Rain Alert: ಶಿವಮೊಗ್ಗದಲ್ಲಿ ವರುಣ ಮೃದಂಗ, ರೆಡ್ ಅಲರ್ಟ್: ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆ
ಶಿವಮೊಗ್ಗ, ಜೂನ್ 16: ರಾಜ್ಯದಲ್ಲಿ ಮೇ ತಿಂಗಳಾಂತ್ಯದಲ್ಲಿ ವ್ಯಾಪಕ ಮಳೆ ಸುರಿಸಿದ್ದ ಪೂರ್ವ ಮುಂಗಾರು ಮಳೆ ಬೆನ್ನಲ್ಲೆ ಆಗಮಿಸಿದ ನೈಋತ್ಯ ಮುಂಗಾರು ಮಳೆಗೆ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳು ತಲ್ಲಣಗೊಂಡಿವೆ. ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಜೀವ ಹಾನಿ ಜೊತೆಗೆ ಗುಡ್ಡ ಕುಸಿತ ಘಟನೆಗಳು ಜರುಗಿವೆ. ಶಿವಮೊಗ್ಗ ಜಿಲ್ಲೆ 'ರೆಡ್ ಅಲರ್ಟ್'ನಿಂದ 'ಆರೆಂಜ್ ಅಲರ್ಟ್' ಮರಳಿದ್ದು, ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಇಂದು (ಜೂನ್ 16) ಜಿಲ್ಲೆಯ ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕರಾವಳಿ, ಮಲೆನಾಡಿನ ಸುಮಾರು ಒಂಭತ್ತು ಜಿಲ್ಲೆಗಳಿಗೆ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ ಐದು ದಿನವು ಮುಂದುವರಿಯಲಿದೆ. ಶಿವಮೊಗ್ಗದ ಆಗುಂಬೆ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಗುಡ್ಡ ಕುಸಿಯುವ ಭೀತ, ಪ್ರವಾಹ ಆತಂಕ ಎದುರಾದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಗರ ಹಾಗೂ ಹೊಸ ನಗರ ತಾಲೂಕುಗಳ ಶಾಲೆಗಳಿಗೆ ಎರಡು ತಾಲೂಕುಗಳ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ.

ಈ ರಜೆ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯವಾಗುತ್ತದೆ. ಅಂಗನವಾಡಿ ಕೇಂದ್ರಗಳು ಸಹ ಇಂದು ಸೋಮವಾರ ಒಂದು ದಿನದ ಮಟ್ಟಿಗೆ ರಜೆ ಪಡೆದಿವೆ. ರಾಜ್ಯದ ವಿವಿಧೆಡೆ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಕರಾವಳಿ, ಮಲೆನಾಡಿನಲ್ಲಿ ಹೆಚ್ಚಿರುವ ಕಾರಣ, ಕೊಡಗು, ಚಿಕ್ಕಮಗಳೂರು, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಶಾಲೆಗಳಿಗೆ ಭಾನುವಾರವೇ ರಜೆ ಘೋಷಣೆ ಆಗಿದೆ.
3 ಕಡೆ ಗುಡ್ಡ ಕುಸಿತ: ಜನರಲ್ಲಿ ಆತಂಕ
ಉತ್ತರ ಕನ್ನಡ, ಶಿರಸಿ, ಶೃಂಗೇರಿ ತಾಲೂಕು ವ್ಯಾಪ್ತಿಯು ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಗುಡ್ಡ ಕುಸಿದಿದೆ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಉಂಟಾಗಿದೆ. ಕರಾವಳಿಯಲ್ಲಿ 50 ವರ್ಷದ ವೃದ್ಧ ಹಾಗೂ ಮಗು ನೀರಲ್ಲಿ ಕೊಚ್ಚಿ ಹೋಗಿದೆ. ಮಳೆ ತಗ್ಗುವವರೆಗೂ ವಿವಿಧ ಭಾಗಗಳಲ್ಲಿ ಪ್ರವಾಹ ಸ್ಥಿತಿ ಹತೋಟಿಗೆ ಬರುವಂತೆ ಕಾಣುತ್ತಿಲ್ಲ.
ಮಲೆನಾಡಿನ ಭಾಗದಲ್ಲಿ ಮಳೆಗೆ ವಿದ್ಯುತ್ ಪ್ರವಹಿಸಿ ಎರಡು ಆನೆಗಳು ಮೃತಪಟ್ಟ ಬಗ್ಗೆ ವರದಿ ಆಗಿದೆ. ಈಗಾಗಲೇ ತಿರ್ಥಹಳ್ಳಿ-ಉಡುಪಿ ಸಂಪರ್ಕಿಸುವ ಆಗುಂಬೆ ಘಾಟ್ ಅನ್ನು ಮುಂದಿನ ಮೂರುವರೆ ತಿಂಗಳವರೆಗೆ (ಸೆಪ್ಟಂಬರ್ 30) ಭಾರೀ ವಾಹನಗಳಿಗೆ ಸಂಚಾರ ಬಂದ್ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.












Click it and Unblock the Notifications