ನಂದಿತಾ ಕೊಲೆ, ತೀರ್ಥಹಳ್ಳಿ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಶಿವಮೊಗ್ಗ, ನ.3 : ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಡೆತ್ನೋಟ್ ಬರೆದಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಕೈಬರಹದ ಡೆತ್ನೋಟ್ಅನ್ನು ಪೊಲೀಸರು ಸೋಮವಾರ ಸಂಜೆ ಬಿಡುಗಡೆ ಮಾಡಿದ್ದಾರೆ. ತೀರ್ಥಹಳ್ಳಿ ಬಂದ್ ವೇಳೆ ಕಲ್ಲು ತೂರಾಟ ನಡೆಸುತ್ತಿದ್ದ 50 ಜನರನ್ನು ಪೊಲೀಸರು ಬಂಧಿಸಿದ್ದಾರೆ.
'ನಾನು ಚೆನ್ನಾಗಿ ಓದಲೇ ಇಲ್ಲ, ಅಪ್ಪ ನನ್ನನ್ನು ಕ್ಷಮಿಸಿ', 'ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ, ನಾನು ದೊಡ್ಡ ತಪ್ಪು ಮಾಡಿ ವಿಷ ಕುಡಿಯುತ್ತಿದ್ದೇನೆ' ಎಂದು ನಂದಿತಾ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನಂದಿತಾ ಅಪಹರಣವಾದ ಬಗ್ಗೆ ನಗರದಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ಯಾವುದೇ ದೃಶ್ಯಾವಳಿಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರೆದಿದೆ.
ನಂದಿತಾ ಡೆತ್ನೋಟ್ನಲ್ಲಿರುವುದು ತಮ್ಮ ಮಗಳ ಕೈಬರಹವಲ್ಲ, ಬೇರೆ ಯಾರೋ ಬರೆದು ಅವಳ ಬ್ಯಾಗಿನಲ್ಲಿಟ್ಟಿದ್ದಾರೆ ಎಂದು ನಂದಿತಾ ದೊಡ್ಡಮ್ಮ ವಿಶಾಲಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದಿನ ಸುದ್ದಿ : 8ನೇ ತರಗತಿ ವಿದ್ಯಾರ್ಥಿನಿ ನಂದಿತಾ ಅಪಹರಣ ಮತ್ತು ಕೊಲೆ ಖಂಡಿಸಿ ಸೋಮವಾರ ಕರೆ ನೀಡಿದ್ದ ತೀರ್ಥಹಳ್ಳಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ವೇಳೆ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನೆಡೆಸಿದ್ದು, ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲಾಗಿದೆ. ನಂದಿತಾ ಸಾವಿನ ಬಗ್ಗೆ ಸಚಿವ ಕಿಮ್ಮನೆ ರತ್ನಾಕರ್ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದಾರೆ.
ತೀರ್ಥಹಳ್ಳಿಯ ಸರ್ಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಂದಿತಾಳನ್ನು ಮೂವರು ಯುವಕರ ಗುಂಪು ಅಪಹರಿಸಿ ಆನಂದ ಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ವಿಷಪ್ರಾಶನ ಮಾಡಿದ್ದರು. ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಂದಿತಾ ಅ.31ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. [ತೀರ್ಥಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಕೊಲೆ]

ಪ್ರಕರಣದ ಆರೋಪಿಗಳನ್ನು ಬಂಧಿಸುಂತೆ ಒತ್ತಾಯಿಸಿ ಶನಿವಾರ ಸ್ವಯಂ ಪ್ರೇರಿತವಾಗಿ ತೀರ್ಥಹಳ್ಳಿ ಬಂದ್ ನಡೆಸಲಾಗಿತ್ತು. ಸೋಮವಾರ ಪುನಃ ವಿವಿಧ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಎಸ್ಪಿ ಕೌಶಲೇಂದ್ರಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸೋಮವಾರ ತೀರ್ಥಹಳ್ಳಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ವಾರಕ್ಕೊಮ್ಮೆ ನಡೆಯುವ ತೀರ್ಥಹಳ್ಳಿ ಸಂತೆಯೂ ಬಂದ್ನಿಂದಾಗಿ ಸ್ಥಗಿತಗೊಂಡಿದೆ. ಕೊಪ್ಪ, ಹೊಸನಗರ ಮುಂತಾದ ಅಕ್ಕಪಕ್ಕದ ಊರುಗಳಿಂದ ತೀರ್ಥಹಳ್ಳಿಗೆ ಬರುವ ಬಸ್ ಸಂಚಾರವೂ ಸ್ಥಗಿತಗೊಂಡಿದ್ದು, ಹಿಂದೂ ಪರ ಸಂಘಟನೆಗಳು ಕೊಪ್ಪ ಮತ್ತು ಹೊಸನಗರದಲ್ಲಿಯೂ ಪ್ರತಿಭಟನೆ ನಡೆಸಿದವು.
ಸಿಎಂಗೆ ವರದಿ : ನಂದಿತಾ ಸಾವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಳೀಯ ಶಾಸಕ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವರದಿ ನೀಡಿದ್ದಾರೆ. ಭಾನುವಾರ ತೀರ್ಥಹಳ್ಳಿಯಲ್ಲಿ ಶಾಂತಿ ಸಭೆ ನಡೆಸಿದ್ದ ಕಿಮ್ಮನೆ ರತ್ನಾಕರ್ ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.
ನಂದಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ನಂದಿತಾ ಮೇಲೆ ಅತ್ಯಾಚಾರ ನಡೆದಿದಿಯೇ? ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆದಿದ್ದು, ವರದಿ ಬಹಿರಂಗವಾಗಿಲ್ಲ. ನಂದಿತಾ ಕೊಲೆ ಖಂಡಿಸಿ ಮಂಗಳವಾರ ಚಿಕ್ಕಮಗಳೂರು ಮತ್ತು ಶೃಂಗೇರಿ ಬಂದ್ಗೆ ಭಜರಂಗದಳ ಕರೆ ನೀಡಿದೆ.












Click it and Unblock the Notifications