ಮತ್ತೆ ಮುಖ್ಯಮಂತ್ರಿಯಾಗಲು ದೇವರು ಅವಕಾಶ ನೀಡ್ತಾನೆ : ಯಡಿಯೂರಪ್ಪ
ಶಿವಮೊಗ್ಗ, ಜುಲೈ 21 : ರಾಜ್ಯದ ರೈತರ ಜ್ವಲಂತ ಸಮಸ್ಯೆಗೆ ಸ್ಪಂದಿಸಲು ನಾನು ಮುಖ್ಯಮಂತ್ರಿಯಾದೆ. ಆದರೆ ಕೆಲವು ಬೆಳವಣಿಗೆಯಿಂದ ಮುಖ್ಯಮಂತ್ರಿ ಹುದ್ದೆ ಜಾರಿ ಹೋಯಿತು. ದೇವರು ಮತ್ತೊಂದು ಅವಕಾಶ ನೀಡುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಶನಿವಾರ ನಡೆದ ಜಿಲ್ಲಾ ಸಮಿತಿ ವಿಶೇಷ ಸಭೆ ನಡೆಯಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೆ. ಸುಪ್ರೀಂ ಕೋರ್ಟ್ ಬೆಳವಣಿಗೆಯಿಂದಾಗಿ ಪ್ರತಿಪಕ್ಷಗಳು ನನ್ನನ್ನು ಕೈಕಟ್ಟಿ ಕೂರಿಸಿದರು. ಬಿಜೆಪಿ ಬಂದಿದ್ದರೆ ಒಳ್ಳೆಯ ಬೆಳವಣಿಗೆ ಅಭಿವೃದ್ಧಿಯಾಗುತ್ತಿತ್ತು. ಈ ರೀತಿ ಜನರೂ ಸಹ ಮಾತನಾಡಿಕೊಳ್ಳುವುದನ್ನ ನಾನು ಗಮನಿಸಿದ್ದೆ. ಜನ ಬಿಜೆಪಿಯ ಕಾರ್ಯಕ್ರಮಕ್ಕೆ ಹೆಚ್ಚು ಸೇರುವುದನ್ನು ಈಗಲೂ ಸಹ ನಾನು ಕಂಡು ಸಂತಸಗೊಂಡಿದ್ದೇನೆ. ಮತ್ತೊಂದು ಅವಕಾಶ ದೇವರು ನೀಡುತ್ತಾನೆ ಎಂದು ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಮೋದಿಯವರನ್ನು ಅಪ್ಪಿಕೊಂಡ ರಾಹುಲ್ ಅವರನ್ನು, ಕೃಷಿ ವಿಶ್ವ ವಿದ್ಯಾಲಯವನ್ನು ಶಿವಮೊಗ್ಗದಿಂದ ಹಾಸನಕ್ಕೆ ತೆಗೆದುಕೊಂಡು ಹೋಗಲು ಅಪ್ಪ ಮಕ್ಕಳು ಯತ್ನಿಸಿದರು ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಯಡಿಯೂರಪ್ಪ ತೀವ್ರವಾಗಿ ಟೀಕಿಸಿದರು. ಅಲ್ಲದೆ, ವಿಧಾನಸಭೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದ ಜನರಿಗೆ ಧನ್ಯವಾದಗಳನ್ನು ಯಡಿಯೂರಪ್ಪ ಅರ್ಪಿಸಿದರು.

ರಾಹುಲ್ ಗಾಂಧಿಯಿಂದ ನಾಚಕೆಗೇಡಿನ ವರ್ತನೆ
ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಯುವಾಗ ಸದನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಚಿ ತಬ್ಬಿಕೊಳ್ಳಲು ಹೋಗಿ, ನಂತರ ಅವರ ಸ್ಥಾನದಲ್ಲಿ ಕುಳಿತುಕೊಂಡು ಕಣ್ಣು ಮಿಟಕಿಸಿರುವುದು ನಾಚಿಕೆಗೇಡಿನ ವರ್ತನೆಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಟೀಕಾಪ್ರಹಾರ ಮಾಡಿದರು.
ನಿನ್ನೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಸುಮಾರು ಒಂದೂವರೆ ಗಂಟೆ ಮಾನ್ಯ ಪ್ರಧಾನ ಮಂತ್ರಿಗಳು ಸವಿವರವಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಅವರು ಎತ್ತಿದ್ದ ಎಲ್ಲ ಪ್ರಶ್ನೆಗಳಿಗೂ ಪ್ರಧಾನಿ ನರೇಂದ್ರ ಮೋದಿಯವರು ತಕ್ಕ ಉತ್ತರ ನೀಡಿದ್ದಾರೆ ಮತ್ತು ಎಲ್ಲ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ
ರಾಜ್ಯದ ಆರ್ಥಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಮಾಡಿದ ಸಾಲದ ಹೊರೆಯಿಂದಾಗಿ ರಾಜ್ಯದ ಪ್ರತಿ ಪ್ರಜೆಯ ಮೇಲೆ 46 ಸಾವಿರ ರೂ.ಗಳ ಸಾಲವಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡ್ಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ರಾಜ್ಯ ಸರ್ಕಾರದ ಎರಡು ಲಕ್ಷ ಎಂಬತ್ತಾರು ಸಾವಿರ ನಾನೂರು ಎಂಬತ್ತೊಂಬತ್ತು ಕೋಟಿ ಸಾಲ ಮಾಡಿದೆ. ಅದರಲ್ಲಿ ಸಿದ್ದರಾಮಯ್ಯ ಒಬ್ಬರೇ ಒಂದು ಲಕ್ಷ ಹದಿನೈದು ಸಾವಿರ ಎಂಟು ನೂರು ಹತ್ತು ಕೋಟಿ ರೂ ಸಾಲ ಮಾಡಿ ಬರೀ ಉದ್ಘಾಟನಾ ಕಾರ್ಯಕ್ರಮ ಮಾಡಿ ಹೋಗಿದ್ದಾರೆ. ಒಬ್ಬ ವ್ಯಕ್ತಿಯ ಮೇಲೆ ನಲವತ್ತಾರು ಸಾವಿರದ ಎಂಟನೂರ ಎಂಬತ್ತು ಆರು ರೂಪಾಯಿ ಸಾಲ ಹೊರೆ ಇದೆ ಎಂದು ವಿವರ ನೀಡಿದರು.

ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ
ಈ ಸಭೆಯಲ್ಲಿ ನಾಲ್ಕು ವರ್ಷದ ಕೇಂದ್ರ ಸರ್ಕಾರದ ಸಭೆ ಸಾಧನೆಯ ಬಗ್ಗೆ ಚರ್ಚೆ ಮಾಡೋಣವೆಂದ ಬಿಎಸ್ ವೈ, ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ಮೂರು ಲಕ್ಷದ ಅರುವತ್ತು ಮೂರು ಸಾವಿರ ಮತ ಬಂದಿದ್ದು ಮಾನ್ಯ ಪ್ರಧಾನ ಮಂತ್ರಿಗಳೇ ಕಾರಣ ಎಂದು ಕೆಲವರು ಮಾತನಾಡಿದ್ದೂ ಇದೆ. ಆದರೆ ನಾನು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿದಂತಹ ಸಾಧನೆಗಳ ಬಗ್ಗೆ ಜನ ಇಷ್ಟೊಂದು ವಿಶ್ವಾಸದಿಂದ ಮತ ನೀಡಿದರು.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಸೇರಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿರುವುದು ಜನರು ನಮ್ಮಲ್ಲಿ ಇಟ್ಟಿರುವ ವಿಶ್ವಾಸದ ಪ್ರತೀಕ. ನಾನು ಇದಕ್ಕಾಗಿ ಮತದಾರರಿಗೆ ಅಭಿನಂದನೆ ಮತ್ತು ಧನ್ಯವಾದ ಸಲ್ಲಿಸುತ್ತೇನೆ. ಇದರಿಂದಾಗಿ ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.

ಬೆಳಗಾವಿ ಬಳ್ಳಾರಿ ವಿಜಾಪುರದಲ್ಲಿ ಹಿನ್ನಡೆ
ನಾವು ನೂರ ಐವತ್ತು ಕ್ಷೇತ್ರ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ನಮ್ಮವರೇ ನಮಗೆ ಹಗುರವಾಗಿ ಮಾತನಾಡಿದರೂ ರಾತ್ರಿ ಹನ್ನೊಂದು ಗಂಟೆಯವರೆಗೂ ಜನ ಸೇರಿದ್ದನ್ನು, ಜನ ಪರಿವರ್ತನಾ ರಾಲಿಯಲ್ಲಿ ನೋಡಿದರೆ ಅವರ ಪ್ರೀತಿ ಇನ್ನೂ ಹೆಚ್ಚಾಗಿದೆ ಎನ್ನುವುದು ಗೋಚರಿಸುತ್ತದೆ. ಒಂದು ದಿನಕ್ಕೆ ಏಳರಿಂದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ವಿಮಾನದಲ್ಲಿ ಹೋಗಿ ಮತಯಾಚನೆ ಮಾಡಿದ್ದರ ಪರಿಣಾಮ ಇಂದು ನಮಗೆ ಜನ ಕಲ್ಪನೆಗೂ ಮೀರಿ ಹೆಚ್ಚಿನ ಬೆಂಬಲ ವ್ಯಕ್ತಪಡಿಸಿದರು.
ನಮಗೆ ಈ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಾಪುರ ಜಿಲ್ಲೆಯಿಂದ ಹಿನ್ನಡೆಯಾಗಿ ನೂರಾ ನಾಲ್ಕಕ್ಕೆ ತೃಪ್ತಿಪಟ್ಟುಕೊಂಡೆವು. ಆದರೆ ರಾಜ್ಯದ ಆರೂವರೆ ಕೋಟಿ ಜನ ಬೆಂಬಲ ನೀಡಿದ್ದನ್ನು ನಾವು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಲೋಕಸಭೆ ಚುನಾವಣೆಗೆ ಪ್ರತಿ ಜಿಲ್ಲೆಗೆ ಭೇಟಿ ನೀಡುತ್ತೇನೆ
ಮೂರು ದಿವಸಗಳಿಂದ ನಾನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರವಾಸ ಮಾಡುತ್ತಿದ್ದು, ಸೊರಬ ತಾಲೂಕಿನಲ್ಲಿ ಹತ್ತು ಸಾವಿರ ಎಕರೆ ಮುಳುಗಿಹೋಗಿದೆ. ರೈತರ ಬೆಳೆ ನಾಶಗೊಂಡಿದೆ. ಸರ್ಕಾರ ಮಲೆನಾಡಿನ ರೈತರ ಬೆಂಬಲಕ್ಕೆ ತಕ್ಷಣವೇ ಧಾವಿಸಬೇಕು ಎಂದು ಅವರು ಆಗ್ರಹಿಸಿದರು.
ಅಪ್ಪ ಮಕ್ಕಳ ಪ್ರಯತ್ನ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ತಾಲ್ಲೂಕಿನಲ್ಲಿ ಕೃಷಿ ವಿಶ್ವವಿದ್ಯಾಲಯ ಏಳು ನೂರು ಐವತ್ತು ಕೋಟಿ ವೆಚ್ಚದಲ್ಲಿ ನಾನು ಅನುಮೋದನೆ ಕೊಟ್ಟಿದ್ದೆ. ಆದರೆ ಅದನ್ನು ಹಾಸನಕ್ಕೆ ಅಪ್ಪ ಮಕ್ಕಳು ತೆಗೆದುಕೊಂಡು ಹೋಗಲು ಪ್ರಯತ್ನಪಟ್ಟರು. ಆದರೆ ಕಾಮಗಾರಿ ನಡೆಯುತ್ತಿದ್ದನ್ನು ನೋಡಿ ಬಹಳ ಸಂತಸ ಪಟ್ಟಿದ್ದೇನೆ ಎಂದರು.
ಆದಷ್ಟು ಬೇಗ ಹಳೆಯ ಜೈಲು ಜಾಗ ಸಾರ್ವಜನಿಕ ಸಮಾರಂಭಕ್ಕೆ ಮೀಸಲಿಡಲು ಕ್ರಮ ಕೈಗೊಳ್ಳುತ್ತೇನೆ. ಸಾಗರ ಇಂಟರ್ ಸಿಟಿ ರೈಲು ಹಾಗೂ ಆಟೋ ಮೀಟರ್ ಚಾಲನೆಗೆ ಕ್ರಮ ಕೈಗೊಳ್ಳುತ್ತೇನೆ. ಸಿಗಂದೂರು ಸೇತುವೆ ಮುಂದಿನ ವಾರ ಅನುಮತಿ ಸಿಗುತ್ತದೆ. ವಿಎಸ್ಐಎಲ್ ಕೈಗಾರಿಕೆಗೆ ಐದು ಸಾವಿರ ಕೋಟಿ ತೆಗೆದಿಟ್ಟು ರುವ ಪ್ರಯತ್ನ ನಡೆದಿದೆ ಎಂದರು.

ಆಯನೂರು ಮಂಜುನಾಥ್ ಹಾಗೂ ರುದ್ರೇಗೌಡ
ಶಿವಮೊಗ್ಗ ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಆಯನೂರು ಮಂಜುನಾಥ್ ಹಾಗೂ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರೇ ನೀವೇ ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಂಡು ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಿ ಹಾಗೂ ಮಹಾನಗರ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರುದ್ರೇಗೌಡ ಶಾಸಕರುಗಳಾದ ಆರಗಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಕೆಬಿ ಅಶೋಕ್ ನಾಯ್ಕ್, ರುದ್ರಗೌಡ, ಆಯನೂರು ಮಂಜುನಾಥ್, ದತ್ತಾತ್ರಿ, ಬಿಎಸ್ ಅರುಣ್, ಜ್ಯೋತಿ ಪ್ರಕಾಶ್ ಸೇರಿದಂತೆ ಇತರೆ ಬಿಜೆಪಿ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications