ಕಗ್ಗದ ಮೂಲಕ ಯತ್ನಾಳ್ಗೆ ವಿಜಯೇಂದ್ರ ತಿರುಗೇಟು!
ಶಿವಮೊಗ್ಗ, ಫೆಬ್ರವರಿ 16; "ಹಾವು, ಚೇಳುಗಳು ಯಡಿಯೂರಪ್ಪ ಅವರ ಕುಟುಂಬದಲ್ಲೇ ಇದ್ದಾವೆ" ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿರುಗೇಟು ನೀಡಿದರು.
ಮಂಗಳವಾರ ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಮಾತನಾಡಿದ ವಿಜಯೇಂದ್ರ, "ನಾನು ಹಾವು ಚೇಳು ಅಂತಾ ಉಲ್ಲೇಖ ಮಾಡಿದ್ದು ರಾಜಕೀಯ ವಿರೋಧಿಗಳಿಗೆ. ಡಿವಿಜಿಯವರು ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವನ ಕೊಂಕು ಮಾತಿಗೆ ಕೊರಗುವುದೇಕೆ" ಎಂದು ಹೇಳಿದ್ದಾರೆ. ವೈಯಕ್ತಿಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನಿಡುವುದಿಲ್ಲ" ಎಂದರು.
ಉಪ ಚುನಾವಣೆ; "ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಸದ್ಯದಲ್ಲೇ ಉಪ ಚುನಾವಣೆ ಘೋಷಣೆ ಆಗಲಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತಮಗೆ ಮಸ್ಕಿ ಕ್ಷೇತ್ರದ ಜವಾಬ್ದಾರಿ ನೀಡಿದ್ದಾರೆ. ಈ ಹಿಂದೆ ಉಪ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಹಾಗೆ ಈ ಬಾರಿಯೂ ಗೆಲುವು ಸಾಧಿಸಲಿದೆ. ಮತದಾರರು ಯಡಿಯೂರಪ್ಪ ಅವರ ಕೈ ಬಲಪಡಿಸಲಿದ್ದಾರೆ" ಎಂದು ಹೇಳಿದರು.

ಜನ ಮರೆತಿದ್ದರು; "ರಾಮ ಮಂದಿರ ನಿಧಿಗೆ ದೇಣಿಗೆ ನೀಡದ ಮನೆಗಳನ್ನು ಗುರುತು ಹಾಕಲಾಗುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, "ಕಳೆದ ಎರಡು ವರ್ಷದಿಂದ ರಾಜ್ಯದ ಜನರು ಕುಮಾರಸ್ವಾಮಿ ಅವರನ್ನು ಮರೆತಿದ್ದರು. ಜನರಿಗೆ ನೆನಪು ಮಾಡಲು ಈ ರೀತಿ ಹೇಳಿಕೆ ನೀಡಿರಬಹುದು. ಆದರೆ, ಅವರ ಹೇಳಿಕೆಯನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ" ಎಂದು ತಿಳಿಸಿದರು.
"ಐಎಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ವರ್ಗಾವಣೆ ಪ್ರಕ್ರಿಯೆಗಳು ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ನಾನು ಬಿಜೆಪಿ ಪಕ್ಷದ ಉಪಾಧ್ಯಕ್ಷ. ಹಾಗಾಗಿ ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ತಜ್ಞರ ಜೊತೆ ಚರ್ಚೆ; "ನಮ್ಮ ಸರ್ಕಾರ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ, ಬೇಡಿಕೆಗಳ ವಿರುದ್ಧ ಇಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ಈ ಕುರಿತು ತಜ್ಞರ ಜೊತೆ ಸಿಎಂ ಅವರು ಚರ್ಚೆ ನಡೆಸಿ, ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸುತ್ತಾರೆ" ಎಂದು ವಿಜಯೇಂದ್ರ ತಿಳಿಸಿದರು.











Click it and Unblock the Notifications