ಶಿವಮೊಗ್ಗ ನಗರ; ಅಭ್ಯರ್ಥಿ ಹುಡುಕುವುದೇ ಜೆಡಿಎಸ್ಗೆ ಸವಾಲು!
ಶಿವಮೊಗ್ಗ, ಮಾರ್ಚ್ 31; ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಘೋಷಣೆ ಮಾಡಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ. ಜೆಡಿಎಸ್ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಚುನಾವಣಾ ಸಿದ್ಧತೆ ಆರಂಭಿಸಿತ್ತು. 123 ಸ್ಥಾನಗಳಲ್ಲಿ ಜಯಗಳಿಸುವ ಗುರಿಯೊಂದಿಗೆ ಪಕ್ಷ ಪ್ರಚಾರ ಕೈಗೊಂಡಿದೆ.
ಈ ಬಾರಿಯ ಚುನಾವಣೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ಗೆ ಅಷ್ಟು ಸುಲಭವಿಲ್ಲ. ಸೂಕ್ತ ನಾಯಕರು ಇಲ್ಲದೇ ಪಕ್ಷ ಸೊರಗುತ್ತಿದೆ. ಪಕ್ಷದ ಜಿಲ್ಲಾ ನಾಯಕರಾಗಿದ್ದ ಮಧು ಬಂಗಾರ, ಆರ್. ಎಂ. ಮಂಜುನಾಥ ಗೌಡ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅತ್ತ ಭದ್ರಾವತಿ ಕ್ಷೇತ್ರದ ಪಕ್ಷದ ನಾಯಕರಾಗಿದ್ದ ಅಪ್ಪಾಜಿ ಗೌಡರು ನಿಧನ ಹೊಂದಿದ್ದು, ಅವರಿಲ್ಲದೇ ಮೊದಲ ಚುನಾವಣೆ ಎದುರಿಸಬೇಕಿದೆ.

ಇತ್ತ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಾಗಿ ಜೆಡಿಎಸ್ ಹುಡುಕಾಡ ನಡೆಸುತ್ತಿದೆ. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಕೆ. ಎಸ್. ಈಶ್ವರಪ್ಪ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುತ್ತದೆಯೋ? ಇಲ್ಲವೋ ಎಂಬುದು ಖಚಿತವಾಗಿಲ್ಲ. ಮತ್ತೊಂದು ಕಡೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಹಲವರು ಬಿಜೆಪಿ ಟಿಕೆಟ್ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಆದರೆ ಜೆಡಿಎಸ್ ಪಕ್ಷದ ಕಥೇಯೇ ಬೇರೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ ಬೇರೆ ಅಭ್ಯರ್ಥಿಯಾಗಿ ಹುಡುಕಾಟ ನಡೆದಿದೆ. ಕ್ಷೇತ್ರದಲ್ಲಿ ಜೆಡಿಎಸ್ ಅಂತಹ ಪ್ರಭಾವ ಹೊಂದಿಲ್ಲ. 2018ರಲ್ಲಿ ಪಕ್ಷದ ಅಭ್ಯರ್ಥಿ ಹೆಚ್. ಎನ್. ನಿರಂಜನ್ ಕ್ಷೇತ್ರದಲ್ಲಿ ಪಡೆದಿದ್ದು ಕೇವಲ 5796 ಮತಗಳು.

ಜೆಡಿಎಸ್ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಸತೀಶ್ ಮತ್ತು ನಾಗರಾಜ್ ಕಂಕಾರಿ ಇವರಲ್ಲಿ ಒಬ್ಬರನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಬಿಜೆಪಿಯಿಂದ ಕೆ. ಎಸ್. ಈಶ್ವರಪ್ಪ ಅಭ್ಯರ್ಥಿಯಾದರೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು. ಕಾಂಗ್ರೆಸ್ ಮತ್ತು ಬಿಜೆಪಿ ಎದುರಿಸಲು ಸರಿಯಾದ ಅಭ್ಯರ್ಥಿಯೇ ಬೇಕು ಎಂದು ಜೆಡಿಎಸ್ ಹುಡುಕಾಟ ನಡೆಸಿದೆ.
ಪಟ್ಟಿ ಬಿಡುಗಡೆ; ಜೆಡಿಎಸ್ ಈ ಬಾರಿಯ ಚುನಾವಣೆಗೆ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇರದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಶಿಕಾರಿಪುರ, ಶಿವಮೊಗ್ಗ ನಗರ, ಸಾಗರ, ಸೊರಬ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಬಾಕಿ ಇದೆ.
ಕ್ಷೇತ್ರದ ರಾಜಕೀಯ ಚಿತ್ರಣ; ಶಿವಮೊಗ್ಗ ನಗರ ಕ್ಷೇತ್ರ ಇದುವರೆಗೂ 14 ಚುನಾವಣೆಗಳನ್ನು ಕಂಡಿದೆ. 8 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆರು ಬಾರಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜೆಡಿಎಸ್ ಇದುವರೆಗೂ ಇಲ್ಲಿ ಗೆದ್ದಿಲ್ಲ. ಆದರೆ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಮತ್ತು ಸೊರಬದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದರು. 2013ರ ಚುನಾವಣೆಯಲ್ಲಿ ಸೊರಬ, ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿಯಿಂದ ಮೂವರು ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಆದರೆ ಶಿವಮೊಗ್ಗ ನಗರದಲ್ಲಿ ಪಕ್ಷ ಗೆದ್ದಿಲ್ಲ. 2013ರಲ್ಲಿ ಎಂ. ಶ್ರೀಕಾಂತ್ ಶಿವಮೊಗ್ಗ ನಗರದ ಅಭ್ಯರ್ಥಿಯಾಗಿ 21,638 ಮತಗಳನ್ನು ಪಡೆದಿದ್ದರು.
ಶಿವಮೊಗ್ಗ ನಗರ ಕ್ಷೇತ್ರ ಬ್ರಾಹ್ಮಣರ ಹಿಡಿತದಲ್ಲಿದೆ ಎಂಬ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ 14 ಚುನಾವಣೆಗಳಲ್ಲಿ 8 ಬಾರಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳೇ ಆಯ್ಕೆಯಾಗಿ ಬಂದಿದ್ದಾರೆ. ಬ್ರಾಹ್ಮಣರು, ಮುಸ್ಲಿಮರು, ಎಸ್ಸಿ ಮತ್ತು ಎಸ್ಟಿ, ಲಿಂಗಾಯತರು ಕ್ಷೇತ್ರದ ಶಾಸಕರು ಯಾರಾಗಬೇಕು? ಎಂದು ನಿರ್ಧರಿಸುತ್ತಾರೆ. 1989ರ ಚುನಾವಣೆಯಲ್ಲಿ ಬಿಜೆಪಿ ಆರ್ಎಸ್ಎಸ್ಗೆ ನಿಷ್ಠರಾಗಿದ್ದ ಕೆ. ಎಸ್. ಈಶ್ವರಪ್ಪಗೆ ಟಿಕೆಟ್ ನೀಡಿತು. 1302 ಮತಗಳ ಅಂತರದಿಂದ ಅವರು ಗೆದ್ದು ಶಾಸಕರಾದರು. ಇದೇ ಕ್ಷೇತ್ರದಲ್ಲಿ 6 ಬಾರಿ ಗೆದ್ದಿರುವ ಅವರು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಹೇಳಿಕೆಗಳಿಂದ ರಾಜ್ಯಾದ್ಯಂತ ಸುದ್ದಿಯೂ ಆಗಿದ್ದಾರೆ.












Click it and Unblock the Notifications