ರಾಜಕೀಯ ನಿವೃತ್ತಿ ಘೋಷಿಸಿದ ಕಿಮ್ಮನೆ ರತ್ನಾಕರ್
ಭಾನುವಾರ ರೋಟರಿ ಕ್ಲಬ್ ಕಸ್ತೂರ ಬಾ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದರಿ ಯುವ ಸಂಸತ್ ಅಧಿವೇಶನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ನನಗೆ ನೀಡಿದ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುವುದು ಮಾತ್ರ ನನಗೆ ತಿಳಿದಿದೆ. ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದು ಇಷ್ಟವಿಲ್ಲ ಎಂದು ಹೇಳಿದರು.
ಸಚಿವರಿಗೆ ತಾವು ನಿರ್ವಹಿಸುವ ಖಾತೆಗಳ ಬಗ್ಗೆ ಆಳವಾದ ಅಧ್ಯಯನ ಇರಬೇಕಾಗುತ್ತದೆ. ಆದರೆ, ಇಂದಿನ ರಾಜಕಾರಣದಲ್ಲಿ ಹಾರ-ತುರಾಯಿ ಹಾಕಿಸಿಕೊಂಡು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೆಲಸವನ್ನು ಕೆಲವು ರಾಜಕಾರಣಿಗಳು ಮಾಡುತ್ತಿದ್ದಾರೆ. ನನ್ನಂತ ವ್ಯಕ್ತಿಗೆ ಇಂದಿನ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು.
ರಾಜಕೀಯ ಕ್ಷೇತ್ರದ ಬಗ್ಗೆ ನನಗೆ ಆಸಕ್ತಿ ಇಲ್ಲವಾಗಿದೆ. ಶಾಸನ ಸಭೆಗಳಲ್ಲಿ ಮಾಧ್ಯಮಗಳು ಇರುವ ತನಕ ಹೆಚ್ಚು ಕೂಗಾಟ ಮಾಡುತ್ತಾರೆ. ಪತ್ರಕರ್ತರು ಸದನದಿಂದ ಹೊರ ನಡೆದರೆ, ಎಲ್ಲವೂ ಶಾಂತವಾಗುತ್ತದೆ. ಫೋಟೋ, ಸುದ್ದಿಗಾಗಿ ತಮ್ಮ ಅರ್ಹತೆಗಿಂತ ಹೆಚ್ಚು ಪಾಂಡಿತ್ಯ ಪ್ರದರ್ಶನ ಮಾಡಲಾಗುತ್ತಿದೆ. ಇಂತಹ ರಾಜಕಾರಣ ನನಗೆ ಬೇಡವಾಗಿದೆ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು.
ನಾನು ಈಗಾಗಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ, ಇದೀಗ ಸಚಿವ ಸ್ಥಾನವೂ ದೊರಕಿದೆ. ರಾಜಕೀಯದಲ್ಲಿ ಇದಕ್ಕಿಂತ ಹೆಚ್ಚಿನ ಸ್ಥಾನಮಾನದ ನಿರೀಕ್ಷೆ ನನಗಿಲ್ಲ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಿಮ್ಮನೆ ರತ್ನಾಕರ್ ವಿವರಣೆ ನೀಡಿದರು.