ಆಗುಂಬೆ ಘಾಟ್ ರಸ್ತೆ ಸದ್ಯಕ್ಕೆ ಬಂದ್ ಆಗುವುದಿಲ್ಲ
ಶಿವಮೊಗ್ಗ, ಜ.27 : ಆಗುಂಬೆ ಘಾಟ್ ರಸ್ತೆ ಸದ್ಯಕ್ಕೆ ಬಂದ್ ಆಗುವುದಿಲ್ಲ, 2015ರ ಅಕ್ಟೋಬರ್ ನಂತರ ಘಾಟ್ ರಸ್ತೆಯಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಸಚಿವ ಕಿಮ್ಮನೆ ರತ್ನಾಕರ್ ಅವರು, ಸದ್ಯ ಶಿರಾಡಿ ಘಾಟ್ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಇದು ಮುಗಿದ ಬಳಿಕವೇ ಆಗುಂಬೆ ಘಾಟ್ ರಸ್ತೆಯ ಕಾಮಗಾರಿ ಆರಂಭಿಸಲಾಗುತ್ತದೆ. ಸದ್ಯಕ್ಕೆ ಘಾಟ್ ಬಂದ್ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.[ಮೂರು ತಿಂಗಳು ಆಗುಂಬೆ ಘಾಟ್ ಬಂದ್]

ಶಿರಾಡಿ ಘಾಟ್ ರಸ್ತೆಯ ಕಾಮಗಾರಿಗಾಗಿ ವಾಹನಗಳ ಸಂಚಾರದ ಪಥ ಬದಲಾವಣೆ ಮಾಡಲಾಗಿದೆ. ಮಂಗಳೂರು-ಬೆಂಗಳೂರು ಸಾಗುವ ಕೆಲವು ವಾಹನಗಳು ಆಗುಂಬೆ ಮಾರ್ಗವಾಗಿ ಸಂಚರಿಸುತ್ತಿವೆ. ಆದ್ದರಿಂದ ಈ ಮಾರ್ಗವನ್ನು ಈಗ ಬಂದ್ ಮಾಡುವುದಿಲ್ಲ ಎಂದರು. [ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು]
ಶಿರಾಡಿ ಘಾಟ್ ರಸ್ತೆಯ ಕಾಮಗಾರಿ ಆರು ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಂತರ ಮಳೆಗಾಲ ಆರಂಭವಾಗುತ್ತದೆ. ಅದು ಮುಗಿದ ಬಳಿಕ ಆಗುಂಬೆ ಘಾಟ್ ಕಾಮಗಾರಿ ಆರಂಭಿಸಲಾಗುತ್ತದೆ. 2015ರ ಅಕ್ಟೋಬರ್ ವೇಳೆಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. [ಶಿರಾಡಿ ಬಂದ್, ಚಾರ್ಮಾಡಿಯಲ್ಲಿ ಟ್ರಾಫಿಕ್ ಜಾಮ್]
ಆಗುಂಬೆ ಘಾಟ್ ರಸ್ತೆಯನ್ನು ಕಾಂಕ್ರೀಟಿಕರಣ ಮಾಡುವ ಕಾಮಗಾರಿ ಡಿಸೆಂಬರ್ 21ರಿಂದ ಆರಂಭವಾಗಲಿದ್ದು, ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗುತ್ತದೆ ಎಂದು ಮೊದಲು ತಿಳಿಸಲಾಗಿತ್ತು. ಆದರೆ, ಅದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ಆಗುಂಬೆ ಘಾಟ್ ರಸ್ತೆ ದುರಸ್ತಿ ಮಾಡುವ ಒತ್ತಾಯ ಹಲವು ದಿನಗಳಿಂದ ಕೇಳಿಬಂದಿತ್ತು. ರಾಜ್ಯ ಸರ್ಕಾರ ಈ ಕಾಮಗಾರಿಗಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚು ಗುಂಡಿ ಬಿದ್ದಿರುವ 2.5 ಕಿ.ಮೀ. ರಸ್ತೆಯ ದುರಸ್ತಿಕಾರ್ಯವನ್ನು ನಡೆಸಲಾಗುತ್ತದೆ.












Click it and Unblock the Notifications