ಶಿವಮೊಗ್ಗ ಉಪಚುನಾವಣೆ: ಜೆಡಿಎಸ್ ಮುಂದೆ ಮಂಡಿಯೂರಿದ ಕಾಂಗ್ರೆಸ್
Recommended Video
1951-2014ರ ಅವಧಿಯಲ್ಲಿ ನಡೆದ ಹದಿನೇಳು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆದ್ದದ್ದು ಹನ್ನೊಂದು ಚುನಾವಣೆಯನ್ನು, ಇನ್ನುಳಿದಂತೆ ಬಿಜೆಪಿ ನಾಲ್ಕು ಬಾರಿ ಮತ್ತು ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ ಮತ್ತು ಸಮಾಜವಾದಿ ಪಕ್ಷ ತಲಾ ಬಂದು ಬಾರಿ.
ಈ ಹಿಂದೆ ಹನ್ನೊಂದು ಬಾರಿ ಕ್ಷೇತ್ರದಿಂದ ಗೆದ್ದಿದ್ದರೂ, ಯಡಿಯೂರಪ್ಪನವರಿಂದ ತೆರವಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕಣದಿಂದ ಹಿಂದೆ ಸರಿದು, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಆ ಮೂಲಕ, ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಸೀಟು ಚೌಕಾಸಿ ಮಾಡಲು ಜೆಡಿಎಸ್ ಪಕ್ಷಕ್ಕೆ ಅನುವು ಮಾಡಿಕೊಟ್ಟಂತಾಗಿದೆ.
ರಾಮನಗರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲು ಜೆಡಿಎಸ್ ಪೂರ್ವತಯಾರಿ ನಡೆಸಿಕೊಂಡಿತ್ತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ತೀವ್ರವಾಗಿ ಕಾಡಿದ ಅಭ್ಯರ್ಥಿಗಳ ಕೊರತೆ ಅಥವಾ ನಿರುತ್ಸಾಹದಿಂದ, ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವ ಅನಿರ್ವಾತೆಯಲ್ಲಿ ಕಾಂಗ್ರೆಸ್ ಬಿತ್ತು.
ಶಿವಮೊಗ್ಗ ಉಪ ಚುನಾವಣೆ : ಮೂವರು ಮಾಜಿ ಸಿಎಂ ಪುತ್ರರು ಕಣದಲ್ಲಿ!
ದೇವೇಗೌಡರಿಗೂ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಆದರೆ, 2019ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಹರಸಾಹಸಪಟ್ಟು, ಮನವೊಲಿಸಿ ಮಧು ಬಂಗಾರಪ್ಪನವರಿಗೆ ಬಿಫಾರಂ ನೀಡಿದ್ದಾರೆ.
ಉಪ ಚುನಾವಣೆ 2018 : ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?
ಕಳೆದ ಚುನವಾಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಸಹೋದರ ಕುಮಾರ್ ಬಂಗಾರಪ್ಪನವರ ಎದುರು ಪರಾಭವಗೊಂಡ ನಂತರ, ಮಧು ಬಂಗಾರಪ್ಪನವರ ಹೆಸರು ವಿಧಾನಪರಿಷತ್ ಮತ್ತು ರಾಮನಗರ ಉಪಚುನಾವಣೆಯಲ್ಲಿ ಕೇಳಿಬರುತ್ತಿತ್ತೇ ಹೊರತು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ವಿಚಾರದಲ್ಲಿ ಇವರ ಹೆಸರು ಕೇಳಿಬರುತ್ತಿರಲಿಲ್ಲ.
ಜೆಡಿಎಸ್ಸಿಗೆ ಬಿಟ್ಟುಕೊಡುವ ಲೆಕ್ಕಚಾರದಲ್ಲಿ ಇರಲಿಲ್ಲ
ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಡುವ ಯಾವ ಹೊಂದಾಣಿಕೆ ಲೆಕ್ಕಚಾರದಲ್ಲೂ ಇರಲಿಲ್ಲ. ಯಾಕೆಂದರೆ, ಇಲ್ಲಿ ನೇರ ಸ್ಪರ್ಧೆಯಿರುವುದು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನದಲ್ಲಿ ಇದ್ದರು. ಆದರೆ, ಯಾವಾಗ ಕಾಂಗ್ರೆಸ್ಸಿಗೆ ಅಭ್ಯರ್ಥಿಗಳ ಕೊರತೆ ಕಾಡಿತೋ, ಬೇರೆ ದಾರಿಯಿಲ್ಲದೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಯಿತು.
ಮೂವರೂ ಮನಸ್ಸು ಮಾಡಲಿಲ್ಲ
ಕಾಂಗ್ರೆಸ್ ಪಕ್ಷದಿಂದ ಮಂಜುನಾಥ ಬಂಡಾರಿ ಹೆಸರು ಮಂಚೂಣೆಯಲ್ಲಿತ್ತು. ಜೊತೆಗೆ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಪರಾಭವಗೊಂಡಿದ್ದ ಕಾಗೋಡು ತಿಮ್ಮಪ್ಪ ಮತ್ತು ತೀರ್ಥಹಳ್ಳಿ ಕ್ಷೇತ್ರದಿಂದ ಸೋಲುಂಡಿದ್ದ ಕಿಮ್ಮನೆ ರತ್ನಾಕರ ಅವರ ಹೆಸರೂ ಕೇಳಿಬರುತ್ತಿತ್ತು. ಇವರಲ್ಲೊಬ್ಬರಿಗೆ ಟಿಕೆಟ್ ನೀಡಲೂ ಕಾಂಗ್ರೆಸ್ ಮುಂದಾಗಿತ್ತು, ಆದರೆ ಇವರ್ಯಾರೂ ಮನಸ್ಸು ಮಾಡದೇ ಇದ್ದಿದ್ದರಿಂದ, ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬರಲಾಯಿತು.
ಶಿವಮೊಗ್ಗ: ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಘೋಷಣೆ
ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ (ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಸಾಗರ, ಬೈಂದೂರು) ಕಾಂಗ್ರೆಸ್ ಗೆದ್ದದ್ದು ಒಂದೇ ಒಂದು ಕ್ಷೇತ್ರವನ್ನು, ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು.
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಇದುವರೆಗಿನ ರಾಜಕೀಯದ ಪ್ರಕಾರ, ಜೆಡಿಎಸ್ಸಿಗೆ ಒಂದೆರಡು ಕ್ಷೇತ್ರದಲ್ಲಿ ನೆಲೆಯಿದೆಯೇ ಹೊರತು, ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಹಣಾಹಣಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಇಲ್ಲಿ ಸ್ಪಷ್ಟ ಮೇಲುಗೈ ಸಾಧಿಸುತ್ತಿದ್ದಾರೆ. ಹಾಗಾಗಿ, ಮಧು ಬಂಗಾರಪ್ಪ ಕೂಡ ಮನಸ್ಸಿಲ್ಲದ ಮನಸ್ಸಿನಿಂದ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ದೇವೇಗೌಡರ ಮನೆಗೆ ಹೋಗಿ, ಮಧು ಬಂಗಾರಪ್ಪ ಬಿಫಾರಂ ಪಡೆದರು
ಮಧು ಬಂಗಾರಪ್ಪನವರನ್ನು ಒಪ್ಪಿಸಲು ಕುಮಾರಸ್ವಾಮಿ ಭಾರೀ ಪ್ರಯತ್ನ ಪಡಬೇಕಾಯಿತು. ನಟ ಶಿವರಾಜ್ ಕುಮಾರ್, ಸಚಿವ ಡಿ ಕೆ ಶಿವಕುಮಾರ್ ಅವರಿಂದಲೂ ಹೇಳಿಸಬೇಕಾಯಿತು. ಕೊನೆಗೂ, ಬೆಳ್ಳಂಬೆಳಗ್ಗೆ ನೇರ ವಿಮಾನನಿಲ್ದಾಣದಿಂದ ದೇವೇಗೌಡರ ಮನೆಗೆ ಹೋಗಿ, ಮಧು ಬಂಗಾರಪ್ಪ ಬಿಫಾರಂ ಪಡೆದರು. ಒಟ್ಟಿನಲ್ಲಿ, ಶಿವಮೊಗ್ಗ ಉಪಚುನಾವಣೆಯ ಮಟ್ಟಿಗೆ ಹೇಳುವುದಾದರೆ, ಕಾಂಗ್ರೆಸ್ ಮಂಡಿಯೂರಿದ್ದಂತೂ ನಿಜ.