ಮಧು ವಿರುದ್ಧ ಕುಮಾರ್ ಬಂಗಾರಪ್ಪ ಪ್ರತಿಭಟನೆ
ಶಿವಮೊಗ್ಗ, ಮಾ.28 : ಲೋಕಸಭೆ ಚುನಾವಣೆ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರರ ನಡುವಿನ ಬಹಿರಂಗ ಸಮರ ಮುಂದುವರೆದಿದೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು ಎಂದು ಕೆಲವು ದಿನಗ ಹಿಂದೆ ವಿವಾದವೆಬ್ಬಿಸಿದ್ದ ಕುಮಾರ್ ಬಂಗಾರಪ್ಪ, ಶುಕ್ರವಾರ ಮಧು ಬಂಗಾರಪ್ಪ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಕುಟುಂಬದ ಜಗಳವನ್ನು ಪುನಃ ಬೀದಿಗೆ ತಂದಿದ್ದಾರೆ.
ಶುಕ್ರವಾರ ಶಿವಮೊಗ್ಗ ನಗರದ ಹೊರಭಾಗದಲ್ಲಿರುವ ಶರಾವತಿ ಡೆಂಟಲ್ ಕಾಲೇಜು ಮುಂಭಾಗ ನೂರಾರು ಬೆಂಬಲಿಗರ ಜೊತೆ ಕುಮಾರ್ ಬಂಗಾರಪ್ಪ ಮಧು ಬಂಗಾರಪ್ಪ ವಿರುದ್ಧ ಪ್ರತಿಭಟನೆ ನಡೆಸಿದರು. ಮಧು ಬಂಗಾರಪ್ಪ ಅಕ್ರಮವಾಗಿ ಶರಾವತಿ ಎಜುಕೇಷನ್ ಟ್ರಸ್ಟ್ ಆಸ್ತಿ ಮಾರಾಟ ಮಾಡಿದ್ದಾರೆ ಎಂಬುದು ಕುಮಾರ್ ಬಂಗಾರಪ್ಪ ಅವರ ಆರೋಪ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಮಧು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶರಾವತಿ ಎಜುಕೇಷನ್ ಟ್ರಸ್ಟ್ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಅಕ್ರಮ ನಡೆಸಿರುವ ಮಧು ಬಂಗಾರಪ್ಪ ಈ ಕೂಡಲೇ ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. [ಕುಮಾರ್ ಬಂಗಾರಪ್ಪ ಅಸಮಾಧಾನ ಶಮನ]
ಶರಾವತಿ ಡೆಂಟಲ್ ಕಾಲೇಜು ಇರುವ ಸ್ಥಳ ಈಡಿಗ ಸಮುದಾಯದ ಆಸ್ತಿಯಾಗಿದೆ. ಈಡಿಗ ಸಮುದಾಯದ ಅಭಿವೃದ್ಧಿಗಾಗಿ ಸುಮಾರು 150 ಎಕರೆ ಆಸ್ತಿಯನ್ನು ಮೀಸಲಿಡಲಾಗಿತ್ತು. ಸದ್ಯ ಕೇವಲ 15 ಎರಕೆ ಆಸ್ತಿ ಇದೆ ಎಂದು ಮಧು ಬಂಗಾರಪ್ಪ ಹೇಳುತ್ತಿದ್ದಾರೆ. ಉಳಿದ ಆಸ್ತಿಗಳನ್ನು ಮಧು ಮಾರಾಟ ಮಾಡಿ, ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಕು.ಬಂಗಾರಪ್ಪ ಆರೋಪಿಸಿದರು.
ಈಡಿಗ ಸಮುದಾಯಕ್ಕೆ ಸೇರಿದ ಈ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಈಡಿಗ ಟ್ರಸ್ಟ್ ರಚಿಸಲಾಗಿತ್ತು. ಆದರೆ, ಮಧು ಬಂಗಾರಪ್ಪ ನಕಲಿ ದಾಖಲೆ ಸೃಷ್ಠಿಸಿ ಭೂಮಿಯನ್ನು ನಿವೇಶಗಳಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಿದ್ದಾರೆ ಎಂದು ಕುಮಾರ್ ಬಂಗಾರಪ್ಪ ದೂರಿದರು.
ಮಧು ಬಂಗಾರಪ್ಪ ಟ್ರಸ್ಟ್ ಅಧ್ಯಕ್ಷರಾಗಿದ್ದು, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಟ್ರಸ್ಟ್ ನಲ್ಲಿದ್ದ ಹಲವು ಸದಸ್ಯರನ್ನು ತೆಗೆದುಹಾಕಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಕು.ಬಂಗಾರಪ್ಪ ಹೇಳಿದರು. ಟ್ರಸ್ಟ್ ವಿಚಾರದಲ್ಲಿ ವ್ಯಾಪಕ ಗೋಲ್ ಮಾಲ್ ನಡೆದಿದ್ದು, ಇದನ್ನು ಸಿಓಡಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಡಿಜಿ ನಾರಾಯಣಪ್ಪ, ಕಾಂಗ್ರೆಸ್ ಮುಖಂಡರಾದ ಶಿವಾನಂದಪ್ಪ, ತಬಲಿ ಬಂಗಾರಪ್ಪ, ಇಕ್ಕೇರಿ ರಮೇಶ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications