ಶಿವಮೊಗ್ಗ: ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ; ಹಲವು ವಸ್ತುಗಳು ಭಸ್ಮ
ಶಿವಮೊಗ್ಗ, ಮಾರ್ಚ್ 16: ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಶಿವಮೊಗ್ಗ ತಾಲ್ಲೂಕಿನ ಹೊಳೆಹೊನ್ನೂರು ಸಮೀಪದ ನಿಂಬೆಗುಂದಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ರಾತ್ರಿ ಚಾರ್ಜ್ಗೆ ಹಾಕಿದ್ದಾಗ ವಾಹನ ಸ್ಫೋಟಗೊಂಡು ಅವಘಡ ಸಂಭವಿಸಿದೆ.
ಹೇಗಾಯ್ತು ಘಟನೆ?
ನಿಂಬೆಗುಂದಿ ಗ್ರಾಮದ ಕಾಡಪ್ಪರ ಮಲ್ಲಿಕಾರ್ಜುನ ಎಂಬುವವರಿಗೆ ಸೇರಿದ ಬೈಕ್ ಸ್ಫೋಟಗೊಂಡಿದೆ. ಮಲ್ಲಿಕಾರ್ಜುನ ಅವರ ಮಗ ಕಿರಣ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಮಾತನಾಡಿದ ಕಾಡಪ್ಪರ ಮಲ್ಲಿಕಾರ್ಜುನ ಅವರ ಮಗ ಪ್ರಶಾಂತ್, "ಎರಡೂವರೆ ಗಂಟೆ ಚಾರ್ಜ್ ಮಾಡಬೇಕು. ಆದರೆ ಒಂದು ಗಂಟೆ ಚಾರ್ಜ್ ಆಗುವ ಹೊತ್ತಿಗೆ ಬೈಕ್ ಸ್ಫೋಟಗೊಂಡಿದೆ. ಅಲ್ಲೇ ಪಕ್ಕದಲ್ಲಿ ಮಲಗಿದ್ದ ನಮ್ಮ ಅಣ್ಣ ಮಂಚದಿಂದ ಹಾರಿದ್ದಾನೆ. ಇಲ್ಲದಿದ್ದರೆ ಕಷ್ಟವಿತ್ತು,'' ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಎಲ್ಲವೂ ಬೆಂಕಿಗೆ ಆಹುತಿ
ಮಲ್ಲಿಕಾರ್ಜುನ ಅವರ ಮಗ ಕಿರಣ್ ಬೈಕ್ ಚಾರ್ಜ್ಗೆ ಹಾಕಿದ್ದರು. ಅಡಕೆ ಮನೆ ಬಳಿ ಚಾರ್ಜ್ಗೆ ಹಾಕಿ ಪಕ್ಕದಲ್ಲೇ ಇದ್ದ ಮಂಚದ ಮೇಲೆ ಮಲಗಿದ್ದರು. ಒಂದು ಗಂಟೆ ಚಾರ್ಜ್ ಆದ ಬಳಿಕ ಬೈಕ್ ಸ್ಫೋಟಗೊಂಡಿದೆ ಎಂದು ಆರೋಪಿಸಲಾಗಿದೆ.
ಬೈಕ್ ಸ್ಫೋಟಗೊಳ್ಳುತ್ತಿದ್ದಂತೆ ಕಿರಣ್ ಅವರು ಮಂಚದಿಂದ ಹಾರಿ ತಪ್ಪಿಸಿಕೊಂಡಿದ್ದಾರೆ. ಅವರು ಮಲಗಿದ್ದ ಜಾಗಕ್ಕೂ ಬೆಂಕಿ ವ್ಯಾಪಿಸಿದೆ. ಬೈಕ್ ಸ್ಫೋಟಗೊಂಡು ಅಡಕೆ ಮನೆಯಲ್ಲಿದ್ದ ವೆಲ್ಡಿಂಗ್ ಮೆಷಿನ್, ಗ್ಯಾಸ್ ಮೆಷಿನ್, ಚೀಲಗಳು ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಬೈಕ್ ಈಗ ಸೈಕಲ್ ಆಗಿದೆ
ಸ್ಫೋಟಗೊಂಡ ಕೆಲವೇ ಹೊತ್ತಿಗೆ ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ""ಸ್ಫೋಟವಾಗುತ್ತಿದ್ದ ಹಾಗೆ ಮೇನ್ ಸ್ವಿಚ್ ಆಫ್ ಮಾಡಿದೆವು. ಅಕ್ಕಪಕ್ಕದಲ್ಲೆಲ್ಲ ಬೆಂಕಿ ಹೊತ್ತಿಕೊಂಡಿತ್ತು. ಪೈಪ್ ಮೂಲಕ ನೀರು ಬಿಟ್ಟು ಬೆಂಕಿ ಆರಿಸಿದೆವು. ಅಷ್ಟು ಹೊತ್ತಿಗಾಗಲೇ ನಮ್ಮ ಬೈಕ್ ಸೈಕಲ್ ರೀತಿ ಆಗಿತ್ತು,'' ಅನ್ನುತ್ತಾರೆ ಪ್ರಶಾಂತ್.
ಕಂಪನಿ ಸಿಬ್ಬಂದಿ ದೌಡು
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಎಲೆಕ್ಟ್ರಿಕ್ ಬೈಕ್ ಕಂಪನಿಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಪರಿಹಾರದ ಭರವಸೆಯನ್ನು ನೀಡಿದ್ದಾರೆ ಎಂದು ಪ್ರಶಾಂತ್ ತಿಳಿಸಿದ್ದಾರೆ.












Click it and Unblock the Notifications