ಯಡಿಯೂರಪ್ಪ ಕೃಷ್ಣ ಪರಮಾತ್ಮನಾದ ಕ್ಷಣ...
ಶಿವಮೊಗ್ಗ, ಜ.6: ಅಜನ್ಮ ವೈರಿಗಳ ರೀತಿ ವರ್ತಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ತಮ್ಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಗಳಸ್ಯ ಕಂಠಸ್ಯ ಎಂಬಂತೆ ಬದಲಾಗಿ ಅಚ್ಚರಿ ಮೂಡಿಸಿದ್ದಾರೆ.
ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಾ ಡೈಲಾಗ್ ಕಿಂಗ್ ಗಳೆನಿಸಿದ್ದ ಶಿವಮೊಗ್ಗದ ರಾಜಕೀಯ ನಾಯಕರು ಮತ್ತೊಮ್ಮೆ ಅಕ್ಕ ಪಕ್ಕ ಜನುಮದ ಜೋಡಿ ರೀತಿಯಲ್ಲಿ ಕುಳಿತು ಜನತೆಯ ಮುಂದೆ 'ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ.. ಲೋಕದಲ್ಲಿ ಸ್ನೇಹ ಚಿರಂಜೀವಿ' ಎಂದು ಹಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇಬ್ಬರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಸ್ಪರ ಹೊಗಳಿಕೆ, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬಿಜೆಪಿಗೆ ಮರು ಸೇರ್ಪಡೆಯಾಗಿರುವ ಬಿ.ಎಸ್.ಯಡಿಯೂರಪ್ಪರನ್ನು ಅವರ ಸಮ್ಮುಖದಲ್ಲಿಯೇ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೊಗಳಿಕೆಯ ಮಹಾಪೂರ ಹರಿಸಿದರು. ಯಡಿಯೂರಪ್ಪರನ್ನು ಶ್ರೀಕೃಷ್ಣ ಪರಮಾತ್ಮನಿಗೆ ಹೋಲಿಕೆ ಮಾಡಿ ಹಾಡಿ ಕೊಂಡಾಡಿದರು. ಯಡಿಯೂರಪ್ಪ ಕೂಡಾ ಕುರುಕ್ಷೇತ್ರ ಯುದ್ಧಕ್ಕೆ ಸಿದ್ಧರಾದ ಪಾರ್ಥ-ಅರ್ಜುನನ ಕಲ್ಪನೆಯಲ್ಲಿ ಮುಳುಗಿಬಿಟ್ಟಿದ್ದರು. ದೂರದಲ್ಲಿ ಯಾರೋ ಕೃಷ್ಣ ಕೃಷ್ಣಾ ಎಂದು ಕೆನ್ನೆ ಬಡಿದು ಕೊಂಡಿದ್ದು ಮಾತ್ರ ಯಾರಿಗೂ ಕಾಣಿಸಲಿಲ್ಲ.

ಈಶ್ವರಪ್ಪ ಉವಾಚ: 'ಸಮರಾಂಗಣದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಮಾರ್ಗದರ್ಶನ ಮಾಡಿದಂತೆ ಬಿ.ಎಸ್.ಯಡಿಯೂರಪ್ಪರವರು ನಮಗೂ (ಬಿಜೆಪಿ) ಮಾರ್ಗದರ್ಶನ ಮಾಡಲಿ. ಭಗವದ್ಗೀತೆಯಲ್ಲಿ ಬರುವ ಶ್ರೀಕೃಷ್ಣನಂತೆ ಯಡಿಯೂರಪ್ಪ ನಮ್ಮನ್ನೆಲ್ಲ (ಬಿಜೆಪಿ) ಮುನ್ನಡೆಸಲಿ. ನಾಡಿನ ಸಾಧು-ಸಂತರ ಆಶೀರ್ವಾದವೂ ಅವರಿಗಿದೆ' ಎಂದು ಹೇಳಿದರು.
ಶಿವಮೊಗ್ಗ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಕರ್ನಾಟಕ ಭಗವದ್ಗೀತಾ ಅಭಿಯಾನ ಸಮಿತಿ ಆಯೋಜಿಸಿದ್ದ ಶ್ರೀಮದ್ಭಗವದ್ಗೀತಾ ಸಮರ್ಪಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು ಭಗವದ್ಗೀತೆ ವಾಚನದ ಮೂಡ್ ನಲ್ಲಿದ್ದರು.
ಬಿಎಸ್ ವೈ ಮುಖ್ಯಮಂತ್ರಿಯಾಗಿದ್ದ ವೇಳೆ ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ಮುಂದಾದರು. ಮಠ-ಮಾನ್ಯ ಗಳಿಗೆ ಸರಕಾರದಿಂದ ಅನುದಾನ ನೀಡಿದರು. ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಮುಕ್ತಕಂಠ ದಿಂದ ಹೊಗಳಿದರು.
ಬಿಎಸ್ ವೈ ಉವಾಚ: ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಸೇರ್ಪಡೆಯಾದ ನಂತರ ಇದೇ ಪ್ರಥಮ ಬಾರಿಗೆ ಈಶ್ವರಪ್ಪ ಬಗ್ಗೆ ಮೆಚ್ಚುಗೆ ಮಾತನಾಡಿ, 'ನಾವಿಬ್ಬರೂ ಜೊತೆಯಾಗಿ ಈ ಪವಿತ್ರವಾದ ಸಮಾರಂಭದಲ್ಲಿ ಒಂದಾಗಿ ಕುಳಿತು ಕೊಂಡಿರುವುದು ಸಂತಸವನ್ನುಂಟು ಮಾಡಿದೆ' ಎಂದರು.











Click it and Unblock the Notifications