ಆಡಿದ ಮಾತು ಹಿಂದಕ್ಕೆ ಪಡೆಯುವುದಿಲ್ಲ, 100 ಬಾರಿ ಜೈಲಿಗೆ ಹೋಗಲು ಸಿದ್ದ: ಈಶ್ವರಪ್ಪ
ಶಿವಮೊಗ್ಗ, ಆ 11: "ಆಗಸ್ಟ್ ಐದರಂದು, ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಭೂಮಿಪೂಜೆ ಮಾಡಿದ ದಿನ, ಸಮಸ್ತ ಹಿಂದೂಗಳು ಸಂತಸ ಪಡುವ ದಿನವಾಗಿತ್ತು" ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
"ಅಂದು ನಾನು ಮಥುರಾ ಮತ್ತು ಕಾಶಿ ವಿಚಾರದ ಬಗ್ಗೆ ಹೇಳಿಕೆಯನ್ನು ನೀಡಿದ್ದೆ. ಅದು ನನ್ನ ಮನಸ್ಸಿನ ಭಾವನೆಯಾಗಿತ್ತು. ಅದಕ್ಕೆ ನನಗೆ ವಿಷಾದವಿಲ್ಲ" ಎಂದು ಈಶ್ವರಪ್ಪ ಹೇಳಿದರು.
"ಮಧುರಾ ಮತ್ತು ಕಾಶಿ, ಹಿಂದೂಗಳ ಪವಿತ್ರ ಸ್ಥಳ. ಅಲ್ಲಿ ಮಂದಿರ ನಿರ್ಮಿಸುವ ಸಂಬಂಧ ನನ್ನನ್ನು ಬಂಧಿಸುವುದಾದರೆ, ನೂರು ಬಾರಿ ಜೈಲಿಗೆ ಹೋಗಲು ಸಿದ್ದ. ಆ ವಿಚಾರದಲ್ಲಿ ನಾನು ಆಡಿದ ಮಾತನ್ನು ಹಿಂದಕ್ಕೆ ಪಡೆಯುವುದಿಲ್ಲ"ಎಂದು ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಅನೇಕ ಹಿಂದೂಗಳ ಪ್ರತಿನಿಧಿಯಾಗಿ ನನ್ನ ಭಾವನೆಯನ್ನು ವ್ಯಕ್ತಪಡಿಸಿದ್ದೆ. ಡಿ.ಕೆ.ಶಿವಕುಮಾರ್ ಅವರು ನನ್ನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ, ಈಶ್ವರಪ್ಪ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ಆಗ್ರಹಿಸಿದ್ದರು. ಇದು ಅವರು ಮಾಡುತ್ತಿರುವ ರಾಜಕೀಯ ಅಲ್ಲವೇ"ಎಂದು ಈಶ್ವರಪ್ಪ ಪ್ರಶ್ನಿಸಿದರು.
"ಮಥುರಾ ಕ್ಷೇತ್ರ ಕೃಷ್ಣನ ಜನ್ಮಸ್ಥಾನ, ಕಾಶಿ, ವಿಶ್ವನಾಥ ನೆಲೆಸಿರುವ ಪುಣ್ಯಕ್ಷೇತ್ರ. ಅಂತಹ ದೇಗುಲಗಳನ್ನು ಕೆಡವಿ, ಅಲ್ಲಿ ಮಸೀದಿ ನಿರ್ಮಿಸಲಾಗಿದೆ. ಹಿಂದೂಗಳ ಭಾವನೆಗೆ ಮುಸ್ಲಿಮರು ಬೆಲೆ ಕೊಡಬೇಕು. ಹಾಗಾಗಿ, ಅಲ್ಲಿ, ಮಸೀದಿಗಳನ್ನು ಮುಕ್ತಗೊಳಿಸಬೇಕು"ಎಂದು ಈಶ್ವರಪ್ಪ ಹೇಳಿದ್ದರು.












Click it and Unblock the Notifications