ಭದ್ರಾವತಿಯಲ್ಲಿ ಕೊರೊನಾ ತಪಾಸಣೆಗೆ ಸಹಕರಿಸದ ಇಟಲಿ ಪ್ರವಾಸಿಗರು
ಶಿವಮೊಗ್ಗ, ಮಾರ್ಚ್ 17: ಕೊರೊನಾ ವೈರಸ್ ತಪಾಸಣೆಗೆ ಮುಂದಾದ ವೈದ್ಯರಿಗೆ ಸಹಕರಿಸದೆ ಇಟಲಿ ಪ್ರವಾಸಿಗರು ತೆರಳಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದೆ.
ಇಟಲಿಯಿಂದ ಭದ್ರಾವತಿಗೆ ಆಗಮಿಸಿದ್ದ ಇಬ್ಬರು ಪ್ರವಾಸಿಗರು, ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿದ್ದಾಗ ವಿದೇಶಿ ಪ್ರವಾಸಿಗರನ್ನು ಗಮನಿಸಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು.
ಶಿವಮೊಗ್ಗದ ಮಹಿಳೆಗೆ ಕೊರೊನಾ ವೈರಸ್ ನೆಗೆಟಿವ್
ಇಟಲಿ ಪ್ರವಾಸಿಗರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕರೆದೊಯ್ದರು. ಆದರೆ ಆಸ್ಪತ್ರೆಯಲ್ಲಿ ತಪಾಸಣೆಗೆ ಈ ಪ್ರವಾಸಿಗರು ಒಪ್ಪಲಿಲ್ಲ.
ಈ ಬಗ್ಗೆ ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದು, ಪೊಲೀಸರು ಆಸ್ಪತ್ರೆಗೆ ಬರುವ ಮೊದಲೇ ವೈದ್ಯಕೀಯ ತಪಾಸಣೆಗೆ ಸಹಕರಿಸದೇ ಆಸ್ಪತ್ರೆಯಿಂದ ಪ್ರವಾಸಿಗರು ಹೊರನಡೆದಿದ್ದಾರೆ.
ಇಟಲಿ ಪ್ರವಾಸಿಗರು ಬಸ್ಸಿನಲ್ಲಿ ಮೈಸೂರಿಗೆ ತೆರಳಿರುವ ಸಾಧ್ಯತೆ ಇದ್ದು, ಇಟಲಿ ಪ್ರವಾಸಿಗರ ಆಗಮನದಿಂದಾಗಿ ಭದ್ರಾವತಿ ಜನರಲ್ಲಿ ಆತಂಕ ಹೆಚ್ಚಿದೆ. ಏಕೆಂದರೆ ಇಟಲಿಯಲ್ಲಿ ಕೊರೊನಾ ವೈರಸ್ ಭಾರೀ ಅವಾಂತರ ಸೃಷ್ಟಿಸಿದೆ.