ಆರಗ ಜ್ಞಾನೇಂದ್ರ ಹೇಳಿಕೆಗೆ ಕಿಮ್ಮನೆ ರತ್ನಾಕರ್ ತಿರುಗೇಟು
ಶಿವಮೊಗ್ಗ, ಆಗಸ್ಟ್ 27; "ಹೆಣ್ಣು ಮಕ್ಕಳು ಮನೆಯಲ್ಲೇ ಇರಿ ಎಂದು ಹೇಳಿಕೆ ನೀಡಲು ಪೊಲೀಸ್ ವ್ಯವಸ್ಥೆ ಬೇಕಾ?" ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಪ್ರಶ್ನಿಸಿದ್ದಾರೆ.
ಶುಕ್ರವಾರ ಹೊಸನಗರ ತಾಲೂಕು ನಗರ ಹೋಬಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, "ಆರಗ ಜ್ಞಾನೇಂದ್ರ ತಮ್ಮನ್ನು ತಾವು ಸರಿಪಡಿಸಿಕೊಳ್ಳಬೇಕು. ತೀರ್ಥಹಳ್ಳಿ ಕ್ಷೇತ್ರದ ಜನರ ಘನತೆ, ಗೌರವ ಉಳಿಸಬೇಕು" ಎಂದು ಸಲಹೆ ನೀಡಿದರು.
"ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ನಮ್ಮನ್ನು ಬೈದುಕೊಂಡು ಓಡಾಡುತ್ತಿದ್ದರು. ಈಗ ಅದನ್ನೇ ಮಾಡಿಕೊಂಡು ರಾಜ್ಯದಲ್ಲಿ ಓಡಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಅತ್ಯಾಚಾರಕ್ಕೂ ಏನು ಸಂಬಂಧ?. ಕಾಂಗ್ರೆಸ್ ಪಕ್ಷದವರು ತಮ್ಮ ಮೇಲೆ ಅತ್ಯಾಚಾರ ಮಾಡಿದರು? ಎಂದು ಹೇಳುವುದು ಎಷ್ಟು ಸರಿ. ಗೃಹ ಸಚಿವ ಸ್ಥಾನಕ್ಕೆ ತಕ್ಕ ಪ್ರಬುದ್ಧತೆಯನ್ನು ತೋರಿಸಬೇಕು" ಎಂದರು.

ಪಕ್ಷದ ಪರ ಹೇಳಿಕೆ ನೀಡಬಾರದು; "ಆರಗ ಜ್ಞಾನೇಂದ್ರ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಹೇಳಿಕೆ ನೀಡಬಾರದು. ರಾಜ್ಯದ ಆರು ಕೋಟಿ ಜನರನ್ನು ಗಮನದಲ್ಲಿ ಇರಿಸಿಕೊಂಡು ಮಾತನಾಡಬೇಕು. ಅಧಿಕಾರದಲ್ಲಿದ್ದಾಗ ಒಂದು ಪಕ್ಷದ ಪರವಾದ ಹೇಳಿಕೆ ನೀಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆಯಿಂದ ವಿವಾದವನ್ನು ಅವರೇ ಮೈಮೇಲೆ ಎಳದುಕೊಂಡಿಕೊಂಡಿದ್ದಾರೆ" ಎಂದು ಹೇಳಿದರು.
"ಬಂಗಾರದ ಅಂಗಡಿಯವರು ರಾತ್ರಿ ಹೊತ್ತಲ್ಲೂ ವ್ಯಾಪಾರ ಮಾಡುತ್ತಾರೆ. ದರೋಡೆ ನಡೆಯುತ್ತೆ ಎಂದು ಹಗಲು ಹೊತ್ತಲ್ಲೂ ಬಾಗಿಲು ಹಾಕಿಕೊಂಡೇ ಇರಲು ಸಾಧ್ಯವೇ. ಬಾಗಿಲು ಹಾಕಿಕೊಂಡು ಇರಿ ಎಂದು ಹೇಳಲು ಪೊಲೀಸ್ ವ್ಯವಸ್ಥೆ ಬೇಕಾ. ಅದೇ ರೀತಿ ಹೆಣ್ಣು ಮಕ್ಕಳು ಮನೆಯಲ್ಲೇ ಇರಿ ಎಂದು ಹೇಳಲು ಪೊಲೀಸ್ ವ್ಯವಸ್ಥೆ ಬೇಕಾ. ಅವರ ಕುಟುಂಬದವರೇ ಹೆಣ್ಣು ಮಕ್ಕಳ ರಕ್ಷಣೆ ಮಾಡಿಕೊಳ್ಳುತ್ತಾರೆ" ಎಂದು ಕಿಮ್ಮನೆ ರತ್ನಾಕರ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.
"ಆರಗ ಜ್ಞಾನೇಂದ್ರ ವಿರುದ್ಧವೇ ಐದು ಕ್ರಿಮಿನಲ್ ಕೇಸುಗಳಿವೆ. ಕೋಮುಗಲಭೆ ಸಂಬಂಧ ಅವರ ವಿರುದ್ಧ ಕ್ರಿಮಿನಲ್ ಕೇಸುಗಳಿದ್ದು, ಅವರೊಬ್ಬ ಆರೋಪಿ" ಎಂದು ಕಿಮ್ಮನೆ ರತ್ನಾಕರ್ ದೂರಿದರು.
"ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಯಿಂದ ತೀರ್ಥಹಳ್ಳಿಯ ಘನತೆಗೆ ಕುಂದು ಬರುತ್ತಿದೆ. ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ, ಗೋಪಾಲಗೌಡರು ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ನೋಡಲಿ. ಅವರ ಹೇಳಿಕೆಗಳು ಜಾತಿ, ಧರ್ಮ, ಪಕ್ಷದ ಮೇಲೆ ನಿಲ್ಲುತ್ತಿರಲಿಲ್ಲ. ಮನುಷ್ಯತ್ವ, ಮಾನವತವಾದದ ಮೇಲೆ ಅವರ ಹೇಳಿಕೆ ಇರುತ್ತಿದ್ದವು. ಇವುಗಳನ್ನು ಆರಗ ಜ್ಞಾನೇಂದ್ರ ಅವರು ಗಮನಿಸಿ ತೀರ್ಥಹಳ್ಳಿ ಕ್ಷೇತ್ರದ ಜನರ ಘನತೆ, ಗೌರವ ಉಳಿಸಬೇಕು" ಎಂದರು












Click it and Unblock the Notifications