ಈಶ್ವರಪ್ಪಗೆ ಮತ್ತಷ್ಟು ಕಗ್ಗಂಟಾದ ಶಿವಮೊಗ್ಗ ನಗರ ಟಿಕೆಟ್
ಶಿವಮೊಗ್ಗ, ಮಾರ್ಚ್ 13: ರಾಜ್ಯ ಮಟ್ಟದ ನಾಯಕರಾಗಿದ್ದರೂ ಸಹ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ಗಾಗಿ ಪೈಪೋಟಿ ಎದುರಿಸುತ್ತಿರುವ ಕೆ.ಎಸ್.ಈಶ್ವರಪ್ಪಗೆ ಟಿಕೆಗ್ಗಾಗಿ ಇನ್ನೊಬ್ಬ ಆಂತರಿಕ ಎದುರಾಳಿ ನಿರ್ಮಾಣವಾಗಿದ್ದಾರೆ.
ಪ್ರಸ್ತುತ ಯಡಿಯೂರಪ್ಪ ಅವರ ಪರಮಾಪ್ತ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ರುದ್ರೇಗೌಡ ಹಾಗೂ ಈಶ್ವರಪ್ಪ ಅವರ ನಡುವೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆದಿತ್ತು. ಆದರೆ ಈಗ ಅದೇ ಕ್ಷೇಪತ್ರಕ್ಕೆ ಬಿಜೆಪಿಯ ಹಿರಿಯ ಕಾರ್ಯಕರ್ತ ಜ್ಯೋತಿ ಪ್ರಕಾಶ್ ಅವರು 'ನಾನೂ ಟಿಕೆಟ್ ಆಕಾಂಕ್ಷಿ' ಎಂದು ಹೇಳಿದ್ದಾರೆ.
ರಾಜ್ಯಸಭೆಗೆ ರುದ್ರೇಗೌಡ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಈಶ್ವರಪ್ಪ
30 ವರ್ಷಗಳಿಂದ ಬಿಜೆಪಿಯಲ್ಲಿರುವ ಜ್ಯೋತಿ ಪ್ರಕಾಶ್ ಅವರು ಎಪಿಎಂಸಿ ಅಧ್ಯಕ್ಷರಾಗಿದ್ದು, ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಅನ್ನು ತಮಗೆ ನೀಡಬೇಕೆಂದು ಕೇಂದ್ರ ಮುಖಂಡರು ಹಾಗೂ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ರಾಜ್ಯ ಮುಖಂಡರಿಗೂ ಪತ್ರ ಬರೆದಿದ್ದಾರೆ.
ಈಗಾಗಲೇ ಟಿಕೆಟ್ಗಾಗಿ ರುದ್ರೇಗೌಡ ಅವರೊಂದಿಗೆ ತಿಕ್ಕಾಟದಲ್ಲಿ ಹೈರಾಣಾಗಿರುವ ಈಶ್ವರಪ್ಪ ಅವರು ಈಗ ಜ್ಯೋತಿ ಪ್ರಕಾಶ್ ಅವರನ್ನೂ ಎದುರಿಸಬೇಕಾಗಿದೆ.
ರುದ್ರೇಗೌಡ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಶಿವಮೊಗ್ಗ ನಗರ ಟಿಕೆಟ್ ಅನ್ನು ಈಶ್ವರಪ್ಪ ಅವರಿಗೇ ನೀಡುತ್ತಾರೆ ಎಂಬ ಊಹಾಪೋಹಗಳು ನಿನ್ನೆ (ಮಾರ್ಚ್ 13) ಜೋರಾಗಿ ಕೇಳಿ ಬಂದಿದ್ದವು. ರಾಜ್ಯಸಭೆಗೆ ಆಯ್ಕೆ ಮಾಡುವುದಾದರೆ ಒಪ್ಪಿಗೆ ಇರುವುದಾಗಿ ರುದ್ರೇಗೌಡ ಅವರು ಹೇಳಿದ್ದರು. ಆದರೆ ಆ ನಂತರ ನಡೆದ ಬೆಳವಣಿಗೆಯಲ್ಲಿ ರಾಜೀವ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಯಿತು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದರಿಂದ ರುದ್ರೇಗೌಡ ಅವರು ಮತ್ತೆ ವಿಧಾನಸಭೆ ಚುನಾವಣೆಯತ್ತಲೇ ದೃಷ್ಠಿ ನೆಟ್ಟಂತಾಗಿದ್ದು, ಈಶ್ವರಪ್ಪಗೆ ನೆಮ್ಮದಿ ಇಲ್ಲದಂತಾಗಿದೆ. ರುದ್ರೇಗೌಡ ಅವರು ಈಶ್ವರಪ್ಪ ಅವರ ವಿರುದ್ಧ ಬಹಿರಂಗವಾಗಿಯೇ ತೊಡೆ ತಟ್ಟಿದ್ದು, ಈಶ್ವರಪ್ಪಗೆ ಟಿಕೆಟ್ ಕೊಟ್ಟರೆ ಸಹಕಾರ ಕೊಡದಿರುವ ಸಾಧ್ಯತೆ ಹೆಚ್ಚಿದೆ. ಈಶ್ವರಪ್ಪ ಅವರೂ ಕೂಡ ತಮಗೆ ಟಿಕೆಟ್ ನಿರಾಕರಿಸಿದರೆ ಅಥವಾ ಬೇರೆ ಕ್ಷೇತ್ರ ಕೊಟ್ಟರೆ ರಾಯಣ್ಣ ಬ್ರಿಗೆಡ್ ಪ್ರಾರಂಭಿಸುವುದಾಗಿ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
'ಆರ್ಎಸ್ಎಸ್ ನಿಷೇಧಿಸಲು ಸಿದ್ದರಾಮಯ್ಯರಿಂದ ಸಾಧ್ಯವಾ?'
ಇದೀಗ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಜ್ಯೋತಿ ಪ್ರಕಾಶ್ ಆಗಮನವಾಗಿದ್ದು, ಹೈಕಮಾಂಡ್ ಏನು ನಿರ್ಣಯ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.