ಅಮಿತ್ ಶಾ ರಾಜ್ಯಕ್ಕೆ ಬಂದೋದ ಮೇಲೆಯೇ ಸಂಪುಟ ವಿಸ್ತರಣೆ: ಬಿಎಸ್ವೈ
ಶಿವಮೊಗ್ಗ, ಜನವರಿ 15: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ ಜನವರಿ 18 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಸಿಎಂ ಬಿಎಸ್ವೈ, ಜನವರಿ 18 ರಂದು ಹುಬ್ಬಳ್ಳಿಗೆ ಅಮಿತ್ ಶಾ ಬರಲಿದ್ದು, ಆ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು.
ಶಿಕಾರಿಪುರದ ನಿವಾಸದಲ್ಲಿ ಕುಟುಂಬದ ಜೊತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಪೂಜೆ ಸಲ್ಲಿಸಿದರು. ನಂತರ ಶ್ರೀ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಿಎಸ್ವೈ ಹಬ್ಬದ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೂ ಸ್ವತಃ ಪೂಜೆ ಮಾಡಿದರು.

ಕುಟುಂಬ ಸಮೇತ ಪೂಜೆ ಸಲ್ಲಿಸಿದ ಸಿಎಂ
ರಾಜ್ಯದ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಜನವರಿ 19 ರಂದು ಸ್ವಿಡ್ಜರ್ಲೆಂಡ್ ನ ದಾವೋಸ್ ಗೆ ತೆರಳಲಿದ್ದೇನೆ, 23 ಕ್ಕೆ ವಾಪಾಸು ಬರುತ್ತೇನೆ ಎಂದರು.
ದಾವೋಸ್ ನಲ್ಲಿ ನಡೆಯುವ ಸಮಾವೇಶದಲ್ಲಿ ಮೂರು ದಿನಗಳ ಕಾಲ ಭಾಗವಹಿಸಲಿದ್ದೇನೆ. ರಾಜ್ಯದಲ್ಲಿ ಬಂಡವಾಳ ತೊಡಗಿಸಲು ಕೈಗಾರಿಕೋದ್ಯಮಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ದಾವೋಸ್ ನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿ
ರಾಜ್ಯ ಬಜೆಟ್ ಕುರಿತು ಮಾತನಾಡಿದ ಬಿಎಸ್ವೈ ಅವರು, ಮಾರ್ಚ್ 5 ರಂದು ಬಜೆಟ್ ಮಂಡಿಸಲಿದ್ದೇನೆ. ಬಜೆಟ್ ಗಾಗಿ ಒಂದು ತಿಂಗಳ ಕಾಲ ತಯಾರಿ ನಡೆಯಲಿದೆ ಎಂದರು. ಫೆಬ್ರವರಿ ಅಂತ್ಯದೊಳಗೆ ಸಮಗ್ರ ಚರ್ಚೆ ನಡೆಸಿ, ಅಂತಿಮ ಅನುಮೋದನೆ ಪಡೆಯಲಾಗುತ್ತದೆ ಎಂದು ಹೇಳಿದರು.
ಹಣಕಾಸು ಸ್ಥಿತಿಗತಿ ನೋಡಿಕೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಜೊತೆಗೆ ಬಜೆಟ್ ನಲ್ಲಿ ಕೃಷಿಗೆ ಆದ್ಯತೆ ನೀಡಬೇಕೆಂದುಕೊಂಡಿದ್ದೇನೆ ಎಂದು ರೈತರಿಗೆ ಭರವಸೆ ನೀಡಿದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ
ನಂತರ ಸಾರ್ವಜನಿಕರಿಂದ ಅಹವಾಲು ಆಲಿಸಿ, ಜನರಿಂದ ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ಅವರು, ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಉಲ್ಬಣಗೊಂಡಿರುವುದಕ್ಕೆ ಸರಕಾರ ಈಗಾಗಲೇ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಕಳೆದ ಬಾರಿ ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ಮೊನ್ನೆಯಷ್ಟೇ ವೃದ್ಧೆ ಹೂವಮ್ಮ ಕೆಎಫ್ ಡಿ ಯಿಂದ ಸಾವನ್ನಪ್ಪಿದ್ದರು.

ಪ್ರತ್ಯೇಕ ಕೃಷಿ ಬಜೆಟ್ ಮಂಡನೆಗೆ ಚಿಂತನೆ
ವೀರಶೈವ ಪಂಚಮಸಾಲಿ ಪೀಠದ ಸ್ವಾಮಿಜಿ ನಿನ್ನೆ ಹರಿಹರದಲ್ಲಿ ತಮ್ಮ ಸಮಾಜದವರಿಗೆ ಸಚಿವ ಸ್ಥಾನ ಬೇಡಿಕೆ ಇಟ್ಟಿದ್ದರ ಕುರಿತು ಪ್ರತಿಕ್ರಿಯೆ ನೀಡಲು ಸಿಎಂ ಯಡಿಯೂರಪ್ಪ ನಿರಾಕರಿಸಿದರು.












Click it and Unblock the Notifications