ಧರ್ಮಸ್ಥಳದಲ್ಲಿ ಆಣೆ ಮಾಡಲು ಬಿಎಸ್ವೈಗೆ ಕಿಮ್ಮನೆ ಚಾಲೇಂಜ್
ಶಿವಮೊಗ್ಗ, ನ.6 : ಕರ್ನಾಟಕದಲ್ಲಿ ಪುನಃ ಆಣೆ-ಪ್ರಮಾಣದ ರಾಜಕೀಯ ಆರಂಭವಾಗಿದೆ. ವಿದ್ಯಾರ್ಥಿನಿ ನಂದಿತಾ ನಿಗೂಢ ಸಾವಿಗೆ ಸಂಬಂಧಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಅವರು ಇಂದು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕು ಎಂದು ಅವರು ಆಹ್ವಾನ ನೀಡಿದ್ದಾರೆ.
ಕಿಮ್ಮನೆ ರತ್ನಾಕರ್ ಅವರು ಗುರುವಾರ ತೀರ್ಥಹಳ್ಳಿಯಲ್ಲಿರುವ ರಾಮೇಶ್ವರ, ಮಾರಿಕಾಂಬಾ ಸೇರಿದಂತೆ ನಾಲ್ಕು ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ 1001 ರೂಪಾಯಿ ಕಾಣಿಕೆ ಹಾಕಿ ನಾನು ನಂದಿತಾ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ, ಆರೋಪಿಗಳನ್ನು ರಕ್ಷಣೆಯೂ ಮಾಡಿಲ್ಲ. ತಪ್ಪು ಮಾಡಿದವರು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿ ಎಂದು ಪ್ರಮಾಣ ಮಾಡಿದರು. [ನಂದಿತಾ ಸಾವಿಗೆ ಕಂಬನಿ ಮಿಡಿದ ತೀರ್ಥಹಳ್ಳಿ]

ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ದೇವಾಲಯದಲ್ಲಿ ನಾನು ನನ್ನ ತಪ್ಪಿಲ್ಲ ಎಂದು ಪ್ರಮಾಣ ಮಾಡಿದ್ದೇನೆ. ಇದೇ ರೀತಿ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕು, ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು. [ಶೋಭಾ ಕರಂದ್ಲಾಜೆ ಆರೋಪವೇನು?]
ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಿಷ್ಟು
* ನಂದಿತಾ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಆರೋಪಿಗಳ ರಕ್ಷಣೆಯೂ ಮಾಡಿಲ್ಲ. ತಪ್ಪು ಮಾಡಿದವರು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿ.
* ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ಜನರಿಗೆ ಸತ್ಯ ತಿಳಿಸುತ್ತೇನೆ. ತೀರ್ಥಹಳ್ಳಿಯಿಂದ ಮೃಗವಧೆ, ತೀರ್ಥಹಳ್ಳಿಯಿಂದ ಧರ್ಮಸ್ಥಳದ ತನಕ ಪಾದಯಾತ್ರೆ ಮಾಡುವೆ.
* ಬಿಜೆಪಿ ನಾಯಕರು ಕೋಮು ದಳ್ಳುರಿ ಹಚ್ಚಲು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಾರೆ.
* ನನ್ನ ವಿರುದ್ಧದ ಆರೋಪ ಸಾಬೀತಾದರೆ ಶಾಸಕ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.
* ಸಂಸದರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ನನ್ನ ವಿರುದ್ಧ ಹಲವಾರು ಆರೋಪ ಮಾಡುತ್ತಿದ್ದಾರೆ.
* ಬಿಎಸ್ವೈ ಮತ್ತು ಶೋಭಾ ಕರಂದ್ಲಾಜೆ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ದೇವರ ಮುಂದೆ ಪ್ರಮಾಣ ಮಾಡಲಿ.
* ನಾನು ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತೇನೆ.
* ಪಾದಯಾತ್ರೆ ನಡುವೆ ಶಾಲೆಗಳಿಗೆ ಭೇಟಿ ನೀಡುತ್ತೇನೆ.












Click it and Unblock the Notifications