ಗೂಂಡಾ ಡಿ.ಕೆ.ಶಿವಕುಮಾರ್, ಜಾತಿವಾದಿ ಸಿದ್ದರಾಮಯ್ಯ: ಈಶ್ವರಪ್ಪ ಮುಂದುವರಿದ ವಾಗ್ದಾಳಿ
ಶಿವಮೊಗ್ಗ, ಫೆ 19: ತಮ್ಮನ್ನು ಸಂಪುಟದಿಂದ ವಜಾ ಮಾಡಲು ಕಾಂಗ್ರೆಸ್ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ, ಇದ್ಯಾವುದಕ್ಕೂ ಜಗ್ಗದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕೈನಾಯಕರ ವಿರುದ್ದ ವಾಗ್ದಾಳಿ ಮುಂದುವರಿಸಿದ್ದಾರೆ.
ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಈಶ್ವರಪ್ಪ, "ಮುಂಬರುವ ಚುನಾವಣೆಯಲ್ಲಿ ನೀವೆಲ್ಲಾ ಟಿಕೆಟ್ ಬೇಕೆಂದು ಅಪೇಕ್ಷಿಸುವುದು ತಪ್ಪಲ್ಲ. ಆದರೆ, ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿ ಆಯ್ಕೆಯಾದ ನಂತರ ಅವರ ಪರವಾಗಿ ಹಗಲಿರುಳು ಶ್ರಮಿಸಬೇಕು" ಎಂದು ಕರೆ ನೀಡಿದರು.
"ರಾಜ್ಯ ಮತ್ತು ದೇಶ ನಮ್ಮನ್ನು ಬಿಟ್ಟು (ಬಿಜೆಪಿ) ಬೇರೆಲ್ಲೂ ಹೋಗಲು ಸಾಧ್ಯವಿಲ್ಲ. ಕರ್ನಾಟಕ ವಿಧಾನಸಭೆಗೆ ನಮ್ಮನ್ನು ಬಿಟ್ಟು ಬೇರೆ ಯಾರು ಬರಲು ಸಾಧ್ಯ? ಆ ಗೂಂಡಾ ಡಿ.ಕೆ.ಶಿವಕುಮಾರ್ ಬರ್ತಾನಾ ಅಥವಾ ಆ ಜಾತಿವಾದಿ ಸಿದ್ದರಾಮಯ್ಯ ಬರ್ತಾನಾ" ಎಂದು ಈಶ್ವರಪ್ಪ ಪ್ರಶ್ನಿಸಿದರು.

"ಭದ್ರಾವತಿಯಲ್ಲಿ ಕುರಿಗಳ ರೀತಿಯಲ್ಲಿ ಕಾಂಗ್ರೆಸ್ಸಿನವರು ಕಚ್ಚಾಡುತ್ತಿರುವುದನ್ನು ನೀವೆಲ್ಲಾ ನೋಡಿದ್ದೀರಾ. ಗೂಂಡಾ ಮತ್ತು ಜಾತಿವಾದಿಗಳನ್ನು ದೂರವಿರಿಸಿ ಭದ್ರಾವತಿ ರಾಷ್ಟ್ರೀಯ ವಿಚಾರಗಳಿಗೆ ಆದ್ಯತೆ ನೀಡುವ ಪಕ್ಷಕ್ಕೆ ಒಲಿಯುವಂತಾಗಬೇಕು" ಎಂದು ಈಶ್ವರಪ್ಪ, ಕಾರ್ಯಕರ್ತರಲ್ಲಿ ಆಗ್ರಹಿಸಿದ್ದಾರೆ.
"ನಾವು ಆ ಹೊಲಸು ಬಾಯಿ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಿರಿ ಎಂದು ಸರ್ಕಾರಕ್ಕೆ ಕೇಳುತ್ತಿಲ್ಲ. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬುದು ನಮ್ಮ ಆಗ್ರಹ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದರು.
ಶುಕ್ರವಾರ (ಫೆ 18) ವಿಧಾನಸಭೆಯಲ್ಲಿ ಈಶ್ವರಪ್ಪ ವಜಾ ಆಗ್ರಹಿಸಿ ಕಾಂಗ್ರೆಸ್ ಸದಸ್ಯರ ಗದ್ದಲ ಮುಂದುವರೆದ ಕಾರಣ ಕಲಾಪವನ್ನು ಫೆಬ್ರವರಿ 21ಕ್ಕೆ ಮುಂದೂಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದರು.
ಅಹೋರಾತ್ರಿ ಧರಣಿ ಕೈ ಬಿಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ ಮನವಿಗೆ ಕಾಂಗ್ರೆಸ್ ನಾಯಕರು ಒಪ್ಪಿಗೆ ನೀಡಿರಲಿಲ್ಲ. ಕಾಂಗ್ರೆಸ್ ಪಕ್ಷದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಫೆಬ್ರವರಿ 21ರವರೆಗೂ ಮುಂದುವರೆಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ.












Click it and Unblock the Notifications