ಭದ್ರಾವತಿ: ಮೈದೊಳಲು ಗ್ರಾಮದಲ್ಲಿ ಸಾವಿನ ಸಂಖ್ಯೆ 7 ಕ್ಕೆ ಏರಿಕೆ
ಭದ್ರಾವತಿ, ಫೆಬ್ರವರಿ 19 : ಭದ್ರಾವತಿ ಸಮೀಪದ ಮೈದೊಳಲು ಗ್ರಾಮದಲ್ಲಿ ಸಾವಿನ ಸರಣಿ ಮುಂದುವರೆದಿದ್ದು, ಸಾವಿನ ಸಂಖ್ಯೆ 7 ಕ್ಕೇರಿದೆ. ಕಲುಷಿತ ನೀರು ಕುಡಿದು ಕಿರಿಯಪ್ಪ (42) ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಲುಷಿತ ನೀರು ಕುಡಿದು 2 ಸಾವು, 40 ಮಂದಿ ಅಸ್ವಸ್ಥ ಫೆಬ್ರವರಿ 11ರಂದು ಕಲುಷಿತ ಕುಡಿಯುವ ನೀರು ಸೇವಿಸಿ ಮೂವರು ಸಾವನ್ನಪ್ಪಿದ್ದರು. 40ಕ್ಕೂ ಅಧಿಕ ಜನರು ಶಿವಮೊಗ್ಗ ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭದ್ರಾವತಿ ಸಮೀಪದ ಮೈದೊಳಲು ಗ್ರಾಮಕ್ಕೆ ಟ್ಯಾಂಕರ್ ಮೂಲಕ ಗ್ರಾಮ ಪಂಚಾಯಿತಿ ಕುಡಿಯುವ ನೀರು ಸರಬರಾಜು ಮಾಡಿತ್ತು. ಈ ನೀರನ್ನು ಕುಡಿದ ಬಳಿಕ ಹಲವರು ಅಸ್ವಸ್ಥಗೊಂಡಿದ್ದರು.
ಕಳೆದ 15ದಿನಗಳ ಹಿಂದೆ ಇಲ್ಲಿ ಹೋಂ ಗಾರ್ಡ್ ಶಿಬಿರ ಏರ್ಪಡಿಸಲಾಗಿತ್ತು ಈ ಶಿಬಿರದಲ್ಲಿ ಶುಚಿತ್ವದ ಕೊರತೆ ಹಾಗೂ ಶೌಚಾಲಯದ ಕೊರತೆಯಿಂದ ಈ ರೋಗ ಹರಡಿರಬಹುದು ಎಂದು ಊಹಿಸಲಾಗಿದೆ. ಈ ಶಿಬಿರದಲ್ಲಿ ಕಾಲೆರಾ ಪೀಡಿತ ಭಾಗವಹಿಸಿರಬಹುದಾಗಿರುವುದರಿಂದ ಈ ಕಾಲೆರಾ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಮೈದೊಳಲು ಗ್ರಾಮದಲ್ಲಿ ಫೆಬ್ರವರಿ ಪ್ರಥಮ ವಾರ ಹೋಂಗಾರ್ಡ್ ಅಭ್ಯರ್ಥಿಗಳಿಗೆ ಐದು ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ 215 ಹೋಂಗಾರ್ಡ್ ಅಭ್ಯರ್ಥಿಗಳು ಭಾಗವಹಿಸಿದ್ದರು. ಇವರಿಗೆ ಸಮರ್ಪಕವಾಗಿ ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.