ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಬೆಂಗಳೂರು, ಜನವರಿ 3: ಮಂಗನಕಾಯಿಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹಾಮಾರಿ ಮಂಗನ ಕಾಯಿಲೆ ಪ್ರತಿ ವರ್ಷ ಕನಿಷ್ಠ 10 ಮಂದಿ ಮೃತಪಡುತ್ತಿದ್ದಾರೆ, ಆದರೆ ಇದುವರೆಗೂ ಅದಕ್ಕೆ ನಿಖರವಾದ ಚಿಕಿತ್ಸೆ ಲಭ್ಯವಾಗಿಲ್ಲ. ಸಾಗರದಲ್ಲಿ ಮೂವರು ಹಾಗೂ ತೀರ್ಥಹಳ್ಳಿಯಲ್ಲಿ ಒಬ್ಬರು ಈ ರೋಗಕ್ಕೆ ಬಲಿಯಾಗಿದ್ದಾರೆ. ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್(47), ವಾಟೆಮಕ್ಕಿಯ ಕೃಷ್ಣಪ್ಪ(54) ಕಂಚಿಕಾಯಿ ಮಂಜುನಾಥ್ (24) ಹಾಗೂ ತೀರ್ಥಹಳ್ಳಿಯ ಸುಂದರಿ ಎಂಬುವವರು ಮೃತಪಟ್ಟಿದ್ದಾರೆ,
ಬೇಸಿಗೆ ಬಂತೆಂದರೆ ಸಾಕು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಇದೀಗ ಬೇಸಿಗೆಗೂ ಮುನ್ನವೇ ಚಳಿಗಾಲದಲ್ಲೇ ಆರಂಭವಾಗಿದೆ. ಜೊತೆಗೆ ಸಾಗರಕ್ಕೂ ಈ ಕಾಯಿಲೆ ವ್ಯಾಪಿಸಿದೆ. ಮಂಗನಕಾಯಿಲೆ ಹರಡದಂತೆ ಲಸಿಕೆ ಹಾಕಿಸಿಕೊಳ್ಳಲಾಗುತ್ತಿದೆ. ಕಳೆದ ಬಾರಿಯೂ ನಾಲ್ವರು ಈ ಕಾಯಿಲೆಯಿಂದ ಮೃತಪಟ್ಟಿದ್ದರು.

ಮಂಗಗಳಿಗೆ ಜ್ವರ ಬಂದು ಸತ್ತಾಗ ಆ ಮಂಗಗಳಲ್ಲಿದ್ದ ಉಣ್ಣೆಗಳು ಬಂದು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ನಾಲ್ಕು ದಶಕಗಳ ಹಿಂದೆ ಮೊದಲಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಬಳಿಕ ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾಗರ ತಾಲೂಕಿಗೂ ವ್ಯಾಪಿಸಿದೆ. ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗುತ್ತಿತ್ತು.












Click it and Unblock the Notifications