್ಕೆ ಕಡಿವಾಣ ಹಾಕಲು ಸರಕಾರ ಘೋಷಿಸಿರುವ ನೈಟ್ ಮತ್ತು ವೀಕೆಂಡ್ ಕರ್ಫ್ಯೂ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ಗೊತ್ತೇ ಇದೆ. ಸರಕಾರದ ನಿರ್ಧಾರಕ್ಕೆ ಬಿಜೆಪಿಯಲ್ಲೂ ಅಸಮಾಧಾನ ವ್ಯಕ್ತವಾಗುತ್ತಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೋಂಕು ಹೆಚ್ಚುತ್ತಿದೆ, ಅಲ್ಲಿ ಕರ್ಫ್ಯೂ ಹಾಕಲಿ, ರಾಜ್ಯದ ಇತರ ಕಡೆ ಯಾಕೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
ಲಾಕ್ಡೌನ್ ಹಿಂದೆ ಸಿದ್ದರಾಮಯ್ಯ ಒತ್ತಡ: ಏನಿದು ಗುರುತರ ಆರೋಪ?
ಬೆಂಗಳೂರು, ದಕ್ಷಿಣ ಕನ್ನಡ, ಧಾರವಾಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಆದರೆ, ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ನಗಣ್ಯ ಎನ್ನಬಹುದಾದ ಕೇಸುಗಳು ವರದಿಯಾಗುತ್ತಿವೆ. ಆದರೂ, ಇಡೀ ರಾಜ್ಯಕ್ಕೆ ಕರ್ಫ್ಯೂ ವಿಧಿಸಿರುವುದಕ್ಕೆ ಆ ಜಿಲ್ಲೆಗಳಲ್ಲಿ ಅಕ್ರೋಶ ಹೆಚ್ಚಾಗುತ್ತಿದೆ.
ಒಟ್ಟಾರೆಯಾಗಿ ಜನವರಿ ನಾಲ್ಕರ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ 77 ಕೇಸುಗಳಿವೆ. ಆದರೆ ಈ ಕೇಸುಗಳು ಎರಡು ಜಿಲ್ಲೆಯಿಂದ ವರದಿಯಾಗಿರುವುದು. ರಾಜ್ಯದ 21 ಜಿಲ್ಲೆಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರಕ್ಕಿಂತಲೂ ಕಮ್ಮಿಯಿದೆ. ಕೆ.ಎಸ್.ಈಶ್ವರಪ್ಪ ಸರಕಾರದ ಕ್ರಮದ ವಿರುದ್ದ ಬೇಸರ, ಮುಂದೆ ಓದಿ..
ರಾಜ್ಯದಲ್ಲಿ ಹೊಸ ಕೋವಿಡ್ ಮಾರ್ಗಸೂಚಿ: ಸಣ್ಣ ಕೈಗಾರಿಕೆಗಳ ಕಥೆಯೇನು?
ರಾಜ್ಯದ ಎಲ್ಲಾ ಕಡೆಗೂ ಕರ್ಫ್ಯೂ ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ
ರಾಜ್ಯದ ಬಾಗಲಕೋಟೆ, ಬೀದರ್, ಚಾಮರಾಜನಗರ, ಗದಗ, ರಾಯಚೂರು, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹದಿನೈದಕ್ಕಿಂತಲೂ ಕಮ್ಮಿಯಿದೆ. ಇನ್ನು ಹಾವೇರಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೂನ್ಯ. ಬೆಂಗಳೂರಿನಲ್ಲಿ 11,423, ದಕ್ಷಿಣ ಕನ್ನಡ 341, ಉಡುಪಿ 290 ಸಕ್ರಿಯ ಪ್ರಕರಣಗಳಿವೆ. ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯಲ್ಲಿ 91 ಪ್ರಕರಣಗಳಿವೆ. ಇನ್ನು, ಹೊಸ ಸೋಂಕಿತರ ಸಂಖ್ಯೆ ಬಹುತೇಕ ಜಿಲ್ಲೆಗಳಲ್ಲಿ ನೂರರ ಗಡಿ ದಾಡುತ್ತಿಲ್ಲ. ಹಾಗಾಗಿ, ರಾಜ್ಯದ ಎಲ್ಲಾ ಕಡೆಗೂ ಕರ್ಫ್ಯೂ ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ.
ಬೆಂಗಳೂರಿನಲ್ಲಿ ದೈನಂದಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಗೊತ್ತಿದೆ
ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದ ಈಶ್ವರಪ್ಪ, "ಬೆಂಗಳೂರಿನಲ್ಲಿ ದೈನಂದಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಗೊತ್ತಿದೆ, ಅಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿ. ಅದಕ್ಕೆ ನಮ್ಮೆಲ್ಲರ ಸಹಕಾರವಿರಲಿದೆ. ಆದರೆ, ಇಡೀ ರಾಜ್ಯಕ್ಕೆ ಕರ್ಫ್ಯೂ ವಿಧಿಸಿರುವುದು ಎಷ್ಟು ಸರಿ? ಬೆಂಗಳೂರಿನಲ್ಲಿ ಖಂಡಿತ ಬಿಗಿಕ್ರಮ ತೆಗೆದುಕೊಳ್ಳಲಿ, ನಮ್ಮ ಆಕ್ಷೇಪಣೆವಿಲ್ಲ. ನಾಳೆ (ಜ 6) ಮುಖ್ಯಮಂತ್ರಿಗಳ ಜೊತೆ ಸಭೆಯಿದೆ. ಈ ವಿಚಾರದ ಬಗ್ಗೆ ಮಾತನಾಡುತ್ತೇನೆ"ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತ ಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆಗೆ ಮಾತನಾಡುತ್ತೇನೆ
"ರಾಜ್ಯದ ವಿವಿಧ ಭಾಗಗಳಿಂದ ನನಗೆ ದೂರವಾಣಿ ಕರೆಮಾಡಿ, ನಿಮ್ಮ ಸರಕಾರದ ನಿರ್ಧಾರ ಸರಿಯಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾವು ಯಾವ ಖರೀದಿಗೂ ಬೆಂಗಳೂರಿಗೆ ಹೋಗುವವರಲ್ಲ ಎಂದು ಹೇಳುತ್ತಿದ್ದಾರೆ. ವ್ಯಾಪಾರಸ್ಥರು ಈಗತಾನೇ ವ್ಯಾಪಾರ ಸುಧಾರಿಸುತ್ತಿದೆ. ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಬರುತ್ತಿವೆ"ಎಂದು ಈಶ್ವರಪ್ಪನವರು ಸರಕಾರದ ನಿರ್ಧಾರವನ್ನು ಆಕ್ಷೇಪಿಸಿದರು.
ನಾಳೆ ಸಚಿವ ಸಂಪುಟದ ಸಭೆಯನ್ನು ಕರೆಯಲಾಗಿದೆ
"ನಾಳೆ ಸಚಿವ ಸಂಪುಟದ ಸಭೆಯನ್ನು ಕರೆಯಲಾಗಿದೆ, ಸಾರ್ವಜನಿಕರ ಒಟ್ಟಾರೆ ಅಭಿಪ್ರಾಯವನ್ನು ಸಭೆಯ ಮುಂದೆ ಇಡುತ್ತೇನೆ. ದೈನಂದಿನ ಸಂಪಾದನೆಯನ್ನು ನಂಬಿಕೊಂಡವರು ಎಲ್ಲಿಗೆ ಹೋಗಬೇಕು? ಸಾರ್ವಜನಿಕರಿಗೆ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲು ಮನವರಿಕೆ ಮಾಡಿಕೊಡಬೇಕು, ಅದು ಬಿಟ್ಟು ಕರ್ಫ್ಯೂವಲ್ಲ"ಎಂದು ಈಶ್ವರಪ್ಪ ಹೇಳಿದರು.
ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಐದೂ ಇಲ್ಲ. ಹಾಗಾಗಿ, ಆ ಜಿಲ್ಲೆಗಳ ಜನರ ಆಕ್ರೋಶ ಸಹಜ. ಆದರೆ, ಸದ್ಯದ ಮಟ್ಟಿಗೆ ಸರಕಾರ ನಿರ್ಬಂಧವನ್ನು ಸಡಿಲಿಸುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.