ಹೀರೋ ಆಗಿ ಅಪ್ಪು ಮೊದಲ ರಾಜ್ಯ ಪ್ರಶಸ್ತಿ ಪಡೆದಿದ್ದೇ ಶಿವಮೊಗ್ಗದಲ್ಲಿ; ಜಿಲ್ಲೆಯೊಂದಿಗಿತ್ತು ಉತ್ತಮ ನಂಟು!
ಶಿವಮೊಗ್ಗ, ಅಕ್ಟೋಬರ್ 30: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಕುರಿತು ನಟ ಪುನೀತ್ ರಾಜ್ಕುಮಾರ್ಗೆ ಅಭಿಮಾನವಿತ್ತು. ಇದನ್ನು ಹಲವು ಬಾರಿ ಅವರು ಹೇಳಿಕೊಂಡಿದ್ದರು. ನಾಯಕ ನಟನಾಗಿ ಮೊಟ್ಟಮೊದಲ ಬಾರಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದೇ ಶಿವಮೊಗ್ಗದಲ್ಲಿ.
ಮಿಲನ ಸಿನಿಮಾದ ಅಭಿನಯಕ್ಕಾಗಿ ಪುನೀತ್ ರಾಜ್ಕುಮಾರ್ಗೆ ಉತ್ತಮ ನಟ ಪ್ರಶಸ್ತಿ ಲಭಿಸಿತ್ತು. 2010ರಲ್ಲಿ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುನೀತ್ ರಾಜ್ಕುಮಾರ್ಗೆ ಪ್ರಶಸ್ತಿ ವಿತರಿಸಿದ್ದರು.
ಸಿನಿಮಾ, ಮದುವೆ ಸಮಾರಂಭಗಳು
2010 ಏಪ್ರಿಲ್: ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಿಲನ ಸಿನಿಮಾದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಪಡೆದಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಪುನೀತ್ ರಾಜ್ಕುಮಾರ್ಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.

2010 ಅಕ್ಟೋಬರ್: ಜಾಕಿ ಸಿನಿಮಾದ ಪ್ರಮೋಷನ್ಗಾಗಿ ರಾಘವೇಂದ್ರ ರಾಜ್ಕುಮಾರ್ರೊಂದಿಗೆ ಪುನೀತ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಪುನಿತ್ ರಾಜ್ಕುಮಾರ್ ಅವರೊಂದಿಗಿದ್ದರು.
2011 ಜೂನ್: ಹುಡುಗರು ಸಿನಿಮಾದ ಪ್ರಮೋಷನ್ಗಾಗಿ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪವರ್ಸ್ಟಾರ್ ಕಣ್ತುಂಬಿಕೊಳ್ಳಲು ನೂಕುನುಗ್ಗಲು ಉಂಟಾಗಿತ್ತು.
2011 ಜೂನ್: ತೀರ್ಥಹಳ್ಳಿ ಸುತ್ತಮುತ್ತ ಪರಮಾತ್ಮ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಭಿಮಾನಿಗಳು ಅಪ್ಪು ಕಣ್ತುಂಬಿಕೊಳ್ಳಲು ಚಿತ್ರೀಕರಣದ ಸ್ಪಾಟ್ಗಳಿಗೆ ಹೋಗುತ್ತಿದ್ದರು. ದಿನವಿಡೀ ಪುನೀತ್ ದರ್ಶನಕ್ಕಾಗಿ ಕಾದು ಕೂರುತ್ತಿದ್ದರು.
2015ರ ಆಗಸ್ಟ್: ಮಲಬಾರ್ ಗೋಲ್ಡ್ ಶೋರೂಂ ಉದ್ಘಾಟನೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಿ.ಎಚ್. ರಸ್ತೆಯಲ್ಲಿ ಅಪ್ಪು ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರವು ಆಗಿತ್ತು. ಅಭರಣ ಮಳಿಗೆ ಉದ್ಘಾಟಿಸಿದ ಬಳಿಕ ಪುನೀತ್ ರಾಜ್ಕುಮಾರ್ ಹಾಡು ಹೇಳಿ ಅಭಿಮಾನಿಗಳು, ಜನರನ್ನು ರಂಜಿಸಿದ್ದರು.

2018 ಮಾರ್ಚ್: ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್ನಲ್ಲಿ ಡಾ.ರಾಜ್ಕುಮಾರ್ ಮೊಮ್ಮಗ ಷಣ್ಮುಖ ಮತ್ತು ಸಿಂಧು ಮದುವೆ ಸಮಾರಂಭ ನೆರವೇರಿತು. ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ಕುಮಾರ್ ಭಾಗವಹಿಸಿದ್ದರು. ಮದುವೆ ಮನೆಯಲ್ಲಿ ಪವರ್ ಸ್ಟಾರ್ ಎಲ್ಲರ ಗಮನ ಸೆಳೆದಿದ್ದರು.
2021 ಸೆಪ್ಟೆಂಬರ್: ಸಾಕ್ಷ್ಯಚಿತ್ರವೊಂದರ ಚಿತ್ರೀಕರಣಕ್ಕಾಗಿ ಸಕ್ರೆಬೈಲು ಆನೆ ಬಿಡಾರಕ್ಕೆ ಪುನೀತ್ ರಾಜ್ಕುಮಾರ್ ಭೇಟಿ ನೀಡಿದ್ದರು. ಇಡೀ ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಚಿತ್ರೀಕರಣ, ಸ್ನೇಹಿತರು, ಸಂಬಂಧಿಗಳು
ಶಿವಮೊಗ್ಗ ಜಿಲ್ಲೆಯಲ್ಲಿ ಪುನೀತ್ ರಾಜ್ಕುಮಾರ್ ಹಲವು ಚಿತ್ರಗಳ ಚಿತ್ರೀಕರಣಕ್ಕೆ ಬರುತ್ತಿದ್ದರು. ಇದರ ಹೊರತಾಗಿ ಸ್ನೇಹಿತರು, ಸಂಬಂಧಿಗಳ ಭೇಟಿಗೂ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಹಲವು ಸಂಬಂಧಿಗಳ ಮನೆಯಲ್ಲಿ ಪುನೀತ್ ರಾಜ್ಕುಮಾರ್ ಉಳಿಯುತ್ತಿದ್ದರು.

ಶಿವಮೊಗ್ಗ ಜಿಲ್ಲೆಯಾದ್ಯಂತ ಪುನೀತ್ ಫ್ಲೆಕ್ಸ್, ಕೆಲವೆಡೆ ಬಂದ್ ಮಾಡಿ ಶ್ರದ್ಧಾಂಜಲಿ
ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಅಸಂಖ್ಯ ಜನರು ಕಂಬನಿ ಮಿಡಿದಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತಿ ಹಳ್ಳಿ, ಪ್ರತಿ ಬೀದಿಯಲ್ಲೂ ಬ್ಯಾನರ್ ಕಟ್ಟಿ, ಪೂಜೆ ಸಲ್ಲಿಸಲಾಗಿದೆ.
ಶಿವಮೊಗ್ಗ ನಗರದಲ್ಲಿ ಶನಿವಾರ ಕೂಡ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಭಾವಚಿತ್ರದ ಫ್ಲೆಕ್ಸ್ ಕಟ್ಟಲಾಗಿದೆ. ಪ್ರತಿ ವಾರ್ಡ್, ಪ್ರತಿ ಬೀದಿಯಲ್ಲೂ ಫ್ಲೆಕ್ಸ್ ಕಟ್ಟಿ ಪೂಜೆ ಸಲ್ಲಿಸಲಾಗುತ್ತಿದೆ. ಯುವಕರಷ್ಟೆ ಅಲ್ಲದೆ ಸ್ವಯಂ ಪ್ರೇರಿತವಾಗಿ ಜನರು ಬಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.
ಹಳ್ಳಿ ಹಳ್ಳಿಯಲ್ಲೂ ಅಪ್ಪು ಫ್ಲೆಕ್ಸ್
ಇನ್ನು ಶಿವಮೊಗ್ಗ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ನಟ ಪುನೀತ್ ರಾಜ್ಕುಮಾರ್ ಫ್ಲೆಕ್ಸ್ ಕಟ್ಟಿ, ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಯುವಕರ ಸಂಘಗಳು, ಅಭಿಮಾನಿಗಳು, ಸಾರ್ವಜನಿಕರು ಪೂಜೆ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಕಂಬನಿ
ಸಾಮಾಜಿಕ ಜಾಲತಾಣದಲ್ಲೂ ನಟ ಪುನೀತ್ ರಾಜ್ಕುಮಾರ್ಗೆ ಜನ ಕಂಬನಿ ಮಿಡಿದಿದ್ದಾರೆ. ಶಿವಮೊಗ್ಗದಲ್ಲಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡವರು ಅವುಗಳನ್ನು ಪೋಸ್ಟ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ರಿಪ್ಪನ್ಪೇಟೆ ಸಂಪೂರ್ಣ ಬಂದ್
ನಟ ಪುನೀತ್ ರಾಜ್ಕುಮಾರ್ ನಿಧನ ಹಿನ್ನೆಲೆ ಗೌರವ ಸೂಚಿಸಿ ರಿಪ್ಪನ್ಪೇಟೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ರಿಪ್ಪನ್ಪೇಟೆಯಲ್ಲಿ ಮೆಡಿಕಲ್ ಶಾಪ್ ಹೊರತು ಉಳಿದೆಲ್ಲ ಮಳಿಗೆಗಳು, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ವಾಹನ ಸಂಚಾರ, ಬಸ್ಸುಗಳ ಓಡಾಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ರಿಪ್ಪನ್ಪೇಟೆ ಸರ್ಕಲ್ನಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಹೂವು ಹಾಕಿ ಗೌರವ ಸಲ್ಲಿಸಲಾಗಿದೆ.
ಸಾಗರ ತಾಲೂಕು ಕೇಂದ್ರ ಸ್ಥಬ್ಧ
ಸಾಗರ ತಾಲೂಕು ಕೇಂದ್ರದಲ್ಲೂ ಸಂಪೂರ್ಣ ಬಂದ್ ಮಾಡಲಾಗಿದೆ. ಪಟ್ಟಣದಲ್ಲಿ ಅಂಗಡಿಗಳು ಬಂದ್ ಮಾಡಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಪುನೀತ್ ರಾಜ್ ಕುಮಾರ್ರನ್ನು ನೆನೆದು ಜನರು ಕಂಬನಿ ಮಿಡಿದಿದ್ದಾರೆ.












Click it and Unblock the Notifications