ಉಡುಪಿ, ಮಂಗಳೂರು ಸ್ಥಿತಿಯೆ ಶಿವಮೊಗ್ಗಕ್ಕೆ ಬರಲಿದೆ, ಡಿಕೆಶಿ ಎಚ್ಚರಿಕೆ
ಭದ್ರಾವತಿ, ಏಪ್ರಿಲ್ 6: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭದ್ರಾವತಿಗೆ ಭೇಟಿ ನೀಡಿದ್ದು, ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿದರು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಪ್ರಮುಖರು ಪಾಲ್ಗೊಂಡಿದ್ದರು. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ತಮ್ಮ ಪಕ್ಷದ ಮುಖಂಡರಿಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಜಿಲ್ಲೆಯ ರಾಜಕಾರಣದಿಂದ ಅಪಮಾನ
ಇದೆ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕಾರಣದಿಂದ ಇಡೀ ರಾಜ್ಯಕ್ಕೆ ದೊಡ್ಡ ಅವಮಾನವಾಗಿದೆ. ಬಂಡವಾಳ ತೊಡಗಿಸಿ ಅಭಿವೃದ್ಧಿ ಮಾಡಲು ಇಲ್ಲಿಗೆ ಯಾರೂ ಬರುವುದಿಲ್ಲ. ಇಲ್ಲಿನ ಜನ ಅರಬ್ ದೇಶಗಳತ್ತ ಉದ್ಯೋಗ ಅರಸಿ ಹೋಗಬೇಕಾದ ದಿನ ಬರಲಿದೆ. ಜಿಲ್ಲೆಯ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
''ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಗೆ ಒಂದಷ್ಟು ಅಭಿವೃದ್ಧಿ ಮಾಡಿದ್ದಾರೆ. ಇಲ್ಲ ಎಂದು ಹೇಳಲು ನಾನು ಸಿದ್ಧನಿಲ್ಲ. ಆದರೆ ಇಲ್ಲಿನ ಬಿಜೆಪಿ ರಾಜಕಾರಣಿಗಳು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಬಂಡವಾಳ ತೊಡಗಿಸಲು ಯಾರೂ ಮುಂದೆ ಬರುವುದಿಲ್ಲ. ಉಡುಪಿ ಹಾಗೂ ಮಂಗಳೂರಿನ ಜನ ಇಂದಿಗೂ ವ್ಯಾಪಾರ, ವ್ಯವಹಾರ ನಡೆಸಿ ಬದುಕು ಕಟ್ಟಿಕೊಳ್ಳಲು ಬೇರೆ ರಾಜ್ಯ, ದೇಶಗಳ ಕಡೆಗೆ ಹೋಗುತ್ತಿದ್ದಾರೆ. ಇಂತಹ ಸ್ಥಿತಿಗೆ ಶಿವಮೊಗ್ಗ ಜಿಲ್ಲೆಯೂ ತಲುಪಲಿದೆ. ಬರೀ ಕಿತ್ತಾಟ, ಜಗಳಗಳು ನಡೆಯುವ ಊರಿನಲ್ಲಿ ವಿಮಾನ ನಿಲ್ದಾಣ ಯಾಕೆ ಬೇಕು,'' ಎಂದು ಪ್ರಶ್ನಿಸಿದರು.

'ಭ್ರಷ್ಟಾಚಾರದಿಂದ ಕೂಡಿದ ಆಡಳಿತ'
''ಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ಹೊಸ ಹೊಸ ವಿಚಾರಗಳನ್ನು ತಂದು ಇಡೀ ರಾಜ್ಯಕ್ಕೆ ಬಿಜೆಪಿ ನಾಯಕರು ಕಪ್ಪುಚುಕ್ಕಿ ಇಟ್ಟಿದ್ದಾರೆ. ಬಿಜೆಪಿ ಆಡಳಿತ ಭ್ರಷ್ಟಾಚಾರದಿಂದ ಕೂಡಿದೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಬಿಜೆಪಿ ನಾಯಕರಲ್ಲೇ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಮುಂದೆ ಉತ್ತಮ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಬರಲಿದೆ. ಒಳ್ಳೆಯ ದಿನಗಳು ಎದುರಾಗಲಿವೆ'' ಎಂದರು.
'ಎಲ್ಲರೂ ಶ್ರೀಮಂತರಿಲ್ಲ'
ಇಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಬಡವರು, ರೈತರು, ಕಾರ್ಮಿಕರು ಇದ್ದಾರೆ. ರೈತರ ಆದಾಯ ದ್ವಿಗುಣವಾಗಲಿಲ್ಲ. ಬಿಜೆಪಿ ಸರ್ಕಾರದಿಂದ ಉದ್ಯೋಗ ಸೃಷ್ಟಿಯಾಗಿಲ್ಲ. ಜಿಲ್ಲೆಯಲ್ಲಿ ಬದಲಾವಣೆ ತರದಿದ್ದಲ್ಲಿ ಯಾರೂ ವ್ಯಾಪಾರ ವಹಿವಾಟು ನಡೆಸಲು ಮುಂದೆ ಬರುವುದಿಲ್ಲ. ಬಿಜೆಪಿ ಕಾರ್ಯಕರ್ತರ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಂತೆ ಕಾಣುತ್ತದೆ. ಅವರಿಗೆ ವೋಟು, ಸೀಟು ಬೇಕಷ್ಟೇ. ಆದರೆ ನಮ್ಮದು ಹಾಗಲ್ಲ. ನಮಗೆ ಶಿವಮೊಗ್ಗ ಜಿಲ್ಲೆ ಹಾಗೂ ಈ ರಾಜ್ಯದ ಅಭಿವೃದ್ಧಿ ಮುಖ್ಯ. ಜಿಲ್ಲೆಯ ವಿಚಾರ ಎಲ್ಲವೂ ತಿಳಿದಿದ್ದು ಉಳಿಸಿಕೊಳ್ಳುವ ಪ್ರಯತ್ನ ನಾವು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಸದಸ್ಯತ್ವ ಮಾಡದಿದ್ದರೆ ಮನೆಗೆ ನಡೆಯಿರಿ
ಕೆಲವು ಕ್ಷೇತ್ರಗಳಲ್ಲಿ ಸದಸ್ಯತ್ವ ಅಭಿಯಾನ ನಿಧಾನಗತಿಯಲ್ಲಿ ನಡೆಯುತ್ತಿದೆ. ಮುಖಂಡರು ಸದಸ್ಯತ್ವ ಅಭಿಯಾನವನ್ನು ಬಿರುಸುಗೊಳಿಸಬೇಕು. ಇಲ್ಲವೇ ಮನೆಗೆ ನಡೆಯಿರಿ ಎಂದು ಪಕ್ಷದ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಶಿಕಾರಿಪುರ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ನಿಧಾನಗತಿಯಲ್ಲಿ ಸಾಗಿದೆ. ಶಿವಮೊಗ್ಗದಲ್ಲಿ 23 ಸಾವಿರ ಹಾಗೂ ಭದ್ರಾವತಿಯಲ್ಲಿ ಕೇವಲ 9 ಸಾವಿರ ಸದಸ್ಯತ್ವ ಮಾತ್ರ ಆಗಿದೆ. ಪ್ರತಿ ಕ್ಷೇತ್ರದಲ್ಲಿ 40 ಸಾವಿರ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ಆಗಬೇಕು. ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಎಲ್ಲೆಡೆ ನಮ್ಮ ಪಕ್ಷದ ಮುಖಂಡರೇ ಇರುವಾಗ ಎಲ್ಲೆಡೆಯೂ ಶಾಸಕರೇ ಬರಬೇಕು ಎಂದೇನೂ ಇಲ್ಲ. ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವೇ ಸದಸ್ಯರು. ಹೆಚ್ಚು ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿ. ಇಲ್ಲವೆ ಮನೆಗೆ ತೆರಳಿ ಎಂದು ಮುಖಂಡರಿಗೆ ಎಚ್ಚರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸೂರಜ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಪ್ರಮುಖರಾದ ಆರ್. ಎಂ.ಮಂಜುನಾಥ ಗೌಡ, ಚಂದ್ರೇಗೌಡ, ಷಡಾಕ್ಷರಿ, ಪ್ರಪುಲ್ಲಾ ಮಧುಕರ್, ಅಗಾ ಸುಲ್ತಾನ್, ಆರ್.ವಿ.ವೆಂಕಟೇಶ್, ಯೋಗೀಶ್ ಇತರರಿದ್ದರು.












Click it and Unblock the Notifications