ತೀರ್ಥಹಳ್ಳಿ ಸಹಜ ಸ್ಥಿತಿಗೆ, ಸಿಐಡಿ ತನಿಖೆ ಆರಂಭ
ಶಿವಮೊಗ್ಗ, ನ.5 : 8ನೇ ತರಗತಿ ವಿದ್ಯಾರ್ಥಿನಿ ನಂದಿತಾ ಅಪಹರಣ ಮತ್ತು ಕೊಲೆ ಪ್ರಕರಣದ ನಂತರ ಉದ್ವಿಗ್ನಗೊಂಡಿದ್ದ ತೀರ್ಥಹಳ್ಳಿ ಸಹಜ ಸ್ಥತಿಗೆ ಮರಳುತ್ತಿದೆ. ನ.10ರವರೆಗೆ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ಪೂರ್ವ ವಲಯ ಐಜಿಪಿ ಡಾ.ಜಿ.ಪರಶಿವಮೂರ್ತಿ ಅವರು ಬಾಲಕಿ ಮನೆಗೆ ಭೇಟಿ ನೀಡಲಿದ್ದಾರೆ.
ಬುಧವಾರ ತೀರ್ಥಹಳ್ಳಿಯಲ್ಲಿ ಅಂಗಡಿ, ಹೋಟೆಲ್ಗಳು ತೆರೆದಿದ್ದು, ಬಸ್ ಮತ್ತು ಆಟೋಗಳ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಮತ್ತು ಸ್ಥಳೀಯ ಬಿಜೆಪಿ ನಾಯಕರು ಬಾಲಕಿ ನಂದಿತಾ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಬಾಲಕಿ ಮನೆಗೆ ಭೇಟಿದ್ದರು. ಪ್ರಕರಣದ ತನಿಖೆಗೆ ಎಲ್ಲರೂ ಸಹಕಾರ ನೀಡಬೇಕು, ಬಾಲಕಿ ಸಾವಿನಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಅವರು ಕರೆ ನೀಡಿದ್ದಾರೆ. [ಸರ್ಕಾರಕ್ಕೆ ಆಯನೂರು ಕೇಳಿರುವ ಪ್ರಶ್ನೆಗಳು]
ಇಂದು ಬಂದ್ : ನಂದಿತಾ ಸಾವು ಖಂಡಿಸಿ ಇಂದು ಸಾಗರ ಬಂದ್ಗೆ ಕರೆ ನೀಡಲಾಗಿದೆ. ತೀರ್ಥಹಳ್ಳಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರ ಸಹ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನ.10ರ ತನಕ ಪಟ್ಟಣದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. [ನಂದಿತಾ ಸಾವು : ಯಾರು, ಏನು ಹೇಳಿದರು]
ಸೋಮವಾರ ಬಂದ್ ವೇಳೆ ನಡೆದ ಕಲ್ಲು ತೂರಾಟ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಂದಿತಾ ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಹಿರಂಗಗೊಂಡಿಲ್ಲ. ತೀರ್ಥಹಳ್ಳಿ ಮತ್ತು ಮಣಿಪಾಲ್ನಲ್ಲಿ ನಂದಿತಾಳಿಗೆ ಚಿಕಿತ್ಸೆ ನೀಡಿದ ವರದಿ ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದು ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.
ಸರ್ಕಾರ ಪ್ರಕರಣದ ತನಿಖೆಯನ್ನು ಮಂಗಳವಾರ ಸಿಐಡಿಗೆ ವಹಿಸಿದ್ದು, ಸಿಐಡಿ ಅಧಿಕಾರಿಗಳು ಸಂಜೆ ತೀರ್ಥಹಳ್ಳಿಗೆ ತೆರಳಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಸಿಐಡಿ ಐಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಹಲವು ಸಿಬ್ಬಂದಿ ತೀರ್ಥಹಳ್ಳಿಗೆ ತೆರಳಿದ್ದಾರೆ.












Click it and Unblock the Notifications