"ಸಿಗಂದೂರು ಎದುರು ಹಾಕಿಕೊಂಡರೆ ಬಿಎಸ್ವೈ ರಾಜಕೀಯವಾಗಿ ನಾಶ''
ಶಿವಮೊಗ್ಗ, ನವೆಂಬರ್ 3: ಸಾಗರ ತಾಲ್ಲೂಕಿನ ಪವಿತ್ರ ಧಾರ್ಮಿಕ ಕ್ಷೇತ್ರ ಸಿಗಂದೂರು ಕ್ಷೇತ್ರವನ್ನು ಎದುರು ಹಾಕಿಕೊಂಡರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಜೀವನ ನಾಶವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶ್ರೀ ಕ್ಷೇತ್ರ ಸಿಗಂದೂರು ದೇವಾಲಯಕ್ಕೆ ಸಲಹಾ ಸಮಿತಿ ರಚನೆಗೆ ಸರ್ಕಾರದ ವಿರುದ್ಧ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತೊಮ್ಮೆ ಗುಡುಗಿದ್ದಾರೆ. ಸರ್ಕಾರದ ಆಸ್ತಿ ಉಳಿಸಲು ವಿಫಲವಾದ ಅಧಿಕಾರಿಗಳು, ಖಾಸಗಿ ಟ್ರಸ್ಟ್ ಗೆ ಕೈ ಹಾಕಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರ ತಾಳಕ್ಕೆ ತಕ್ಕಂತೆ ಶಿವಮೊಗ್ಗ ಜಿಲ್ಲಾಧಿಕಾರಿ, ಎಸ್.ಪಿ ಕುಣಿಯುತ್ತಿದ್ದಾರೆ. ಸಿಗಂದೂರು ದೇಗುಲ ಮುಜರಾಯಿ ಇಲಾಖೆಗೆ ಸೇರಿಸಲು ಹೊರಟ ನಿಮ್ಮ ಉದ್ದೇಶವಾದರೂ ಏನು ಎಂದು ಬೇಳೂರು ಪ್ರಶ್ನಿಸಿದರು.

ಈಡಿಗರ ಜಾತಿ ಒಡೆಯಲು ಶಾಸಕ ಹರತಾಳು ಹಾಲಪ್ಪ ಹೊರಟಿದ್ದಾರೆ. ಗೋಕರ್ಣ, ರಾಮಚಂದ್ರಪುರ ಮಠ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಗಲಾಟೆ ನಡೆದಿದೆ. ಅವುಗಳನ್ನ್ಯಾಕೆ ಮುಜರಾಯಿಗೆ ಸೇರಿಸಲು ಮನಸ್ಸು ಮಾಡಿಲ್ಲ ಎಂದರು.
ಗಲಾಟೆ ಮಾಡಿಕೊಂಡ ಧರ್ಮದರ್ಶಿ ಮತ್ತು ಅರ್ಚಕರನ್ನು ಕರೆದು, ಬುದ್ಧಿವಾದ ಹೇಳಿ ಕಳಿಸಬಹುದಿತ್ತು. ಆದರೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಒಬ್ಬ ಜಿಲ್ಲಾಧಿಕಾರಿಯಾದವರು ರಾಜಕಾರಣಿಗಳ ಏಜೆಂಟ್ ರೀತಿ ವರ್ತಿಸಬಾರದು ಎಂದು ಮಾಜಿ ಶಾಸಕ ಗುಡುಗಿದ್ದಾರೆ.
ಈಡಿಗ ಸಮಾಜಕ್ಕೆ ಸ್ವಯಂಘೋಷಿತ ಸಂಘಟನೆ ಅಂತಾ ಜಿಲ್ಲಾಧಿಕಾರಿ ಕರೆದಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಈಡಿಗ ಸಮುದಾಯದವರಿದ್ದಾರೆ ಈ ಪದವನ್ನು ಕಡತದಿಂದ ತೆಗೆದು ಹಾಕಬೇಕು. ಸಿಗಂದೂರು ಕ್ಷೇತ್ರವನ್ನು ಎದುರು ಹಾಕಿಕೊಂಡರೆ, ರಾಜಕೀಯವಾಗಿ ಯಡಿಯೂರಪ್ಪ ನಾಶ ಹೊಂದಲಿದ್ದಾರೆ ಎಂದು ಶಾಪ ಹಾಕಿದರು.
ಈ ಮೊದಲು ದೇವಾಲಯಕ್ಕೆ ಕೈ ಹಾಕಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದರು. ಗೋಕರ್ಣ ದೇವಾಲಯದ ಹೆಸರು ಹೇಳದೆ ವಿಷಯ ಪ್ರಸ್ತಾಪಿಸಿದರು. ಸಿಗಂದೂರು ದೇವಾಲಯದ ರಾಮಪ್ಪ ಅವರು ಶಾಸಕ ಹಾಲಪ್ಪರಿಗೆ ಕಮಿಷನ್ ನೀಡಿಲ್ಲ ಅನಿಸುತ್ತದೆ, ಹೀಗಾಗಿ ಶಾಸಕ ಹಾಲಪ್ಪ ಹೀಗೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.












Click it and Unblock the Notifications