Breaking; ಎಸಿಬಿ ದಾಳಿ, ರುದ್ರೇಶಪ್ಪಗೆ ಜೈಲು ವಾಸ!
ಶಿವಮೊಗ್ಗ, ನವೆಂಬರ್ 25; ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್. ಟಿ. ರುದ್ರೇಶಪ್ಪರನ್ನು ಡಿಸೆಂಬರ್ 7ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಎಸಿಬಿ ಅಧಿಕಾರಿಗಳು ರುದ್ರೇಶಪ್ಪರನ್ನು ಜೈಲಿಗೆ ಬಿಟ್ಟು ಬಂದಿದ್ದಾರೆ.
ಬುಧವಾರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್. ಟಿ. ರುದ್ರೇಶಪ್ಪ ಮನೆ ಮೇಲೆ ಎಸಿಬಿ ದಾಳಿ ನಡೆದಿತ್ತು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಹಿನ್ನಲೆಯಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು.
ಗುರುವಾರ ಎಸಿಬಿ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮೊದಲನೇ ಅಪರ ಜಿಲ್ಲಾ ಸತ್ರನ್ಯಾಯಾಲಯ ಆರೋಪಿ ಎಸ್. ಟಿ. ರುದ್ರೇಶಪ್ಪರನ್ನು ಡಿಸೆಂಬರ್ 7ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಎಸಿಬಿ ಅಧಿಕಾರಿಗಳು ಅವರನ್ನು ಜೈಲಿಗೆ ಕಳಿಸಿದ್ದಾರೆ.

ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್. ಟಿ. ರುದ್ರೇಶಪ್ಪಗೆ ಸೇರಿದ ಶಿವಮೊಗ್ಗದ ಚಾಲುಕ್ಯ ನಗರದ 4ನೇ ಕ್ರಾಸ್ನಲ್ಲಿರುವ ಮನೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜಿಲ್ಲೆಯ ಸಂತೆಬೆನ್ನೂರು ಸಮೀಪದ ತಣಿಗೆರೆಯಲ್ಲಿರುವ ತೋಟದ ಮನೆ ಮೇಲೆ ಬುಧವಾರ ಏಕಕಾಲಕ್ಕೆ ಎಸಿಬಿ ದಾಳಿ ನಡೆದಿತ್ತು.
ಗದಗದಲ್ಲಿ ಅವರು ಹೊಂದಿದ್ದ ಬಾಡಿಗೆ ಮನೆ ಮೇಲೆ ಸಹ ದಾಳಿ ಮಾಡಲಾಗಿತ್ತು. ಎಸ್. ಟಿ. ರುದ್ರೇಶಪ್ಪರನ್ನು ಪಕ್ಕದಲ್ಲಿ ಕೂರಿಸಿಕೊಂಡು 8ಕ್ಕೂ ಅಧಿಕ ಸಿಬ್ಬಂದಿಗಳು ಕಡತಗಳು, ಕಂಪ್ಯೂಟರ್ನಲ್ಲಿ ಇರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಬಳಿಕ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಎಸಿಬಿ ಪ್ರಕಟಣೆ; ಬುಧವಾರ ಸಂಜೆ ದಾಳಿಯ ಕುರಿತು ಎಸಿಬಿ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ರುದ್ರೇಶಪ್ಪ ಅವರ ಬಳಿ ಶಿವಮೊಗ್ಗ ನಗರದಲ್ಲಿ 2 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 4 ನಿವೇಶನಗಳು, 9 ಕೆಜಿ 400 ಗ್ರಾಂ ಚಿನ್ನದ ಬಿಸ್ಕೇಟ್ ಹಾಗೂ ಆಭರಣಗಳು ಪತ್ತೆಯಾಗಿವೆ ಎಂದು ತಿಳಿಸಲಾಗಿತ್ತು.
3 ಕೆಜಿ ಬೆಳ್ಳಿ ಸಾಮಾನುಗಳು, 2 ವಿವಿಧ ಕಂಪನಿಯ ಕಾರುಗಳು, 3 ದ್ವಿಚಕ್ರ ವಾಹನಗಳು, 8 ಎಕರೆ ಕೃಷಿ ಜಮೀನು, ನಗದು ಹಣ 15,94,000 ರೂ.ಗಳು ಹಾಗೂ 20 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ಹೇಳಿತ್ತು.
ಗುರುವಾರ ಹೊರಡಿಸಿದ್ದ ಪ್ರಕಟಣೆಯಲ್ಲಿ ರುದ್ರೇಶಪ್ಪಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 6,65,03,782 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ನಿವೇಶನ, ಕಟ್ಟಡ, , ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ.
ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 400ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಆಪಾದಿತರ ವಿವರಣೆಯನ್ನು ಪಡೆದು ತನಿಖೆಯನ್ನು ಮಾಡಬೇಕಾಗಿರುತ್ತದೆ ಎಂದು ತಿಳಿಸಿತ್ತು.
ಟಿ. ಎಸ್. ರುದ್ರೇಶಪ್ಪಗೆ ಸೇರಿದ ಬ್ಯಾಂಕ್ ಲಾಕರ್, ಖಾತೆಗಳ ಬಗ್ಗೆ ಮಾಹಿತಿ ಪಡೆಯಲು ಎಸಿಬಿ ಅಧಿಕಾರಿಗಳು ಗುರುವಾರ ಬ್ಯಾಂಕ್ಗೆ ಕರೆದುಕೊಂಡು ಹೋಗಿದ್ದರು. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಎಸ್ಬಿಐ ಬ್ಯಾಂಕ್ನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.












Click it and Unblock the Notifications