ಭದ್ರಾವತಿ; ಭಾರೀ ಅಗ್ನಿ ಅವಘಡ, 8 ಗಂಟೆ ಬಳಿಕ ಹತೋಟಿಗೆ ಬಂದ ಬೆಂಕಿ
ಶಿವಮೊಗ್ಗ, ಜನವರಿ 06; ಭದ್ರಾವತಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸಾಮಿಲ್ ಒಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸತತ 8 ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿಯಿಂದಾಗಿ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ.
ಭದ್ರಾವತಿ ಬಸ್ ನಿಲ್ದಾಣ ಸಮೀಪದ ಮಂಜುನಾಥ ಸಾಮಿಲ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ತೀವ್ರ ಸ್ವರೂಪದಲ್ಲಿ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಿಯಂತ್ರಿಸುವುದಕ್ಕೆ, 8 ಗಂಟೆ ಕಾರ್ಯಾಚರಣೆ ನಡೆಸುವಂತಾಯಿತು. 9 ಅಗ್ನಿಶಾಮಕ ವಾಹನಗಳ ಮೂಲಕ ನಿರಂತರವಾಗಿ ನೀರು ಪೂರೈಸಲಾಯಿತು. ಆದರೂ ಬೆಂಕಿ ವ್ಯಾಪಕವಾಗಿ ಉರಿಯುತ್ತಿತ್ತು.
ಧಗಧಗ ಉರಿದ ನಾಟ; ಮಂಜುನಾಥ ಸಾಮಿಲ್ನಲ್ಲಿ ಭಾರೀ ಪ್ರಮಾಣದ ನಾಟ ಸಂಗ್ರಹಿಸಲಾಗಿತ್ತು. ಬೆಂಕಿಯ ತೀವ್ರತೆಗೆ ನಾಟ ಭಸ್ಮವಾಗುತ್ತಲೇ ಹೋದವು. ಅಗ್ನಿಶಾಮಕ ಸಿಬ್ಬಂದಿ ಒಂದೆಡೆ ಬೆಂಕಿ ನಂದಿಸುವಷ್ಟರಲ್ಲಿ ಮತ್ತೊಂದು ಕಡೆಗೆ ಬೆಂಕಿ ವ್ಯಾಪಿಸುತ್ತಿತ್ತು. ಹಾಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಕಷ್ಟಪಡಬೇಕಾಯಿತು.

ಬೆಂಕಿ ನಂದಿಸಲು ಹರಸಾಹಸ
ಬೆಂಕಿ ವ್ಯಾಪಕವಾಗಿ ಹಬ್ಬುತ್ತಿದ್ದರಿಂದ ಅಕ್ಕಪಕ್ಕದ ಊರುಗಳಿಂದಲು ಅಗ್ನಿಶಾಮಕ ವಾಹನಗಳು, ಸಿಬ್ಬಂದಿಯನ್ನು ಕರೆಯಿಸಲಾಯಿತು. 50ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ, ತರೀಕೆರೆ, ಚನ್ನಗಿರಿ, ಕಡೂರು, ಭದ್ರಾವತಿಯ ಎಂಪಿಎಂ, ವಿಐಎಸ್ಎಲ್ ಅಗ್ನಿಶಾಮಕ ಘಟಕದಿಂದಲೂ ವಾಹನಗಳು, ಸಿಬ್ಬಂದಿಯನ್ನು ಕರೆಯಿಸಿಕೊಂಡು ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು.

ಅಕ್ಕಪಕ್ಕದ ಕಟ್ಟಡಗಳಲ್ಲಿ ಆತಂಕ
ಬೆಂಕಿಯಿಂದಾಗಿ ಅಕ್ಕಪಕ್ಕದ ಕಟ್ಟಡದ ಜನರು ಆತಂಕಕ್ಕೀಡಾದರು. ರಾತ್ರಿ ಇಡೀ ನಿದ್ರೆ ಬಿಟ್ಟು ಮನೆಗಳಿಂದ ಹೊರಗೆ ಉಳಿದರು. ಬೆಂಕಿ ಹೊತ್ತಿಕೊಂಡು, ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಕ್ಕಪಕ್ಕದ ಕಟ್ಟಡದ ಜನರು, ಮನೆಯಲ್ಲಿದ್ದ ಸಿಲಿಂಡರ್ಗಳನ್ನು ಹೊರಗೆ ತಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದರು. ಈ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನೆರವಾದರು. ಆದರೆ ಬೆಂಕಿಯ ತೀವ್ರತೆಯಿಂದಾಗಿ ಅಕ್ಕಪಕ್ಕದ ಒಂದಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಸಾಮಿಲ್ ಪಕ್ಕದಲ್ಲಿದ್ದ ಎರಡು ಅಂಗಡಿಗಳು ಸುಟ್ಟು ಕರಕಲಾಗಿದೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಕಂಟ್ರೋಲ್ಗೆ ಬಂದ ಬೆಂಕಿ
ಸತತ 8 ಗಂಟೆ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ. ಈಗ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ವೇಳೆ ಮತ್ತೆ ಬೆಂಕಿ ಕಾಣಿಸಿಕೊಂಡರೆ ಕ್ರಮ ಕೈಗೊಳ್ಳಲು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಭದ್ರಾವತಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕಿಟ್ನಿಂದಾಗಿ ಬೆಂಕಿ ಹೊತ್ತುಕೊಂಡಿರುವ ಬಗ್ಗೆ ಶಂಕೆ ಇದೆ. ಆದರೆ ಕಿಡಿಗೇಡಿ ಕೃತ್ಯವನ್ನು ತಳ್ಳಿಹಾಕುವಂತಿಲ್ಲ. ರಾತ್ರಿ 10 ಗಂಟೆ ಹೊತ್ತಿಗೆ ಸಾಮಿಲ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಸಾಮಿಲ್ ಮಾಲೀಕರಿಗೆ ಮಾಹಿತಿ ತಿಳಿಸಲು ಮುಂದಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರೀ ಎತ್ತರದವರೆಗೂ ಬೆಂಕಿಯ ಕೆನ್ನಾಲಿಗೆ ಇತ್ತು.

ಅಕ್ಕಪಕ್ಕದ ಕಟ್ಟಡದಲ್ಲಿ ಆತಂಕ
ಪ್ರಾಣದ ಹಂಗು ತೊರೆದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕಟ್ಟಡಗಳಿಗೆ ಹಾನಿಯಾಗಿರುವ ಶಂಕೆ ಇರುವುದರಿಂದ, ಅಕ್ಕಪಕ್ಕದ ಕಟ್ಟಡದ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ.
ಸದ್ಯ ಕಟ್ಟಡಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಕಿ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೇ ವಿವಿಧ ಬಡಾವಣೆಗಳಿಂದ ಜನರು ಮಂಜುನಾಥ ಸಾಮಿಲ್ ಕಡೆಗೆ ಬರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.












Click it and Unblock the Notifications