ಪ್ರೇಮ ಪ್ರಕರಣ; ಯುವತಿ ಆತ್ಮಹತ್ಯೆ, ಪ್ರಿಯಕರನ ಕೊಂದ ಅಣ್ಣಂದಿರು!
ಶಿವಮೊಗ್ಗ, ಡಿಸೆಂಬರ್ 17: ಶಿವಮೊಗ್ಗ ನಗರದ ಹರಿಗೆಯಲ್ಲಿರುವ ಕೆಇಬಿ ಕ್ವಾಟ್ರಸ್ ಹಿಂಭಾಗದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 15ರಂದು ಕಾರ್ತಿಕ್ ಎಂಬ ಯುವಕನನ್ನು ಹತ್ಯೆ ಮಾಡಲಾಗಿತ್ತು.
ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. 23 ವರ್ಷದ ಕಾರ್ತಿಕ್ ಪ್ರೀತಿಸುತ್ತಿದ್ದ ಅಮೃತಾ ಎಂಬ ಯುವತಿಯ ಸಹೋದರರು ಈ ಹತ್ಯೆಯನ್ನು ಮಾಡಿದ್ದಾರೆ. ಈ ಮೂಲಕ ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿದೆ.
ಅಮೃತಾ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರರಕರಣ ದಾಖಲಾಗಿತ್ತು. ಕಾರ್ತಿಕ್ ಹತ್ಯೆ ಹಿಂದೆ ಅಮೃತಾ ಕುಟುಂಬದವರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದರು, ಅದು ನಿಜವಾಗಿದೆ.

ಹರಿಗೆ ಕೆಇಬಿ ವಸತಿ ಸಮುಚ್ಚಯದ ಹಿಂಭಾಗ ಮಂಗಳವಾರ ಗೋಪಾಲ ಟಿಪ್ಪು ನಗರ ನಿವಾಸಿ ಕಾರ್ತಿಕ್ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಬಳಿಯ ಸುಭಾಷ್ ಬಡಾವಣೆಯ ಸಂತೋಷ್, ಮಂಜು, ಕಿರಣ್, ಶರತ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಅಮೃತಾ ಸಹೋದರ. ಕಾರ್ತಿಕ್ ಮತ್ತು ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಾರ್ತಿಕ್ ಬೇರೆ ಮದುವೆಯಾಗಲು ಸಿದ್ಧತೆ ನಡೆಸಿದ್ದ. ಈ ವಿಷಯ ತಿಳಿದು ಅಮೃತಾ ಆತ್ಮಹತ್ಯೆ ಮಾಡಿಕೊಂಡಿದ್ದಳು.
ತಂಗಿಯ ಸಾವಿಗೆ ಕಾರಣನಾದ ಕಾರ್ತಿಕ್ನನ್ನು ಕೊಲ್ಲಲು ಸಂತೋಷ್ ಸಂಚು ರೂಪಿಸಿದ್ದ. ಸಂತೋಷ್ ಮತ್ತು ಆತನ ಸ್ನೇಹಿತರು ಮಂಗಳವಾರ ಹರಿಗೆ ಬಳಿ ಕಾರ್ತಿಕ್ನನ್ನು ಕರಸಿಕೊಂಡು ಕೊಲೆ ಮಾಡಿ, ಪರಾರಿಯಾಗಿದ್ದರು.
ಕೊಲೆ ಪ್ರಕರಣದ ತನಿಖೆ ಆರಂಭಿಸಿದ ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್ ನೇತೃತ್ವದ ತಂಡ ಎರಡು ದಿನದಲ್ಲಿಯೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications