ಶಿವಮೊಗ್ಗ; ವೈರಲ್ ಆಡಿಯೋ; ಅಧಿಕಾರಿಗೆ ಬಿಜೆಪಿ ಮುಖಂಡನ ಬೆದರಿಕೆ
ಶಿವಮೊಗ್ಗ, ಅಕ್ಟೋಬರ್ 11 : ಬಿಜೆಪಿ ಯುವಮೋರ್ಚಾ ಮುಖಂಡ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಅರಣ್ಯ ಇಲಾಖೆ ಅಧಿಕಾರಿಗೆ ಅವಾಚ್ಯಾ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಎಂದು ಹೇಳಿಕೊಂಡ ವ್ಯಕ್ತಿ ಬೆದರಿಕೆ ಹಾಕಿದ್ದಾರೆ. ಶಂಕರ ವಲಯ ಅರಣ್ಯ ವ್ಯಾಪ್ತಿಯ ರೇಂಜರ್ ಆಫೀಸರ್ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
"ಮನೆಗೆ ನುಗ್ಗಿ ಧರಣಿ ಮಾಡಿ ಹೊಡೆದು ಹಾಕುತ್ತೇವೆ" ಎಂದು ಗದರಿಸಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿ ಶಿವಮೊಗ್ಗದ ಬಿಜೆಪಿ ಸಂಸದ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಆಪ್ತ ಎಂದು ಹೇಳಿಕೊಂಡಿದ್ದಾನೆ.

ತುಂಗಾ ಮೇಲ್ದಂಡೆ ಯೋಜನೆ ಎಇಇ ಕುಮಾರಸ್ವಾಮಿ ಎಂಬುವವರು ಗಾಜನೂರಿನ ಗಣಪತಿ ದೇವಾಲಯದ ಮುಂದೆ ಇದ್ದ ಮಾವಿನ ಮರಗಳನ್ನು ಕಡಿದು ಹಾಕಿದ್ದಾರೆ. ಇದಕ್ಕೆ ಶಂಕರ ಅರಣ್ಯ ವಲಯದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಲಾಗಿದೆ.
"ನೋಟಿಸ್ ನೀಡಿ ನಮ್ಮವರಿಗೆ ಕಾಟ ಕೊಡುತ್ತೀರಾ. ರಾಘಣ್ಣ ನಾಳೆ ಸಕ್ರೇಬೈಲಿಗೆ ಬರುತ್ತಾರೆ. ನೀವು ಒಮ್ಮೆ ಬನ್ನಿ ನಿಮ್ಮ ಮುಖ ನೋಡಬೇಕು" ಎಂದು ಗಿರಿರಾಜ್ ಕಿರುಚಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ರೇಂಜರ್ ಅಫೀಸರ್ ನಿಂದಿಸಿದ್ದಾರೆ.
"ನಮ್ಮದೇ ಸರ್ಕಾರವಿದೆ. ನೀವು ಸಂಬಳಕ್ಕೆ ಕೆಲಸ ಮಾಡುವವರು ನಾಲ್ಕು ಗಿಡಿ ನೆಟ್ಟು ಅದನ್ನು ಉಳಿಸಿ" ಎಂದು ಅರಣ್ಯ ಅಧಿಕಾರಿಗಳಿಗೆ ಪುಕ್ಕಟೆ ಸಲಹೆಯನ್ನು ಗಿರಿರಾಜ್ ನೀಡಿದ್ದಾರೆ. ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿವಾದವೇನು? : ಗಾಜನೂರು ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ನಾಲ್ಕು ಮಾವಿನ ಮರವನ್ನು ಕಡಿಯಲು ಅನುಮತಿ ಕೋರಿ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, 2 ವರ್ಷ ಕಳೆದರೂ ಅನುಮತಿ ಸಿಕ್ಕಿರಲಿಲ್ಲ.
ಈಗ ಅಧಿಕಾರಿಗಳು ಏಕಾಏಕಿ ಮರ ಕಡಿದು ಹಾಕಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬಿಜೆಪಿ ಮುಖಂಡ ಗಿರಿರಾಜ್ ನೋಟಿಸ್ ಪಡೆದ ಅಧಿಕಾರಿ ಪರವಾಗಿ ಮತ್ತೊಬ್ಬ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಬೆಂಬಲಿಗರನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಗಿರಿರಾಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications