'ಹನುಮ ಜಯಂತಿಗೆ ನಿಷೇಧ, ಇದೇನು ಪಾಕಿಸ್ತಾನವೇ?’
ಶಿವಮೊಗ್ಗ, ಡಿಸೆಂಬರ್ 07 : 'ಈದ್ ಮಿಲಾದ್ ಸಂದರ್ಭದಲ್ಲಿ ಗಲ್ಲ-ಗಲ್ಲಿಗಳಲ್ಲೂ ಮೆರವಣಿಗೆಗೆ ಅವಕಾಶ ಕೊಟ್ಟಿದ್ದ ರಾಜ್ಯ ಸರ್ಕಾರ ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಗೆ ನಿರ್ಬಂಧ ಹೇರಿರುವುದು ಸರಿಯಲ್ಲ' ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಗುರುವಾರ ಮಾತನಾಡಿದ ಅವರು, 'ಅನುಮತಿ ಇಲ್ಲದೆಯೇ ಈದ್ ಮೆರವಣಿಗೆಗೆ ಅವಕಾಶ ನೀಡಲಾಗಿದೆ. ಆದರೆ, ಹನುಮ ಜಯಂತಿ ಮೆರವಣಿಗೆಗೆ ನಿರ್ಬಂಧ ಹೇರಲಾಗಿದೆ. ಇದೇನು ಪಾಕಿಸ್ತಾನವೇ?' ಎಂದು ಪ್ರಶ್ನಿಸಿದರು.
ಹನುಮ ಜಯಂತಿ ವಿಚಾರಕ್ಕೆ ತೆರೆ ಎಳೆಯಲು ಮುಂದಾದ ಮೈಸೂರು ಡಿಸಿ
'ಹನುಮ ಜಯಂತಿ ಕಾರ್ಯಕ್ರಮಕ್ಕೆ ಬರುತ್ತಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಅಡ್ಡಿಪಡಿಸಿ ಬ್ಯಾರಿಕೇಡ್ ಹಾಕಿದ್ದಾರೆ. ರಾಜ್ಯದ ಹಿಂದೂಗಳಿಗೆ ಮುಖ್ಯಮಂತ್ರಿ, ಗೃಹ ಸಚಿವರು ಅಪಮಾನ ಮಾಡಿದ್ದಾರೆ ಸಂಸದ ಪ್ರತಾಪ್ ಸಿಂಹ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅವರಿಗೆ ಅಡ್ಡಲಾಗಿ ಬ್ಯಾರಿಕೇಡ್ ಇಟ್ಟಿದ್ದೇಕೆ?' ಎಂದು ಈಶ್ವರಪ್ಪ ಪ್ರಶ್ನಿಸಿದರು.
'ಚುನಾವಣೆ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಮು ದ್ವೇಷ ಹರಡುತ್ತಿದೆ. ಹಿಂದು, ಮುಸ್ಲಿಂ, ಲಿಂಗಾಯತರು, ವೀರಶೈವರು ಎಂದು ಧರ್ಮ ಮತ್ತು ಜಾತಿಗಳ ನಡುವೆ ದ್ವೇಷ ಮೂಡಿಸುತ್ತಿದೆ. ರಾಜ್ಯದಲ್ಲಿ 18 ಮಂದಿ ಹಿಂದೂ ಕಾರ್ಯಕರ್ತರ ಕೊಲೆಗಳಾಗಿದ್ದರೂ ಸರ್ಕಾರ ಸುಮ್ಮನಿದೆ' ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಹನುಮ ಜಯಂತಿ ಮಾಡಿಯೇ ಸಿದ್ಧ: ಸಿಂಹ
'ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರವೇ ಬಹಿರಂಗಪಡಿಸುವುದಾಗಿ ಹೇಳಲಾಗಿತ್ತು, ಇದುವರೆಗೂ ಯಾರನ್ನು ಬಂಧಿಸಿಲ್ಲ. ಇದನ್ನು ಕೂಡ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ' ಎಂದು ದೂರಿದರು.
ಕಾಂಗ್ರೆಸ್, ಬಿಜೆಪಿಗೆ ಪರಮ ಬ್ರಹ್ಮಚಾರಿ 'ಹನುಮ'ನೇ ಒಳ್ಳೆ ಬುದ್ದಿ ನೀಡಲಿ
'ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಮರ ಓಲೈಕೆ, ದ್ವೇಷದ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ಎದುರಿಸೋಣ ಜನ ಯಾರನ್ನು ಬೆಂಬಲಿಸುತ್ತಾರೆ? ಎಂಬುದು ಗೊತ್ತಾಗುತ್ತದೆ' ಎಂದರು.