ಶಿವಮೊಗ್ಗ; ಜಂಬೂ ಸವಾರಿಗೆ ಕ್ಷಣಗಣನೆ, ನಗರದಾದ್ಯಂತ ವಿದ್ಯುತ್ ದೀಪಾಲಂಕಾರ
ಶಿವಮೊಗ್ಗ, ಅ.05: ದಸರಾ ಅಂಗವಾಗಿ ಶಿವಮೊಗ್ಗದಲ್ಲಿ ಬುಧವಾರ ಜಂಬೂ ಸವಾರಿ ಆಯೋಜಿಸಲಾಗಿದೆ. ಸಕ್ರೆಬೈಲು ಬಿಡಾರದಿಂದ ಮೂರು ಆನೆಗಳು ನಗರಕ್ಕೆ ಆಗಮಿಸಿವೆ. ಅವುಗಳನ್ನು ನೋಡಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಜನರು ಕೋಟೆ ರಸ್ತೆಗೆ ಅಗಮಿಸುತ್ತಿದ್ದಾರೆ.
ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳು ಬಿಡಾರ ಹೂಡಿವೆ. ಅಂಬಾರಿ ಹೊರಲು ಸಿದ್ಧವಾಗಿರುವ ಸಾಗರ, ಭಾನುಮತಿ ಮತ್ತು ನೇತ್ರಾವತಿ ಆನೆಗಳು ಆಗಮಿಸಿವೆ. ಇವುಗಳನ್ನು ನೋಡಲು ಜನರ ಶಾಲೆ ಬಳಿ ಬರುತ್ತಿದ್ದಾರೆ.
ಕಳೆದ ಭಾರಿ ಆನೆಗಳು ಆಗಮಿಸಿದ್ದಾಗ ವಾಸವಿ ಶಾಲೆ ಆವರಣದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿತ್ತು. ಆದರೆ ಈ ಭಾರಿ ಆನೆಗಳಿಂದ ಜನರನ್ನು ದೂರ ನಿಲ್ಲಿಸಲಾಗುತ್ತಿದೆ. ಆನೆಗಳಿಗೆ ಬಳಿ ಯಾರೂ ಹೋಗದಂತೆ ನಿರ್ಬಂಧಿಸಲಾಗಿದೆ.
ಜನರು ಕಾಂಪೌಂಡ್ ಹೊರಗೆ ನಿಂತು ಆನೆಗಳನ್ನು ನೋಡಬೇಕಾಗಿದೆ. ಅಲ್ಲಿಂದಲೆ ಫೋಟೊ ಕ್ಲಿಕ್ಕಿಸಬೇಕಾಗಿದೆ. ಮಕ್ಕಳು, ಕುಟುಂಬದವರನ್ನು ಕರೆತಂದವರು ಆನೆಗಳ ಬಳಿಗೆ ಹೋಗಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಆದರೆ ಮುಂಜಾಗ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಆನೆಗಳಿಗೆ ಅಲಂಕಾರ, ವೈದ್ಯಕೀಯ ಪರೀಕ್ಷೆ:
ಜಂಬೂ ಸವಾರಿ ಹಿನ್ನೆಲೆ ಸಾಗರ, ಭಾನುಮತಿ ಮತ್ತು ನೇತ್ರಾವತಿ ಆನೆಗಳಿಗೆ ಇವತ್ತು ಅಲಂಕಾರ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಬೆಳಗ್ಗೆಯಿಂದಲೆ ಕಲಾವಿದರು ಆನೆಗಳಿಗೆ ಅಲಂಕಾರ ಆರಂಭಿಸಲಿದ್ದಾರೆ. ಈ ನಡುವೆ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೊದಲು ವೈದ್ಯರಿಂದ ಪರಿಶೀಲನೆ ನಡೆಸುತ್ತಾರೆ. ಆ ಬಳಿಕ ಆನೆಗಳನ್ನು ರಸ್ತೆಗಿಳಿಸಲಾಗುತ್ತದೆ.
ವಿಜಯ ದಶಮಿ ಅಂಗವಾಗಿ ಶಿವಮೊಗ್ಗ ನಗರದಾದ್ಯಂತ ವಿವಿಧ ಬಗೆಯಲ್ಲಿ ಪ್ರಮುಖ ರಸ್ತೆಗಳು, ಕಚೇರಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಇದರಿಂದ ಶಿವಮೊಗ್ಗ ನಗರ ಜಗಮಗವೆನ್ನುತ್ತಿದೆ.
ನಗರದ ಬಿ.ಹೆಚ್.ರಸ್ತೆ, ನೆಹರೂ ರೋಡ್ ಸೇರಿ ಜಂಬೂ ಸವಾರಿ ಸಾಗುವ ಮಾರ್ಗದುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ತುಂಗಾ ನದಿಯ ಸೇತುವೆಗಳು, ಶಿವಪ್ಪನಾಯಕ ಪ್ರತಿಮೆ, ಅಮೀರ್ ಅಹಮದ್ ಸರ್ಕಲ್ ನಲ್ಲಿಯು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಇನ್ನು, ಜಂಬೂ ಸವಾರಿ ಸಾಗುವ ಮಾರ್ಗದುದ್ದಕ್ಕೂ ಎರಡು ಬದಿಯಲ್ಲಿ ಬಣ್ಣ ಬಣ್ಣದ ಸೀರಿಯಲ್ ಸೆಟ್ ಹಾಕಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಸೇರಿ ಪ್ರಮುಖ ಕಚೇರಿಗಳನ್ನು ಕೂಡ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.