ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮೌನ ಮುರಿದ ಮಧು ಬಂಗಾರಪ್ಪ!
ಶಿವಮೊಗ್ಗ, ಮಾರ್ಚ್ 02: ಸೊರಬ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಕರ್ನಾಟಕದ ರಾಜಕೀಯದಲ್ಲಿ ಹಲವು ದಿನಗಳಿಂದ ಹಬ್ಬಿದೆ. ಈ ಕುರಿತು ಮಧು ಬಂಗಾರಪ್ಪ ಕೊನೆಗೂ ಮೌನ ಮುರಿದಿದರು.
ಇಂದು ಮಧು ಬಂಗಾರಪ್ಪ ಅವರ ಹುಟ್ಟುಹಬ್ಬ. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಇರುವ ಮನೆಯಲ್ಲಿ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು "ಹಿತೈಷಿಗಳು, ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಬೇಕಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯೊಳಗೆ ನಿರ್ಧಾರ ಪ್ರಕಟಸುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಪಕ್ಷ ಬಿಡುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, "ನಾನಿನ್ನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಕುಮಾರಸ್ವಾಮಿ ಅವರು ರಾಜಕೀಯವಾಗಿ ಬೆಳಸಿದ್ದಾರೆ. ಅವರನ್ನು ಹೆಚ್ಚು ಪ್ರೀತಿಸುತ್ತೇನೆ. ಜೆಡಿಎಸ್ ಬಿಟ್ಟು ಬರುವ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ" ಎಂದರು.

ನನಗೇನು ಸಮಸ್ಯೆ ಆಗಿಲ್ಲ
"ಜೆಡಿಎಸ್ ಪಕ್ಷದಲ್ಲಿ ತಮಗೇನು ಸಮಸ್ಯೆ ಆಗಿಲ್ಲ. ಆದರೆ, ಅಧಿಕಾರದಲ್ಲಿದ್ದಾಗ ಕಾರ್ಯಕರ್ತರಿಗೆ ಅಧಿಕಾರ ಸಿಗಲಿಲ್ಲ. ಶಿವಮೊಗ್ಗದ ಉದಾಹರಣೆಯನ್ನು ಹೇಳುವುದಾದರೆ ಶ್ರೀಕಾಂತ್ ಅವರಿಗೆ ಅಧಿಕಾರ ಕೊಡಬಹುದಾಗಿತ್ತು. ಆದರೆ ಹಾಗಾಗಲಿಲ್ಲ" ಎಂದು ಮಧು ಬಂಗಾರಪ್ಪ ಹೇಳಿದರು.

ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ
"ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ವೇದಾ ವಿಜಯ ಕುಮಾರ್ ಅವರಿಗೆ ಕೆಲವು ಮಾತು ಕೊಟ್ಟು ಬೆಂಬಲ ಪಡೆದುಕೊಳ್ಳಲಾಯಿತು. ಆದರೆ ಈ ತನಕ ಆ ಭರವಸೆ ಈಡೇರಿಸಲು ಆಗಲಿಲ್ಲ. ಈ ರೀತಿ ಕೆಲವು ತಪ್ಪುಗಳಾಗಿರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿದ್ದೆ. ಇದನ್ನು ಕುಮಾರಸ್ವಾಮಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ" ಎಂದು ಮಧು ಬಂಗಾರಪ್ಪ ತಿಳಿಸಿದರು.

ಚುನಾವಣೆ ಬಂದಾಗ ಬದಲಾವಣೆ ತಪ್ಪು
ಮಧು ಬಂಗಾರಪ್ಪ ಅವರು "ಚುನಾವಣೆ ವೇಳೆ ಪಕ್ಷ ಬಿಟ್ಟು ಬೇರೆ ಪಕ್ಷ ಸೇರ್ಪಡೆಯಾಗುವುದು ಸರಿಯಲ್ಲ. ಯಾರೂ ಕೂಡ ಆ ರೀತಿ ಮಾಡಬಾರದು. ಬಂಗಾರಪ್ಪ ಅವರು ಒಂದೆರಡು ಬಾರಿ ಹಾಗೆ ಮಾಡಿದ್ದರು. ಅವರಿಗೆ ಆ ಶಕ್ತಿ ಇತ್ತು" ಎಂದರು.

ಕಾಂಗ್ರೆಸ್ ಮುಖಂಡರಿಂದ ಶುಭಾಶಯ
ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕಾಂಗ್ರೆಸ್ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಜಿ. ಡಿ. ಮಂಜುನಾಥ್, ಎನ್. ರಮೇಶ್, ಎಸ್. ಪಿ. ದಿನೇಶ್ ಸೇರಿದಂತೆ ಹಲವರು ಶುಭಾಶಯ ಕೋರಲು ಆಗಮಿಸಿದ್ದರು.












Click it and Unblock the Notifications