ರಾಜ್ಯದ ಪ್ರಸಿದ್ದ ಸಾಗರ ಮಾರಿಕಾಂಬಾ ಜಾತ್ರೆಗೆ ಇಂದು ಚಾಲನೆ
ಶಿವಮೊಗ್ಗ ಫೆಬ್ರವರಿ 18: ರಾಜ್ಯದ ಎರಡನೇ ಅತೀ ದೊಡ್ಡ ಸುಪ್ರಸಿದ್ಧ ಸಾಗರ ಮಾರಿಕಾಂಬಾ ಜಾತ್ರೆಯು ಇಂದಿನಿಂದ ಆರಂಭವಾಗಿದ್ದು, ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.
3 ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಜಾತ್ರಾ ಸಮಿತಿ ಸಕಲ ಸಿದ್ದತೆ ಮಾಡಿಕೊಂಡಿದೆ. ಇತಿಹಾಸ ಪ್ರಸಿದ್ಧ ಸಾಗರ ಮಾರಿಕಾಂಬಾ ಜಾತ್ರೆ ಸುಮಾರು 15 ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಸಾಗರ ನಗರವೆಲ್ಲಾ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಗರದ ಪ್ರಮುಖ ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ಲಕ್ಷಾಂತರ ಜನರು ಆಗಮಿಸಿ 9 ದಿನಗಳ ಕಾಲ ದೇವಿಯ ದರ್ಶನ ಪಡೆದುಕೊಳ್ಳಲಿದ್ದಾರೆ. ಫೆ.26 ರಂದು ಜಾತ್ರೆಗೆ ತೆರೆಬೀಳಲಿದೆ.

ನಗರದಾದ್ಯಂತ ವಿದ್ಯುತ್ ದೀಪಾಲಂಕಾರ
ಇನ್ನೂ 15 ದಿನಗಳ ಕಾಲ ನಗರ ವಿದ್ಯುತ್ ಅಲಂಕಾರ ಜನಜಂಗುಳಿಯಿಂದ ಕಂಗೊಳಿಸಲಿದ್ದು, ಜಾತ್ರೆಗೆ ನಾಡಿನಾದ್ಯಂತ ಜನರು ಆಗಮಿಸಿ ಜಾತ್ರೆಯ ಸೊಬಗನ್ನುಕಣ್ತುಂಬಿಕೊಳ್ಳಲಿದ್ದಾರೆ.
ಈಗಾಗಲೇ ಜಾತ್ರೆಗೆ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ಆರಂಭವಾಗಿದ್ದು, ಅಂಕಿ ಹಾಕುವುದು, ಮರ ಕಡಿಯುವುದು, ರಂಗೋಲಿ ಬಿಡಿಸುವುದು, ಸೀರೆ ಭಾಸಿಂಗ, ಆಭರಣ ಅಲಂಕಾರ, ಬಾಗಿನ ಅರ್ಪಿಸುವುದು ಹೀಗೆ ಅನೇಕ ರೀತಿಯ ಸಕಲ ಧಾರ್ಮಿಕ ಕಾರ್ಯಗಳನ್ನು ಆರಂಭಿಸಲಾಗಿದೆ.

ಬ್ರಾಹ್ಮೀ ಮುಹೂರ್ತದಲ್ಲಿ ಮಹಾಪೂಜೆ
ಮಂಗಳವಾರ ಮಹಾ ಗಣಪತಿ ದೇವಾಲಯದಲ್ಲಿ ಮಾಂಗಲ್ಯ ಪೂಜೆ ಮಾಡಿಸಿ, ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ದೃಷ್ಠಿ ಇರಿಸಿ ದೇವಿಯ ಪ್ರತಿಷ್ಠಾಪನಾ ಮಹಾಪೂಜೆ ನಡೆಯುತ್ತದೆ.
ದೇವಿಯ ಪ್ರತಿಷ್ಠಾಪನೆಯ ನಂತರ ರಾತ್ರಿ 10 ಗಂಟೆಗೆ ಪೊತರಾಜನಿಂದ ಚಾಟಿ ಸೇವೆ, ಉಪ್ಪಾರ ಸಮಾಜದಿಂದ ಹಣ್ಣು ಒಪ್ಪಿಸುವ ಶಾಸ್ತ್ರ, ಶ್ರೀದೇವಿಯ ದಂಡಿನ ರಾಜಬೀದಿ ಉತ್ಸವ ನಡೆಯಲಿದೆ. ಇನ್ನು ಜಾತ್ರೆಗೆ ಆಗಮಿಸುವ ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು, ಯುವಕ ಮಂಡಳದವರು ಪಾನೀಯ ವ್ಯವಸ್ಥೆಯನ್ನು ಮಾಡಲಿದ್ದಾರೆ.

ಚರಗ ಚೆಲ್ಲುವ ಕಾರ್ಯಕ್ರಮ
ಉತ್ಸವದಲ್ಲಿ ಕೆಳದಿ ಡೊಳ್ಳು ಕುಣಿತ, ಮಂಗಳೂರಿನ ಹುಲಿವೇಶ, ಗಾರುಡಿಗ ಗೊಂಬೆ, ಸೋಮನ ಕುಣಿತ, ನಂದಿಕುಣಿತ, ವೀರಾಗಾಸೆ, ಗೊಂಬೆ ಕುಣಿತ, ಭಜರಂಗಿ ಸ್ತಬ್ಧ ಚಿತ್ರ, ನಗಾರಿ, ಡಿಜೆ ಸದ್ದಿನೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ.
ಬುಧವಾರ ಬೆಳಿಗ್ಗೆ ದೇವಿಯ ಗಂಡನ ಮನೆಯ ದೇಗುಲಕ್ಕೆ ಪ್ರವೇಶವಾಗುತ್ತದೆ, ನಂತರ ಕುರುಬ ಸಮಾಜದ ಮನೆಯಿಂದ ಘಟೇವು ತರುವುದು, ಛಲವಾದಿ ಸಮಾಜದವರಿಂದ ಚರಗ ಚೆಲ್ಲುವುದು ಕೋತರಾಜನಿಂದ ಗಾವುಗರಿ ಕಾರ್ಯಕ್ರಮ ನಡೆಯುತ್ತದೆ.

ದೇವಿಯ ಮೂರ್ತಿ ಆಕರ್ಷಣೆ
ಸಾಗರದ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯ ಅಂಗವಾಗಿ ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಫೆ.18 ರಿಂದ ಫೆ.29 ರ ವರೆಗೂ ಸ್ಥಳೀಯ ರಜೆ ನೀಡಲಾಗಿದ್ದು,
ಮಾರಿಕಾಂಬಾ ಜಾತ್ರೆಯ ವಿಶೇಷ ಆಕರ್ಷಣೆಯಾದ ದೇವಿಯ ರೌದ್ರವತಾರದ ಮೂರ್ತಿ ಪ್ರತಿ ಬಾರಿಯೂ ಗುಡಿಗಾರ್ ಮನೆತನದವರೇ ಬಣ್ಣ ಹಚ್ಚುತ್ತಾರೆ. ರೌದ್ರ ಮುಖ ಹೊತ್ತ ದೇವಿಯ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದ್ದು, 16 ಅಡಿ ಎತ್ತರ ಇರುವ ದೇವಿ ಮೂರ್ತಿ ಕಳೆದ 60 ಕ್ಕೂ ಹೆಚ್ಚು ವರ್ಷಗಳಿಂದ ಪೂಜಿಲ್ಪಟ್ಟಿದೆ. ಈ ಬಾರಿಯೂ ಅದೇ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ.












Click it and Unblock the Notifications