ಮೂರು ತಿಂಗಳು ಆಗುಂಬೆ ಘಾಟ್ ಬಂದ್
ಶಿವಮೊಗ್ಗ, ನ.20 : ಮೂರು ತಿಂಗಳ ಕಾಲ ನೀವು ಆಗುಂಬೆಯಲ್ಲಿಸ ಸೂರ್ಯಾಸ್ತಮಾನ ನೋಡುವಂತಿಲ್ಲ. ಹೌದು ಆಗುಂಬೆಯ ರಸ್ತೆಯನ್ನು ಕಾಂಕ್ರೀಟಿಕರಣ ಮಾಡುವ ಕಾಮಗಾರಿ ಡಿಸೆಂಬರ್ 21ರಿಂದ ಆರಂಭವಾಗಲಿದ್ದು, ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗುತ್ತದೆ.
ಆಗುಂಬೆ ಘಾಟಿ ರಸ್ತೆ ದುರಸ್ತಿ ಮಾಡುವ ಒತ್ತಾಯ ಹಲವು ದಿನಗಳಿಂದ ಕೇಳಿಬಂದಿತ್ತು. ಸದ್ಯ ರಾಜ್ಯ ಸರ್ಕಾರ ಈ ಕಾಮಗಾರಿಗಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚು ಗುಂಡಿ ಬಿದ್ದಿರುವ 2.5 ಕಿ.ಮೀ. ರಸ್ತೆಯ ದುರಸ್ತಿಕಾರ್ಯವನ್ನು ಆರಂಭಿಸಲಾಗುತ್ತದೆ.

ಘಾಟಿ ರಸ್ತೆ ಬಹಳ ಕಿರಿದಾಗಿರುವುದರಿಂದ ಕಾಮಗಾರಿ ನಡೆಯುವ ಹಂತದಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿದ್ದು, ಆ ಮಾರ್ಗದಲ್ಲಿನ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. [ಕುಂಭಕರ್ಣನ ನಿದ್ದೆಗೆ ಜಾರಲಿರುವ ಶಿರಾಡಿಘಾಟ್!]
ಆಗುಂಬೆ ಘಾಟ್ ಕರಾವಳಿ ಮತ್ತು ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಚಾರ್ಮಾಡಿ, ಹುಲಿಕಲ್ ಘಾಟಿಗಳಿಗಿಂತ ಹೆಚ್ಚಿನ ವಾಹನಗಳು ಇಲ್ಲಿ ಸಂಚರಿಸಲಿದ್ದು, ಮಂಗಳೂರು, ಉಡುಪಿ, ಮಣಿಪಾಲಕ್ಕೆ ತೆರಳುವ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಚಲಿಸುತ್ತವೆ. ಆಗುಂಬೆಯಲ್ಲಿ ಭಾರೀ ಮಳೆಯಾಗುವುದರಿಂದ ರಸ್ತೆಗಳು ಬೇಗ ಹಾಳಾಗುತ್ತವೆ.
ಆಗುಂಬೆ ಘಾಟಿಯ ಒಟ್ಟು 14 ತಿರುವುಗಳಲ್ಲಿ ಅಲ್ಲಲ್ಲಿ ತಡೆಗೋಡೆಗಳು ಕುಸಿದಿವೆ. ಶಿವಮೊಗ್ಗ ಜಿಲ್ಲೆಗೆ ಸೇರಿದ 7 ತಿರುವುಗಳ ರಸ್ತೆಗೆ ಕಾಂಕ್ರಿಟ್ ಹಾಕಲಾಗಿದೆ. ಆದರೆ, ಕೆಲವು ಕಡೆ ಅವುಗಳಲ್ಲಿ ಗುಂಡಿ ಬಿದ್ದಿದೆ. ಅವುಗಳ ದುಸ್ತಿಯನ್ನು ಕೈಗೊಳ್ಳಲಾಗುತ್ತಿದೆ. [ಶಿರಾಡಿ ಘಾಟ್ ರಸ್ತೆಗೆ ಪರ್ಯಾಯ ಮಾರ್ಗಗಳು]
ನಾಲ್ಕು ಪರ್ಯಾಯ ಮಾರ್ಗಗಳು : ಮೂರು ತಿಂಗಳ ಕಾಲ ಆಗುಂಬೆಯಲ್ಲಿ ಸಂಚಾರ ಸ್ಥಗಿತಗೊಳ್ಳುವುದರಿಂದ ನಾಲ್ಕು ಪರ್ಯಾಯ ಮಾರ್ಗಗಳಲ್ಲಿ ಲೋಕೋಪಯೋಗಿ ಇಲಾಖೆ ಗುರುತಿಸಿದೆ. ಕಾಮಗಾರಿ ಮುಗಿಯುವ ತನಕ ಈ ಮಾರ್ಗವನ್ನು ಬಳಸಬಹುದಾಗಿದೆ.
ಮಾರ್ಗಗಳು : ಮಂಗಳೂರು-ಮೂಡುಬಿದರೆ-ಕಾರ್ಕಳ-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ-ಶಿವಮೊಗ್ಗ (ಎನ್ಎಚ್-13), ಮಂಗಳೂರು-ಮೂಡುಬಿದರೆ-ಕಾರ್ಕಳ-ಶೃಂಗೇರಿ-ಕೊಪ್ಪ-ನರಸಿಂಹರಾಜಪುರ-ಶಿವಮೊಗ್ಗ. ಕುಂದಾಪುರ-ಸಿದ್ದಾಪುರ- ಮಾಸ್ತಿಕಟ್ಟೆ-ಯಡೂರು-ತೀರ್ಥಹಳ್ಳಿ-ಶಿವಮೊಗ್ಗ. ಕುಂದಾಪುರ-ಸಿದ್ದಾಪುರ-ಮಾಸ್ತಿಕಟ್ಟೆ-ರಾವೆ ಕ್ರಾಸ್-ಕೊಂಡ್ಲೂರು- ತೀರ್ಥಹಳ್ಳಿ- ಶಿವಮೊಗ್ಗ.












Click it and Unblock the Notifications