ಶಿವಮೊಗ್ಗದಲ್ಲಿ ಮಳೆ; ಸಂತ್ರಸ್ತರಿಗೆ ಸ್ಪಂದಿಸಲು ಸಚಿವರ ಸೂಚನೆ
ಶಿವಮೊಗ್ಗ, ಜುಲೈ 26; ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹಳ್ಳ, ನದಿಗಳು ತುಂಬಿ ಹೋಗಿದ್ದು, ಹಲವು ಕಡೆ ಅಪಾರ ನಷ್ಟವು ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು, ಬಳಿಕ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು.
ಬುಧವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮತ್ತು ಅಡಿಕೆ ಬೆಳೆಯ ಎಲೆಚುಕ್ಕಿ ರೋಗದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸಭೆಯನ್ನು ನಡೆಸಿದರು. ಶಿವಮೊಗ್ಗ ಮತ್ತು ರಿಪ್ಪನ್ಪೇಟೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, "ಪ್ರಸಕ್ತ ವಾರದಲ್ಲಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, ಅಧಿಕಾರಿಗಳು ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರವಾಗಿ ಮತ್ತು ಉದಾರವಾಗಿ ಸ್ಪಂದಿಸಿ ನಿಯಮಾನುಸಾರ ಪರಿಹಾರಗಳನ್ನು ಒದಗಿಸಬೇಕು" ಎಂದು ಸೂಚಿಸಿದರು.
ಪರಿಹಾರ ಒದಗಿಸಲು ಸೂಚನೆ; "ಈ ಬಾರಿ ಸ್ವಲ್ಪ ತಡವಾಗಿ ಮಳೆ ಆರಂಭವಾಗಿದೆ. ಅಂತಹ ಪ್ರಾಕೃತಿಕ ಹಾನಿಯಾಗಿಲ್ಲ. ಮಲೆನಾಡು ಭಾಗದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ, ಕೆಲವೆಡೆ ರಸ್ತೆ, ಸೇತುವೆ, ಬೆಳೆ ಹಾನಿ ಹೀಗೆ ಮೂಲಭೂತ ಸೌಕರ್ಯಗಳಿಗೆ ಹಾನಿ ಸಂಭವಿಸಿದ್ದು ಅಧಿಕಾರಿಗಳು ತಮ್ಮ ಕಾರ್ಯಸ್ಥಾನದಲ್ಲಿ ಎಚ್ಚರಿಕೆಯಿಂದಿದ್ದು ಶೀಘ್ರವಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕೆಂದು" ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾಡಿ ಡಾ. ಸೆಲ್ವಮಣಿ ಆರ್, "2023ರ ಮಾರ್ಚ್ 1 ರಿಂದ ಮೇ 31 ರವರೆಗೆ ಜಿಲ್ಲೆಯಲ್ಲಿ 82 ಮಿ. ಮೀ. ಮಳೆಯಾಗಿದೆ. ವಾಡಿಕೆ ಮಳೆ 127 ಇದ್ದು ಶೇ.36 ಮಳೆ ಕೊರತೆ ಕಂಡು ಬಂದಿದೆ. ಜೂನ್ ತಿಂಗಳಿನಲ್ಲಿ 472 ಮಿ. ಮೀ. ವಾಡಿಕೆಗೆ 120 ಮಿ. ಮೀ. ವಾಸ್ತವವಾಗಿ ಮಳೆಯಾಗಿದ್ದು ಶೇ.75 ಮಳೆ ಕೊರತೆ ಕಂಡುಬಂದಿದೆ" ಎಂದು ವಿವರಿಸಿದರು.
"ಕಳೆದ 24 ಗಂಟೆಯಲ್ಲಿ 22.3 ಮಿ. ಮೀ. ವಾಡಿಕೆಗೆ 58.4 ಮಿ. ಮೀ. ಮಳೆಯಾಗಿದ್ದು ಜಿಲ್ಲೆಯಲ್ಲಿ ಸರಾಸರಿ 162 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 1223.5 ಮಿ. ಮೀ. ವಾಡಿಕೆ ಮಳೆಗೆ 949.5 ಮಿ. ಮೀ. ವಾಸ್ತವ ಮಳೆಯಾಗಿದ್ದು ಶೇ.22 ಮಳೆ ಕೊರತೆಯಾಗಿದೆ" ಎಂದರು.
1/6/2023 ರಿಂದ 25/7/2023ರ ವರೆಗೆ ಜಿಲ್ಲೆಯಲ್ಲಿ 188 ಮನೆ ಭಾಗಶಃ ಹಾನಿಗೊಂಡಿವೆ. 8 ತೀವ್ರವಾಗಿ, 10 ಮನೆಗಳು ಪೂರ್ಣ ಹಾನಿಯಾಗಿದ್ದು ಒಟ್ಟು 206 ಮನೆ ಹಾನಿ ಮತ್ತು 34 ಕೊಟ್ಟಿಗೆ ಮನೆ ಹಾನಿಯಾಗಿದ್ದು, ಸರ್ಕಾರದ ನಿಯಮಾನುಸಾರ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ.
ಮಳೆ, ಕೃಷಿ ಚಟುವಟಿಕೆ; ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, "ಬಿತ್ತನೆ ಬೀಜದ ಕೊರತೆ ಇಲ್ಲ. 15500 ರೈತರು ಬೆಳೆ ವಿಮೆ ಮಾಡಿಸಿದ್ದು, 31/7/2023ರ ತನಕ ನೋಂದಣಿಗೆ ಸಮಯಾವಾಕಾಶ ಇದೆ" ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, "ಮಳೆ ಪರಿಹಾರ ಕುರಿತಾದ ಮಾರ್ಗಸೂಚಿ ಬಂದಿಲ್ಲದ ಕಾರಣ ಪರಿಹಾರ ತಡವಾಗುತ್ತಿದೆ. ಸಂತ್ರಸ್ತರಿಗೆ ವಿಳಂಬ ಮಾಡದೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
"ಕಳೆದ ಸಾಲಿನಲ್ಲಿ ಎಲೆಚುಕ್ಕಿ ರೋಗ ನಿಯಂತ್ರಣ ಕುರಿತಾದ ಸಂಶೋಧನೆಗೆ ರೂ. 10 ಕೋಟಿ ಅನುದಾನ ಇರಿಸಲಾಗಿದ್ದು ಈ ಬಾರಿ ಕೈಬಿಡಲಾಗಿದೆ. ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯದೆ ಹೋದರೆ ಹಾಗೂ ಔಷಧಿ ಸಿಂಪಡಿಸಲು ಕ್ರಮ ವಹಿಸದಿದ್ದರೆ ಅಡಿಕೆ ತೋಟಕ್ಕೆ ತೋಟವೇ ನಾಶವಾಗುತ್ತದೆ. ಆದ್ದರಿಂದ ಕೃಷಿ ಮತ್ತು ತೋಟಗಾರಿಕೆ ಕಾಲೇಜಿನಲ್ಲಿ ಸಂಶೋಧನೆಗೆ ಅವಕಾಶ ಮಾಡಿಕೊಡಬೇಕು" ಎಂದು ಆಗ್ರಹಿಸಿದರು.












Click it and Unblock the Notifications