ನ. 21ರಿಂದ ಕುಂದಾಪ್ರ ಕಾರ್ಟೂನು ಹಬ್ಬ
ಕುಂದಾಪುರ, ನ. 15: ಇಲ್ಲಿಯ ಕಲಾಮಂದಿರದಲ್ಲಿ ನ. 21 ಹಾಗೂ 22ರಂದು 'ಕುಂದಾಪ್ರ ಕಾರ್ಟೂನು ಹಬ್ಬ- 14' ಆಯೋಜಿಸಲಾಗಿದೆ. 22ರಂದು ಮಧ್ಯಾಹ್ನ 2.30ರಿಂದ 4.30ರ ವರೆಗೆ ವಿದ್ಯಾರ್ಥಿಗಳಿಗಾಗಿ ವ್ಯಂಗ್ಯಚಿತ್ರ ಕಾರ್ಯಾಗಾರ ಆಯೋಜಿಸಲಾಗಿದೆ.
ಕಾರ್ಟೂನು ಪ್ರದರ್ಶನ: ಕಾರ್ಯಕ್ರಮದಲ್ಲಿ ಕುಂದಾಪುರ ಮೂಲದ ಹಲವು ವ್ಯಂಗ್ಯಚಿತ್ರಕಾರರು ಚಿತ್ರಿಸಿರುವ ವ್ಯಂಗ್ಯಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವ್ಯಂಗ್ಯಚಿತ್ರದಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಸ್ಥಳದಲ್ಲಿಯೇ ವ್ಯಂಗ್ಯಚಿತ್ರ ರಚಿಸುವ ಕಾರ್ಯಾಗಾರ ಆಯೋಜಿಸಲಾಗಿದೆ. ಆಸಕ್ತರು ಈ ಕುರಿತು ವಿವರಣೆಗಳನ್ನು ಕೇಳಿ ತಿಳಿದುಕೊಳ್ಳಬಹುದು. ಕ್ಯಾರಿಕೇಚ್ ಕೂಪನ್ ಪಡೆದವರಿಗೆ ಸ್ಥಳದಲ್ಲಿಯೇ ವ್ಯಂಗ್ಯಚಿತ್ರ ರಚಿಸಿಕೊಡಲಾಗುವುದು.
ಸ್ಪರ್ಧೆಗಳು: ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗಾಗಿಯೇ ವ್ಯಂಗ್ಯಚಿತ್ರಗಳಿಗೆ ಡೈಲಾಗ್ ಬರೆಯೋ ಸ್ಪರ್ಧೆ ಹಾಗೂ ಕ್ಯಾರಿಕೇಚರ್ ರಚನಾ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಬಹುಮಾನ ನೀಡಲಾಗುವುದು.
ಸಂಕಲನ ಬಿಡುಗಡೆ: ಕುಂದಾಪುರ ಮೂಲದವರು ರಚಿಸಿದ ವ್ಯಂಗ್ಯಚಿತ್ರಗಳ ಸಂಕಲನ ಬಿಡುಗಡೆ ಮಾಡಲಾಗುವುದು. ಈ ಪುಸ್ತಕ ಖರೀದಿಸಿದವರಲ್ಲಿ ಅದೃಷ್ಟಶಾಲಿಗಳಿಗೆ ಆಕರ್ಷಕ ಕೊಡುಗೆಯೂ ಇದೆ.
ಸೆಲ್ಫಿ ಕಾರ್ನರ್: ಫೇಸ್ ಬುಕ್, ಟ್ವಿಟರ್ನಲ್ಲಿ ಪ್ರದರ್ಶಿಸಲು ಅಥವಾ ವೈಯಕ್ತಿಕ ಸಂಗ್ರಹಕ್ಕಾಗಿ ಸೆಲ್ಫೀ ಕಾರ್ನರ್ ಅವಕಾಶವೂ ಇದೆ.
ಭಾಗವಹಿಸುವ ಖ್ಯಾತ ವ್ಯಂಗ್ಯಚಿತ್ರಕಾರರು: ಮುಂಬಯಿಯ ಪಂಜು ಗಂಗೊಳ್ಳಿ, ಕುಂದಾಪುರದ ಸತೀಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ, ಗಣೇಶ ಹೆಬ್ಬಾರ್, ಕೇಶವ ಸಸಿಹಿತ್ಲು, ಬೆಂಗಳೂರಿನ ಚಂದ್ರ ಗಂಗೊಳ್ಳಿ, ಸಂಜಯ ಮೊವಾಡಿ, ಸುರೇಶ ಕೋಟ, ಸಂತೋಷ ಸಸಿಹಿತ್ಲು, ಜಯರಾಂ ಉಡುಪ, ಗಂಗೊಳ್ಳಿಯ ಕಲೈಕಾರ್, ರವಿಕುಮಾರ್, ಸಾಸ್ತಾನದ ದಿನೇಶ ಹೊಳ್ಳ, ಸುಧೀಂದ್ರ ತೆಕ್ಕಟ್ಟೆ, ಚಂದ್ರ ಕೋಡಿ, ಕುಂಭಾಶಿಯ ರಾಮಕೃಷ್ಣ ಹೇರ್ಳೆ.