ಬನಾರಸ್-ಶಿವಮೊಗ್ಗ ಟೌನ್ ವಿಶೇಷ ರೈಲು ವೇಳಾಪಟ್ಟಿ ಬದಲಾವಣೆಗೆ ಒತ್ತಾಯ
ಶಿವಮೊಗ್ಗ, ಫೆಬ್ರವರಿ 24: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ-2025ಕ್ಕೆ ಮಲೆನಾಡ ಭಾಗದ ಜನರು ತೆರಳಲು ಅನುಕೂಲವಾಗುವಂತೆ ಶಿವಮೊಗ್ಗ ಟೌನ್-ಬನಾರಸ್ ನಡುವೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ರೈಲು ಫೆಬ್ರವರಿ 22ರಂದು ಶಿವಮೊಗ್ಗದಿಂದ ಹೊರಟಿದೆ. ಆದರೆ ಅದು ಪ್ರಯಾಗ್ ರಾಜ್ ತಲುಪುವುದು ತಡವಾಗಲಿದೆ. ಆದ್ದರಿಂದ ಈ ವಿಶೇಷ ರೈಲು ಬನಾರಸ್ನಿಂದ ಹೊರಡುವ ವೇಳಾಪಟ್ಟಿಯನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ.
ಫೆಬ್ರವರಿ 26ರ ತನಕ ಮಹಾಕುಂಭ ಮೇಳ ನಡೆಯಲಿದೆ. ಮಹಾಕುಂಭ ಮೇಳಕ್ಕೆ ಮಲೆನಾಡು ಕಡೆಯಿಂದ ಸಾಗುವ ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲನ್ನು ನೈಋತ್ಯ ರೈಲ್ವೆ ಓಡಿಸುತ್ತಿದೆ. ಶಿವಮೊಗ್ಗ ಟೌನ್ ಮತ್ತು ಬನಾರಸ್ ನಡುವಿನ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹಸಿರು ನಿಶಾನೆ ತೋರಿಸಿದ್ದರು.

ಶಿವಮೊಗ್ಗದಿಂದ ಹೊರಟಿರುವ ರೈಲು ಸಂಖ್ಯೆ 06223 ಶಿವಮೊಗ್ಗ ಟೌನ್ ಬನಾರಸ್ ವಿಶೇಷ ಎಕ್ಸ್ಪ್ರೆಸ್ ರೈಲು 5.45 ಗಂಟೆ ತಡವಾಗಿದೆ. ಪ್ರಯಾಗ್ ರಾಜ್ಗೆ ರೈಲು ಸೋಮವಾರ ಬೆಳಗ್ಗೆ 11.45ಕ್ಕೆ ತಲುಪಬೇಕಿತ್ತು. ಆದರೆ ಈಗ ರೈಲು ಸಂಜೆ 5 ಗಂಟೆಗೆ ತಲುಪುವ ನಿರೀಕ್ಷೆ ಇದೆ.
ವಾಪಸ್ ಬರುವ ವೇಳಾಪಟ್ಟಿ ಬದಲಿಸಿ: ರೈಲು ನಿಲ್ದಾಣದಿಂದ ತ್ರಿವೇಣಿ ಸಂಗಮಕ್ಕೆ 14 ಕಿ. ಮೀ. ನಡೆದು ಸಾಗಬೇಕು. ಅಲ್ಲದೇ ರಾತ್ರಿ ಪುಣ್ಯ ಸ್ನಾನಕ್ಕೆ ಅವಕಾಶವಿಲ್ಲ. ಆದ್ದರಿಂದ ವಿಶೇಷ ರೈಲಿನಲ್ಲಿ ಸಂಚಾರ ನಡೆಸಿರುವ ಭಕ್ತರು ಒಂದು ದಿನ ಕಾಯುವುದು ಅನಿವಾರ್ಯವಾಗಿದೆ.
ನೈಋತ್ಯ ರೈಲ್ವೆ ವೇಳಾಪಟ್ಟಿಯ ಪ್ರಕಾರ ವಾಪಸ್ ಆಗುವ ಮಾರ್ಗದಲ್ಲಿ ರೈಲು ಸಂಖ್ಯೆ 06224 ಬನಾರಸ್-ಶಿವಮೊಗ್ಗ ಟೌನ್ ವಿಶೇಷ ಎಕ್ಸ್ಪ್ರೆಸ್ ರೈಲು ಬನಾರಸ್ನಿಂದ ಫೆಬ್ರವರಿ 25ರಂದು ಬೆಳಗಿನ ಜಾವ 1:30ಕ್ಕೆ ಹೊರಟು, ಫೆಬ್ರವರಿ 27ರಂದು ಬೆಳಗ್ಗೆ 6:45ಕ್ಕೆ ಶಿವಮೊಗ್ಗ ಟೌನ್ಗೆ ಆಗಮಿಸಬೇಕಿದೆ.
ಆದರೆ ರೈಲು ತಡವಾಗಿರುವ ಕಾರಣ ಬನಾರಸ್ನಿಂದ ಹೊರಡುವ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು. ಭಕ್ತರಿಗೆ ಕಡಿಮೆ ಸಮಯ ಸಿಗಲಿದ್ದು, ಈ ಅವಧಿಯಲ್ಲಿ ಪುಣ್ಯ ಸ್ನಾನ ಮಾಡಿ, ಹೊರಡಲು ಅವಕಾಶ ಸಿಗುವುದಿಲ್ಲ ಎಂದು ಭಕ್ತರು ಹೇಳಿದ್ದಾರೆ.
ಭಕ್ತರ ಬೇಡಿಕೆ ಕುರಿತು ಮಾತನಾಡಿರುವ ಸಂಸದ ಬಿ. ವೈ. ರಾಘವೇಂದ್ರ, "ರೈಲು ತಡವಾಗಿ ಹೋಗುತ್ತಿರುವ ವಿಚಾರ ತಿಳಿದುಬಂದಿದೆ. ವಾಪಸ್ ಆಗುವ ರೈಲಿನ ವೇಳಾಪಟ್ಟಿ ಬದಲಾವಣೆಗೆ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಬನಾರಸ್ನಿಂದ ವಾಸಪ್ ಆಗುವ ಮಾರ್ಗದಲ್ಲಿ ರೈಲು ಮಿರ್ಜಾಪುರ, ಪ್ರಯಾಗ್ರಾಜ್ ಚಿಯೋಕಿ, ಮಾಣಿಕ್ಪುರ್, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ದೌಂಡ್, ಕೊಪರಗಾಂವ್, ಮನ್ಮಾಡ್, ಭುಸಾವಲ್, ಇಟಾರ್ಸಿ, ಪಿಪರಿಯಾ, ನರಸಿಂಗ್ಪುರ್, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಇಂಡಿ ರೋಡ್, ಸೋಲಾಪುರ, ರಾಯದುರ್ಗ, ಬಳ್ಳಾರಿ ಕ್ಯಾಂಟ್, ಹೊಸಪೇಟೆ, ಕೊಪ್ಪಳ, ಗದಗ, ಹೋಳೆ ಆಲೂರು, ಬಾದಾಮಿ, ಭದ್ರಾವತಿ, ಬಿರೂರು, ಚಿಕ್ಕಜಾಜೂರು, ಚಿತ್ರದುರ್ಗ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ರೈಲು 11 ಎಸಿ ತ್ರಿ-ಟೈರ್ ಬೋಗಿಗಳು, 4 ಸ್ಲೀಪರ್ ಕ್ಲಾಸ್ ಬೋಗಿಗಳು, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಲಗೇಜ್/ ಜನರೇಟರ್/ ಬ್ರೇಕ್ ವ್ಯಾನ್ಗಳನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಿ.












Click it and Unblock the Notifications