"ಸಿಗಂದೂರು ದೇಗುಲ ಸಲಹಾ ಸಮಿತಿ ರದ್ದುಗೊಳಿಸದಿದ್ದರೆ ಪಾದಯಾತ್ರೆ"
ಶಿವಮೊಗ್ಗ, ನವೆಂಬರ್ 07: ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ರಚಿಸಲಾಗಿರುವ ಮೇಲುಸ್ತುವಾರಿ ಹಾಗೂ ಸಲಹಾ ಸಮಿತಿಯನ್ನು ರದ್ದುಪಡಿಸದಿದ್ದರೆ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಸಮಿತಿ ರಚನೆಯಲ್ಲಿ ಹಿಂದುತ್ವದ ಕೈವಾಡ ಇರುವುದು ಸ್ಪಷ್ಟಗೊಳ್ಳುತ್ತಿದೆ. ಹಿಂದೆ ಹಿಂದೂಸ್ಥಾನ್ ಪಾಕಿಸ್ತಾನ್ ಎಂದು ಹೇಳಿ ಜನರನ್ನು ಒಡೆದು ಆಳಲಾಗುತ್ತಿತ್ತು. ಈಗ ಹಿಂದುಳಿದ ಜನ ಜಾಗೃತಗೊಂಡ ನಂತರ ಅವರನ್ನು ದಮನಿಸಲು ಮುಂದಾಗುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆದಾಗ ಸಾರಾಯಿ ಬಂದ್ ಮಾಡಲಾಗಿತ್ತು. ಆಗ ಸಾರಾಯಿ ಮಾರುವ ಸಾವಿರಾರು ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಬೀದಿಪಾಲಾದವು. ಇದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು. ಈ ಉಸ್ತುವಾರಿ ಸಮಿತಿ ರದ್ದುಗೊಳ್ಳುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ಸಮಾಜದ ಸ್ಥಳೀಯ ನಾಯಕರು ಜಿಲ್ಲಾಧಿಕಾರಿಗಳನ್ನು, ಸಂಬಂಧಪಟ್ಟವರನ್ನು ಭೇಟಿ ಮಾಡಿ ಸಮಿತಿ ಹಿಂತೆಗೆದುಕೊಳ್ಳಲು ಹೋರಾಟ ಮಾಡಲಿದ್ದಾರೆ. ಒಂದು ವೇಳೆ ಸರ್ಕಾರ ಬಗ್ಗದಿದ್ದರೆ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದರು.

ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಿರುತ್ತವೆ. ಅದಕ್ಕೆಲ್ಲ ಸಮಿತಿ ರಚಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಆರ್ಯ ಈಡಿಗ ಸಮುದಾಯದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಜೆಡಿಎಸ್ ನ ಜಿ.ಡಿ.ಮಂಜುನಾಥ್ ಇದ್ದರು.
ಇದೇ ಅಕ್ಟೋಬರ್ 16ರಂದು ದೇಗುಲದಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮತ್ತು ಭಕ್ತರ ನಡುವೆ ಗದ್ದಲ ನಡೆದಿತ್ತು. ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ದೇವಾಲಯಕ್ಕೆ ಭೇಟಿ ನೀಡಿ ಉಸ್ತುವಾರಿ ಸಮಿತಿ ರಚನೆಗೆ ಸೂಚಿಸಿದ್ದರು. ಅಕ್ಟೋಬರ್ 30ರಂದು ಮೇಲುಸ್ತುವಾರಿ ಹಾಗೂ ಸಲಹಾ ಸಮಿತಿಯ ಮೊಟ್ಟ ಮೊದಲ ಸಭೆ ನಡೆದಿದ್ದು, . ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಸಾಗರ ಶಾಸಕ ಹರತಾಳು ಹಾಲಪ್ಪ ಅವರುಗಳ ನೇತೃತ್ವದಲ್ಲಿ ಸಿಂಗದೂರು ಚೌಡೇಶ್ವರಿ ದೇವಾಲಯದ ಕುರಿತು ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು.












Click it and Unblock the Notifications