ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ ಶೇ 60ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ
ಶಿವಮೊಗ್ಗ, ಏಪ್ರಿಲ್ 18; " ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ಸಂಬಂಧ ಶೇ 60ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಪರಿಹಾರದ ಹಣವನ್ನು ತಲುಪಿಸಲಾಗಿದೆ. ಈ ತಿಂಗಳ ಕೊನೆ ವೇಳೆ ಬಹುತೇಕ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ" ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಭಾನುವಾರ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಶಿವಮೊಗ್ಗ ಟೌನ್-ಚೆನ್ನೈ ವಿಶೇಷ ರೈಲಿಗೆ ಭಾನುವಾರ ಹಸಿರು ನಿಶಾನೆ ತೋರಿಸಲಾಯಿತು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ಸಂಸದ ಬಿ. ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, "ಬ್ರಿಟಿಷ್ ಕಾಲದ ರೈಲ್ವೆ ಮಾರ್ಗ ಹೊರತು ಈತನಕ ಶಿವಮೊಗ್ಗದಿಂದ ಯಾವುದೇ ಹೊಸ ಮಾರ್ಗಗಳು ಇರಲಿಲ್ಲ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ಸ್ವಾತಂತ್ರ್ಯ ನಂತರದ ಹೊಸ ರೈಲ್ವೆ ಮಾರ್ಗವಾಗಿದೆ" ಎಂದು ತಿಳಿಸಿದರು.
ಉದ್ಘಾಟನೆ ದಿನವೇ ಶಿವಮೊಗ್ಗ-ಚೆನ್ನೈ ರೈಲಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ರೈಲು ರೇಣಿಗುಂಟ (ತಿರುಪತಿ) ಮೂಲಕ ಚೆನ್ನೈ ತಲುಪಲಿದೆ. ಹಾಗಾಗಿ ತಿರುಪತಿಗೆ ತೆರಳುವ ಭಕ್ತರಿಗೂ ಸಹ ಅನುಕೂಲವಾಗಿದೆ. ಮೊದಲ ದಿನವೇ ತಿರುಪತಿಗೆ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದು ವಿಶೇಷವಾಗಿತ್ತು.

ವಾರದಲ್ಲಿ ಎರಡು ಸಲ ಸಂಚಾರ
ಶಿವಮೊಗ್ಗ ಟೌನ್-ರೇಣಿಗುಂಟ-ಚೆನ್ನೈ ವಿಶೇಷ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದೆ. ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ರೈಲು ಸಂಚರಿಸಲಿದೆ. ಸೋಮವಾರ ಮತ್ತು ಬುಧವಾರ ಚೆನ್ನೈನಿಂದ ಶಿವಮೊಗ್ಗಕ್ಕೆ ಆಗಮಿಸಲಿದೆ.
ಏಪ್ರಿಲ್ 17ರಿಂದ ಜೂನ್ 28ರವರೆಗೆ 22 ಟ್ರಿಪ್ ಈ ರೈಲು ಸಂಚರಿಸಲಿದೆ. ಪ್ರಾಯೋಗಿಕ ಸಂಚಾರಕ್ಕೆ ಉತ್ತಮ ಸ್ಪಂದನೆ ಸಿಕ್ಕರೆ ಈ ರೈಲು ಸೇವೆಯನ್ನು ಮುಂದುವರೆಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

ಹೊಸ ರೈಲಿಗೆ ರೀ ವರ್ಕ್
ಶಿವಮೊಗ್ಗ-ಚೆನ್ನೈ ಮತ್ತು ಶಿವಮೊಗ್ಗ-ತಿರುಪತಿಗೆ ಈ ಮೊದಲು ಪ್ರತ್ಯೇಕ ರೈಲುಗಳು ಸಂಚರಿಸುತ್ತಿದ್ದವು. ಕೋವಿಡ್ ನಂತರ ಹಲವು ರೈಲು ಮಾರ್ಗಗಳನ್ನು ಪುನಾರಂಭ ಮಾಡಲಿಲ್ಲ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಹೊಸ ಮಾರ್ಗವನ್ನು ಘೋಷಿಸಲಾಗಿದೆ. ಈಗ ಶಿವಮೊಗ್ಗ-ರೇಣಿಗುಂಟ (ತಿರುಪತಿ)-ಚೆನ್ನೈ ರೈಲು ಸಂಚಾರ ಆರಂಭಿಸಲಾಗಿದೆ. ಈ ರೈಲನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕಿದೆ. ದಕ್ಷಿಣ ಕನ್ನಡ ಭಾಗ, ಚಿತ್ರದುರ್ಗದ ಭಾಗದ ಜನರಿಗೂ ಇದು ಅನುಕೂಲ ಆಗಲಿದೆ.

ರೈಲ್ವೆ ಕೋಚಿಂಗ್ ಡಿಪೋ
"ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. 8 ಕೋಟಿ ರೂ. ವೆಚ್ಚದಲ್ಲಿ ಲೆವಲಿಂಗ್ ಕೆಲಸ ನಡೆಯುತ್ತಿದೆ. ರೈಲ್ವೆ ಯೋಜನೆಗಳು ಆರಂಭವಾಗಲು ಶೇ 90ರಷ್ಟು ಭೂ ಸ್ವಾದೀನ ಪ್ರಕ್ರಿಯೆ ಮುಗಿದಿರಬೇಕು. ಇನ್ನೊಂದು ವಾರದಲ್ಲಿ ಭೂ ಸ್ವಾದೀನ ಪ್ರಕ್ರಿಯೆ ಶೇ 90ರಷ್ಟು ಪೂರ್ಣಗೊಳ್ಳಲಿದೆ. ಒಂದೆರಡು ತಿಂಗಳಲ್ಲಿ ಟೆಂಡರ್ ಕರೆದು, ಸಚಿವರ ಮೂಲಕ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಪ್ರತಿ ರೈಲು ಮೂರು ಸಾವಿರ ಕಿ. ಮೀ. ಸಂಚರಿಸಿದ ಬಳಿಕ ಸರ್ವೀಸ್ ಮಾಡಿಸಬೇಕು. ಶಿವಮೊಗ್ಗದಲ್ಲಿಕೋಚಿಂಗ್ ಡಿಪೋ ಆದರೆ ರಾಜ್ಯದ ವಿವಿಧೆಡೆಯಿಂದ ರೈಲುಗಳು ಶಿವಮೊಗ್ಗಕ್ಕೆ ಬರಲಿದೆ. ಇದರಿಂದ ಇಲ್ಲಿಯ ಜನರಿಗೂ ಅನುಕೂಲವಾಗಲಿದೆ" ಎಂದು ಸಂಸದ ರಾಘವೇಂದ್ರ ತಿಳಿಸಿದರು.

ವಿಮಾನ ನಿಲ್ದಾಣ, ಕೇಬಲ್ ಕಾರ್
"ಈ ವರ್ಷದ ಡಿಸೆಂಬರ್ಗೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಇನ್ನು ದೇಶದಲ್ಲಿ 15 ಕೇಬಲ್ ಕಾರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ ರಾಜ್ಯದ ಎರಡು ಯೋಜನೆಗಳಿವೆ. ಅದರಲ್ಲಿ ಒಂದು ಕೊಡಚಾದ್ರಿಯಿಂದ ಕೊಲ್ಲೂರು ಮಾರ್ಗದ ಕೇಬಲ್ ಕಾರ್ ಯೋಜನೆಯಾಗಿದೆ" ಎಂದು ಸಂಸದ ರಾಘವೇಂದ್ರ ತಿಳಿಸಿದರು.












Click it and Unblock the Notifications