ಶಿವಮೊಗ್ಗ: ಒಡೆದ ಭದ್ರಾ ಎಡದಂಡೆ ಕಾಲುವೆ ತಡೆಗೋಡೆ, ಬೆಳೆಗಳು ಜಲಾವೃತ
ಶಿವಮೊಗ್ಗ, ಆಗಸ್ಟ್, 30: ಭದ್ರಾವತಿ ತಾಲೂಕಿನ ಹೊಸೂರು ತಾಂಡದ ಬಳಿ ಸೋಮವಾರ ರಾತ್ರಿ ವರುಣ ಆರ್ಭಟಿಸಿದ್ದಾನೆ. ಪರಿಣಾಮ ಭದ್ರಾ ಎಡದಂಡೆ ಕಾಲುವೆ ತಡೆಗೋಡೆ ಒಡೆದು ಹೋಗಿದ್ದು, ನೂರಾರು ಎಕರೆ ತೋಟ, ಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತವಾಗಿದೆ.
ಭದ್ರಾವತಿ ತಾಲೂಕು ಹೊಸೂರು ತಾಂಡದ ಬಳಿ ಈ ಘಟನೆ ಸಂಭವಿಸಿದೆ. ರಾತ್ರಿ ಸುರಿದ ಭಾರೀ ಮಳೆಗೆ ಭದ್ರಾ ಎಡದಂಡೆ ಕಾಲುವೆಯ ತಡೆಗೋಡೆ ಕುಸಿದಿದೆ. 1955ರಲ್ಲಿ ಈ ಕಾಲುವೆಯ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಗೌಣದ ಕೆರೆ, ಗುರುವಿಕಟ್ಟೆ, ಅಸಲಿಕಟ್ಟೆ ಕೋಡಿಬಿದ್ದ ಪರಿಣಾಮ ಕಾಲುವೆ ತಡೆಗೋಡೆ ಒಡೆದಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.
Breaking: ಮಳೆ ಆರ್ಭಟ; ಮಂಗಳವಾರವೂ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ತೋಟ, ಗದ್ದೆಗಳಿಗೆ ನುಗ್ಗಿದ ನೀರು; ಕಾಲುವೆ ತಡೆಗೋಡೆ ಒಡೆದು ಹೋಗಿರುವುದರಿಂದ ಹೊಸೂರು ತಾಂಡದ ನೂರಾರು ಎಕರೆ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಅಡಕೆ ತೋಟಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಲೇ ಇದ್ದು, ಇದರಿಂದ ಅಲ್ಲಿನ ರೈತರು ಆತಂಕಕ್ಕೀಡಾಗಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಡಿ ಬಿದ್ದ ಜನ್ನಾಪುರ ಕೆರೆ; ಭಾರೀ ಮಳೆ ಸುರಿದ ಕಾರಣ ಜನ್ನಾಪುರ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ರಸ್ತೆಯ ಮೇಲೆ ನೀರು ಹರಿದು ಪಕ್ಕದ ಜಮೀನಿಗೆ ನುಗ್ಗಿದೆ. ಇದರಿಂದ ಜನ್ನಾಪುರ ಮತ್ತು ಭದ್ರಾವತಿ ನಡುವಿನ ರಸ್ತೆ ಚರಂಡಿಯಂತೆ ಆಗಿದೆ. ಇನ್ನು ಜನ್ನಾಪುರ ಕೆರೆ ನೀರು ಪಕ್ಕದ ಜಮೀನುಗಳಿಗೆ ಹರಿದು ಹೋಗುತ್ತಿದೆ. ಇದರಿಂದ ಪಕ್ಕದ ಜಮೀನುಗಳಲ್ಲಿ ಬೆಳೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮತ್ತೊಂದೆಡೆ ಕೆರೆ ಕೋಡಿ ಬಿದ್ದಿದ್ದರಿಂದ ಮೀನುಗಳು ರಸ್ತೆಗೆ ಹರಿದು ಬರುತ್ತಿದ್ದು, ಜನರು ಮೀನುಗಳನ್ನು ಹಿಡಿದು ಕೊಂಡೊಯ್ಯುತ್ತಿದ್ದಾರೆ.
ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದು, ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆರಾಯ ಅಬ್ಬರಸಿ ಬೊಬ್ಬೆರೆಯುತ್ತಿದ್ದಾನೆ. ಮಳೆ ಆರ್ಭಟದಿಂದ ನದಿ, ಕೊಳ್ಳಗಳು ತುಂಬಿ ಹರಿಯುತ್ತಿದ್ದು ಅಲ್ಲಿನ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭದ್ರಾವತಿಯಲ್ಲಿ ಒಂದೇ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಜಲಾವೃತವಾಗಿವೆ. ಇನ್ನು ತೋಟಗಳಲ್ಲಿಯೂ ಸಹ ಮಳೆ ನೀರು ನದಿಯಂತೆ ಹರಿಯುತ್ತಿದೆ. ಬೆಳೆಗಳೆಲ್ಲ ನೀರುಪಾಲಾಗಿದ್ದು, ಅಲ್ಲಿನ ಜನರು ಅಕ್ಷರಸಃ ತತ್ತರಿಸಿ ಹೋಗಿದ್ದಾರೆ.