ಶಿವಮೊಗ್ಗದಲ್ಲಿ ಸಾವಿನಲ್ಲೂ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ
ಶಿಕಾರಿಪುರ, ಫೆಬ್ರವರಿ 05: ಶಿಕಾರಿಪುರದಿಂದ ಹೊನ್ನಾಳಿ ಮಾರ್ಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದ ಸಂದರ್ಭ ಚಾಲಕನಿಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತ ಸಂಭವಿಸಿದ್ದು, ಆ ಸಮಯದಲ್ಲೂ ಆತ ಬಸ್ ನಲ್ಲಿದ್ದವರ ಪ್ರಾಣ ಉಳಿಸಲು ಪ್ರಯತ್ನಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಶಿಕಾರಿಪುರ ತಾಲೂಕಿನ ಬಗನಕಟ್ಟೆ ನಿವಾಸಿ ಬಸ್ ಚಾಲಕ ಕುಮಾರ್ (32) ಮೃತ ಪಟ್ಟ ದುರ್ದೈವಿ. ಬಸ್ ಚಾಲನೆ ಮಾಡುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಬಸ್ ಅನ್ನು ನಿಲ್ಲಿಸಲೂ ಸಾಧ್ಯವಾಗದೇ, ಕೊನೆಗೆ ಕೆಂಗಟ್ಟೆ ಗ್ರಾಮದ ಬಳಿ ರಸ್ತೆಯ ಎಡಭಾಗಕ್ಕೆ ಎಳೆದೊಯ್ದಿದ್ದಾರೆ. ಮರಕ್ಕೆ ಗುದ್ದಿದ ಬಸ್ ಅಲ್ಲೇ ನಿಂತಿದೆ. ಹೀಗಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಬಸ್ ಚಾಲಕ ಹೃದಯಾಘಾತವಾದರೂ ಬಸ್ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ, ಇದರಿಂದ ಬಸ್ ನಲ್ಲಿದ್ದವರ ಜೀವ ಉಳಿಯಿತು ಎಂದು ಪ್ರಯಾಣಿಕರು ಸ್ಮರಿಸಿದ್ದಾರೆ.












Click it and Unblock the Notifications