ಶಿವಮೊಗ್ಗ; ನಡು ರಸ್ತೆಯಲ್ಲೇ ಜನರಿಗೆ ಚಾಕು ತೋರಿಸಿದ ಯುವಕರು!
ಶಿವಮೊಗ್ಗ, ಸೆಪ್ಟೆಂಬರ್ 08; ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲಿ ಚಾಕು ತೋರಿಸಿ ಆತಂಕ ಮೂಡಿಸಿದ್ದ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಯುವಕರು ದರೋಡೆಕೋರರು ಇರಬೇಕು ಎಂದು ಜನರು ಶಂಕಿಸಿದ್ದರು.
ನಗರದ ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ ಬೆಳಗ್ಗೆ ಕಾರಿನಲ್ಲಿ ಬಂದ ಯುವಕರು ಕ್ಷುಲ್ಲಕ್ಕ ವಿಚಾರಕ್ಕೆ ಸಾರ್ವಜನಿಕರಿಗೆ ಚಾಕು, ಬರ್ಚಿ ತೋರಿಸಿದ್ದರು. ನೂರು ಅಡಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮತ್ತು ಪೊಲೀಸ್ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದ್ದಾರೆ. ಈ ಬಗ್ಗೆ ಜನರು ಪ್ರಶ್ನೆ ಮಾಡಿದ್ದಾರೆ.
ಜನರು ಗುಂಪುಗೂಡಿ ಪ್ರಶ್ನೆ ಮಾಡುತ್ತಿದ್ದಂತೆ ಕಾರಿನಲ್ಲಿದ್ದ ನಾಲ್ವರು ಮಾರಕಾಸ್ತ್ರಗಳನ್ನು ಹೊರಗೆ ತೆಗೆದಿದ್ದಾರೆ. ಚಾಕು, ಬರ್ಚಿಗಳನ್ನು ಜನರತ್ತ ತೋರಿಸಿ ಬೆದರಿಸಿದ್ದಾರೆ. ಹತ್ತಿರ ಬಂದರೆ ಚುಚ್ಚುವುದಾಗಿ ಹೆದರಿಸಿದ್ದಾರೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಈ ನಡುವೆ ತಾವು ತಂದಿದ್ದ ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಹೋಗಲು ಯತ್ನಿಸಿದ್ದಾರೆ.

ಅಟ್ಟಾಡಿಸಿ ಹಿಡಿದ ಜನರು; ಚಾಕು, ಬರ್ಚಿ ತೋರಿಸುತ್ತಿದ್ದಂತೆ ವಾಕಿಂಗ್ ಮಾಡುತ್ತಿದ್ದ ಯುವಕರು ಕಾರಿನಲ್ಲಿದ್ದ ಯುವಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಕ್ಯಾರೆ ಅನ್ನದೆ ಚಾಕು ಬೀಸಲು ಮುಂದಾದಾಗ ಸಾರ್ವಜನಿಕರು ಜೊತೆಯಾಗಿ ಯುವಕರನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ಕಾರು ಬಿಟ್ಟು ನಾಲ್ವರು ಪರಾರಿಯಾಗಲು ಯತ್ನಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿದ್ದಾರೆ. ಜನರು ಯುವಕರನ್ನು ಅಟ್ಟಾಡಿಸಿ ಹಿಡಿದು, ಥಳಿಸಿದ್ದಾರೆ.
ಕಾರಿನಲ್ಲಿತ್ತಾ ಗಾಂಜಾ?; ಕಾರಿನಲ್ಲಿದ್ದ ಯುವಕರು ಗಾಂಜಾ ಸೇವಿಸಿದ್ದರು. ಅದರ ಮತ್ತಿನಲ್ಲೇ ದುಷ್ಕೃತ್ಯ ಎಸಗಲು ಮುಂದಾಗಿದ್ದರು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, "ಗಾಂಜಾ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕಾರನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗುತ್ತದೆ. ಅಲ್ಲದೆ ಆರೋಪಿಗಳನ್ನು ಮೆಡಿಕಲ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಕಾರಿನಲ್ಲಿದ್ದ ನಾಲ್ವರ ಪೈಕಿ ಒಬ್ಬನಿಗೆ ಕ್ರಿಮಿನಲ್ ಹಿನ್ನೆಲೆ ಇತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದರು. ಅಂಗಡಿಯೊಂದರಲ್ಲಿ 2.50 ಲಕ್ಷ ರೂ. ಹಣ ಕಳವು ಮಾಡಿ ಸಿಕ್ಕಿಬಿದ್ದಿದ್ದ. ಎರಡು ವಾರದ ಹಿಂದೆ ಈತ ಜಾಮೀನಿನ ಮೇಲೆ ಹೊರಬಂದಿದ್ದ. ಸದ್ಯ ಮೂವರನ್ನು ಬಂಧಿಸಲಾಗಿದೆ. ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಮಾರಕಾಸ್ತ್ರ ಸಹಿತ ಓಡಾಡುತ್ತಿದ್ದ ಯುವಕರು ಬಳಕೆ ಮಾಡಿಕೊಂಡಿದ್ದ ಕಾರು ಅವರದ್ದಲ್ಲ. ಕಾರು ಕಳ್ಳತನ ಮಾಡಿಕೊಂಡು ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅನ್ನುವುದು ಗೊತ್ತಾಗಿದೆ. "ಕಾರು ಕಳ್ಳತನ ಆಗಿರುವ ಕುರಿತು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಘಟನೆ ಸಂದರ್ಭ ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಸದಸ್ಯ ಎಸ್. ಎನ್. ಚನ್ನಬಸಪ್ಪ, "ಇವರೆಲ್ಲ ದುಷ್ಕೃತ್ಯ ನಡೆಸುವ ಉದ್ದೇಶದಿಂದಲೆ ಮಾರಕಾಸ್ತ್ರಗಳೊಂದಿಗೆ ಓಡಾಡುತ್ತಿರುವ ಶಂಕೆ ಇದೆ. ಇವರನ್ನು ವಿಚಾರಣೆಗೆ ಒಳಪಡಿಸಿದರೆ ಇನ್ನಷ್ಟು ಕಠೋರ ಸತ್ಯಗಳು ಹೊರಬರಲಿವೆ" ಎಂದು ಹೇಳಿದರು.
ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಜಯನಗರ ಠಾಣೆಗೆ ಭೇಟಿ ನೀಡಿ ಇನ್ಸ್ಪೆಕ್ಟರ್ ಎಸ್. ರವಿ, ಪಿಎಸ್ಐ ರಹಮತ್ ಅಲಿ ಅವರಿಂದ ಮಾಹಿತಿ ಪಡೆದರು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಲಿಖಿತ ಪರೀಕ್ಷೆ ತರಬೇತಿ; ಕರ್ನಾಟಕ ಸರ್ಕಾರ ಮುಂದಿನ ದಿನಗಳಲ್ಲಿ ನಡೆಸಲಿರುವ ಪೊಲೀಸ್ ಇಲಾಖೆಯಲ್ಲಿನ ಸಾವಿರಕ್ಕೂ ಹೆಚ್ಚು ಸಿವಿಲ್ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ತರಬೇತಿ ನೀಡಲು ನಿರ್ಧರಿಸಲಾಗಿದೆ.
ಆಸಕ್ತರು ಸೆಪ್ಟೆಂಬರ್ 14ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತಗಂಗೋತ್ರಿ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಛೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 / 9964760090ಕ್ಕೆ ಸಂಪರ್ಕಿಸಬಹುದು.












Click it and Unblock the Notifications