ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ವಿತರಣೆ
ಶಿವಮೊಗ್ಗ, ಅಕ್ಟೋಬರ್ 7: ಪತ್ರಕರ್ತರು ಹಾಗೂ ಅವರ ಕುಟುಂಬಕ್ಕೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯನ್ನು ಶಿವಮೊಗ್ಗದಲ್ಲಿ ತಲುಪಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶಫಿ ಸಾದುದ್ದೀನ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕರಾದ ಎನ್.ರವಿಕುಮಾರ್ ಅವರಿಗೆ ಮೊದಲ ಕಾರ್ಡ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.
ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಆಯ್ಕೆ ಸಮಿತಿಯ ಸದಸ್ಯರೂ ಆಗಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಈ ಸಂದರ್ಭದಲ್ಲಿದ್ದರು.

ಕಾರ್ಯನಿರತ ಪತ್ರಕರ್ತರಿಗೆ ಮತ್ತವರ ಕುಟುಂಬಕ್ಕೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಬೇಕೆಂಬ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೇಡಿಕೆ ಅನುಷ್ಠಾನಗೊಂಡಿದ್ದು. ರಾಜ್ಯಾದ್ಯಂತ ಮೊದಲ ಹಂತವಾಗಿ ಮಾನ್ಯತಾ ಕಾರ್ಡ್ವುಳ್ಳ (Accreditation) ಪತ್ರಕರ್ತರು ಮತ್ತವರ ಕುಟುಂಬದ ಸದಸ್ಯರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ಗರಿಷ್ಠ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿಸಿ ಜಾರಿಗೊಳಿಸಿದೆ.
ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮತ್ತು ಯೋಜನೆ ಜಾರಿಗೆ ತೀವ್ರ ಪ್ರಯತ್ನ ನಡೆಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರುಗಳಿಗೆ ಜಿಲ್ಲಾ ಸಂಘವು ಧನ್ಯವಾದಗಳನ್ನು ಸಲ್ಲಿಸಿದರು. ಈಗಾಗಲೇ ಆರೋಗ್ಯ ಕಾರ್ಡ್ ಗಾಗಿ ಮಾಹಿತಿ ಸಲ್ಲಿಸಿದ್ದ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಕಾರ್ಡ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ಬಯೋಮೆಟ್ರಿಕ್ ನೀಡುವ ಪೂರ್ವಭಾವಿಯಾಗಿ ತಾವು ಇಲ್ಲಿ ನೀಡಿರುವ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಅರ್ಜಿ ಸಹಿತ ದಾಖಲೆ ಸಲ್ಲಿಸಿರುವ ಜಿಲ್ಲೆಯ ಮಾನ್ಯತೆ (accreditation) ಪಡೆದ ಪತ್ರಕರ್ತರು ನಿಗದಿತ ಫಾರಂ ಮತ್ತು ಮಾನ್ಯತಾ ಕಾರ್ಡ್ ನೊಂದಿಗೆ ವಾರ್ತಾ ಇಲಾಖೆಯ ಶ್ರೀಪತಿ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ ತಿಳಿಸಿದ್ದಾರೆ.












Click it and Unblock the Notifications