ಬಿಎಸ್ ವೈ-ಡಿಕೆಶಿ ದೋಸ್ತಿ ಬೇರೆ, ಚುನಾವಣಾ ಅಖಾಡ ಬೇರೆ:ಮಧು ಬಂಗಾರಪ್ಪ
ಶಿವಮೊಗ್ಗ, ಮಾರ್ಚ್ 15: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿದಿದ್ದು, ಅಖಾಡ ರಂಗೇರುತ್ತಿದೆ.
ಈ ಕುರಿತು ಮಾತನಾಡಿದ ಮಧುಬಂಗಾರಪ್ಪ, ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈತ್ರಿ ಪಕ್ಷದಲ್ಲಿ ಯಾವುದೇ ಅಪಪ್ರಚಾರವಾಗಿಲ್ಲ. ಈ ಬಾರಿಯ ಚುನಾವಣೆ ಬಹಳ ಕುತೂಹಲ ಕೆರಳಿಸಿದೆ. ಸಚಿವ ಡಿ.ಕೆ. ಶಿವಕುಮಾರ್ ಖುದ್ದಾಗಿ ಶಿವಮೊಗ್ಗದಲ್ಲಿ ಟಿಕಾಣಿ ಹೂಡುವುದರಿಂದ ಚುನಾವಣೆಗೆ ಚಾರ್ಮ್ ಬರಲಿದೆ ಎಂದರು.

ಬಿ.ಎಸ್.ಯಡಿಯೂರಪ್ಪ ಮತ್ತು ಡಿಕೆಶಿ ನಡುವೆ ಹಳೆಯ ದೋಸ್ತಿಯಿದ್ದು, ಅವರು ಶಿವಮೊಗ್ಗಕ್ಕೆ ಬರುವುದು ಅನುಮಾನ ಅಂತ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಡಿಕೆಶಿ ಖುದ್ದಾಗಿ ನನ್ನ ಬಳಿ ಬರುವುದಾಗಿ ಹೇಳಿದ್ದಾರೆ. ಬಂದೇ ಬರ್ತಾರೆ.
ಕಳೆದ ಬಾರಿ ಪಕ್ಷ ಶಿವಕುಮಾರ್ ಅವರಿಗೆ ಬಳ್ಳಾರಿ ಉಸ್ತುವಾರಿಯ ಜವಬ್ದಾರಿ ಹೆಗಲ ಮೇಲೆ ವಹಿಸಿದ್ದರಿಂದ ಉಪಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಬರಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಬಂದೇ ಬರ್ತಾರೆ. ನಮಗೂ ಅನಿವಾರ್ಯವಿದೆ ಎಂದರು.

ಬಿಎಸ್ ವೈ ಮತ್ತು ಡಿಕೆಶಿಯ ದೋಸ್ತಿ ಬೇರೆ, ಚುನಾವಣಾ ಅಖಾಡ ಬೇರೆ. ಮುಂದೊಂದು ದಿನ ನಾವು ಬಿಎಸ್ ವೈ ಮನೆಗೆ ಅಥವಾ ಅವರ ಕುಟುಂಬ ನಮ್ಮ ಮನೆಗೆ ಬರುವ ಅವಕಾಶ ಬರಬಹುದು. ಇದು ಗೆಳೆತನವಷ್ಟೇ, ಚುನಾವಣೆ ಬೇರೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications