ತೀರ್ಥರಾಮೇಶ್ವರ ದೇಗುಲದಲ್ಲಿ ಪುರಾತನ ಕಾಲದ ವಸ್ತುಗಳು ಪತ್ತೆ
ಕರ್ನಾಟಕದಲ್ಲೇ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ತೀರ್ಥ ರಾಮೇಶ್ವರ ದೇವಾಲಯದ ಜೀರ್ಣೋದ್ಧಾರದ ವೇಳೆ ಹಳೆ ವಸ್ತುಗಳು ಪತ್ತೆಯಾಗಿವೆ.
ತೀರ್ಥಹಳ್ಳಿ, ಮೇ 25: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ರಾಮೇಶ್ವರ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದೆ. ಆ ಜೀರ್ಣೋದ್ಧಾರ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಹಳೆಯ ಕಾಲದ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ದೇವಾಲಯದ ಚಾವಡಿ ಕಲ್ಲಿನ ಕೆಳಗೆ ಈ ವಸ್ತುಗಳು ದೊರೆತಿವೆ.
ತಾಮ್ರದ ನಾಲ್ಕು ಬಿಂದಿಗೆ, ಎರಡು ದೊಡ್ಡ ತಪ್ಪಲೆ, ಹಿತ್ತಾಳೆ ವಸ್ತುಗಳು, ತಾಮ್ರ ಹಾಗೂ ಕಂಚಿನ ಹರಿವಾಣ, ಆರತಿ ತಟ್ಟೆ ಮತ್ತಿತರ ವಸ್ತುಗಳು ದೊರೆತಿವೆ. ತೀರ್ಥ ರಾಮೇಶ್ವರ ದೇವಾಲಯವು ವಿಜಯನಗರ ಕಾಲದ್ದಾಗಿದ್ದು, ಮಳೆ ಬಂದ ವೇಳೆಯಲ್ಲಿ ಸೋರಿಕೆ ಆಗಿತ್ತಿತ್ತು. ಕಳೆದ ಹಲವು ವರ್ಷಗಳಿಂದ ದೇಗುಲ ಜೀರ್ಣೋದ್ಧಾರ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು.[ಮೇ 2ರಿಂದ ಆಗುಂಬೆ ಮೂಲಕ ಶಿವಮೊಗ್ಗ-ಉಡುಪಿ ಬಸ್ ಸಂಚಾರ]
ಆದರೆ, ಈ ಬಾರಿ ಜಾತ್ರೆ ಆದ ನಂತರ ಜೀರ್ಣೋದ್ಧಾರ ಕೆಲಸವನ್ನು ಕೈಗೆತ್ತಿಕೊಳ್ಳಲಾಯಿತು. ಅಂದಹಾಗೆ ದೇಗುಲದಲ್ಲಿ ಈ ವಸ್ತುಗಳು ಸಿಕ್ಕ ಸುದ್ದಿ ಹರಡಿದ ನಂತರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಸಮಿತಿಯ ಮತ್ತಿತರ ಸದಸ್ಯರು ಸ್ಥಳಕ್ಕೆ ಬಂದಿದ್ದರು. ಕುತೂಹಲದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಕೂಡ ಭೇಟಿ ನೀಡಿದ್ದಾರೆ.