ಮುಂಗಾರು ಮುಗಿಯುವವರೆಗೂ ಮರಳುಗಾರಿಕೆ ಸ್ಥಗಿತಕ್ಕೆ ಶಿವಮೊಗ್ಗ ಡಿಸಿ ಸೂಚನೆ
ಶಿವಮೊಗ್ಗ, ಜೂನ್ 17: ಮುಂಗಾರು ಮುಗಿಯುವ ತನಕ ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Recommended Video
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ, ಮರಳು ಗಣಿಗಾರಿಕೆಯನ್ನು ಜೂನ್ 6ರಿಂದ ಮುಂಗಾರು ಮುಕ್ತಾಯವಾಗುವ ತನಕ ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಸ್ಟಾಕ್ ವಾರ್ಡ್ ಗಳಲ್ಲಿರುವ ಮರಳನ್ನು ನಿಗದಿತ ಕಾಲಮಿತಿಯ ಒಳಗಾಗಿ ಸಾಗಾಣಿಕೆ ಮಾಡಲು ಅವಕಾಶ ನೀಡಲಾಗುವುದು. ಮುಂಗಾರಿನ ಅವಧಿಯಲ್ಲಿ ಮರಳುಗಾರಿಕೆ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ತಾಲೂಕು ಮಟ್ಟದ ಸಮಿತಿಯು ಇದಕ್ಕೆ ಜವಾಬ್ದಾರಿಯಾಗಿರುವುದು ಎಂದು ಡಿಸಿ ತಿಳಿಸಿದ್ದಾರೆ.
ತಪಾಸಣೆ ತೀವ್ರಗೊಳಿಸಿ: ಪ್ರಸಕ್ತ ಸಾಲಿನಲ್ಲಿ ಮೇ ಅಂತ್ಯದವರೆಗೆ ಅಕ್ರಮ ಮರಳು ಸಾಗಾಣಿಕೆ ಸಂಬಂಧ 16 ವಾಹನಗಳನ್ನು ಜಪ್ತಿ ಮಾಡಲಾಗಿದೆ. 1.48ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಮರಳು ಸಾಗಾಣಿಕೆಯಿಂದ 24.23ಲಕ್ಷ ರೂ. ರಾಜಧನ ಸಂಗ್ರಹಿಸಲಾಗಿದೆ. ಹೆಚ್ಚುವರಿ ನಿಯತಕಾಲಿಕ ಪಾವತಿ ಮೊತ್ತ ರೂ.2.61ಕೋಟಿ ರೂ. ಸಂಗ್ರಹಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ 8ಲಕ್ಷ ರೂ. ರಾಜಧನ ದಂಡ ಪಡೆಯಲಾಗಿದೆ. ಕಟ್ಟಡ ಕಲ್ಲುಗಣಿಗಾರಿಕೆಯಿಂದ 8.78 ಲಕ್ಷ ರೂ. ರಾಜಧನ ಪಡೆಯಲಾಗಿದ್ದು, ಕಟ್ಟಡ ಕಲ್ಲು ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಯಿಂದ 3.96ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಶ್ಮಿ ಮಾಹಿತಿ ನೀಡಿದರು.

ಅನಧಿಕೃತವಾಗಿ ಮರಳುಗಾರಿಕೆ, ಅಕ್ರಮ ಗಣಿಗಾರಿಕೆಯನ್ನು ತಡೆಯಲು ತಪಾಸಣೆಯನ್ನು ತೀವ್ರಗೊಳಿಸಬೇಕು ಮತ್ತು ಸರ್ಕಾರಿ ಆಸ್ತಿ ಕಳ್ಳತನದ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಳ್ಳಕೊಳ್ಳದಿಂದ ಮರಳು ತೆಗೆಯಲು ಬ್ಲಾಕ್ ಗುರುತಿಸುವ ಕುರಿತು ತಾಲೂಕು ಮಟ್ಟದ ಸಮಿತಿಯಿಂದ ಶಿಫಾರಸು ಬಂದರೆ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಪರಿಶೀಲಿಸಿ ಅಧಿಸೂಚನೆ ಹೊರಡಿಸಲಿದೆ ಎಂದರು.












Click it and Unblock the Notifications