ಶಿವಮೊಗ್ಗದಲ್ಲಿ ಸ್ಫೋಟ; ಮೃತಪಟ್ಟ 5 ಜನರ ಗುರುತು ಪತ್ತೆ
ಶಿವಮೊಗ್ಗ, ಜನವರಿ 25 : ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಶಿವಮೊಗ್ಗದಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಸ್ಫೋಟದಲ್ಲಿ ಒಟ್ಟು 6 ಕಾರ್ಮಿಕರು ಮೃತಪಟ್ಟಿದ್ದಾರೆ. 5 ಜನರ ಗುರುತು ಪತ್ತೆಯಾಗಿದ್ದು, ಇನ್ನೊಂದು ಮೃತದೇಹದ ಗುರುತು ಇನ್ನು ಪತ್ತೆ ಹಚ್ಚಬೇಕಿದೆ.
ಜನವರಿ 21ರ ಗುರುವಾರ ರಾತ್ರಿ 10.30ರ ಸುಮಾರಿಗೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕ್ರಷರ್ನಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹಗಳು ಛಿದ್ರಗೊಂಡಿದ್ದವು.
ಶಿವಮೊಗ್ಗ ಸ್ಫೋಟ; ಸಿಗರೇಟು ಸೇದುತ್ತಿದ್ದ ಕಾರ್ಮಿಕರು!
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಎಂ. ಶಾಂತರಾಜು ಅವರು ಮೃತಪಟ್ಟವರ ಬಗ್ಗೆ ಮಾಹಿತಿ ನೀಡಿದ್ದಾರೆ. "ಶವಗಳ ಮರಣೋತ್ತರ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಶಿವಮೊಗ್ಗ ಸ್ಫೋಟ; ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರೀಯ ದಳ
ಮೃತಪಟ್ಟವರ ವಿವರ; ಸ್ಫೋಟದಲ್ಲಿ ಮೃತಪಟ್ಟವರನ್ನು ರಾಯದುರ್ಗದ ಪವನ್ ಕುಮಾರ್ (29), ಜಾವೀದ್ (28), ಚೆಲಿಮಾನು ರಾಜು (24), ಪ್ರವೀಣ (36) ಅಂತರಗಂಗೆ (ಭದ್ರಾವತಿ), ಮಂಜುನಾಥ್ (35) ಅಂತರಗಂಗೆ ಕ್ಯಾಂಪ್ (ಭದ್ರಾವತಿ) ಎಂದು ಗುರುತಿಸಲಾಗಿದೆ.
ಶಿವಮೊಗ್ಗ ಸ್ಪೋಟ ಪ್ರಕರಣ: ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ!
ಸ್ಫೋಟದಲ್ಲಿ ಮೃತಪಟ್ಟ ಇನ್ನೊಬ್ಬ ಕಾರ್ಮಿಕರ ಮೃತದೇಹದ ಗುರುತು ಪತ್ತೆಯಾಗುವುದು ಬಾಕಿ ಇದೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಗುರುವಾರ ರಾತ್ರಿ ಸ್ಫೋಟ ಸಂಭವಿಸಿದ ಹುಣಸೋಡು ಕಲ್ಲು ಕ್ವಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಿವಮೊಗ್ಗ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.