ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆಗೆ ಸಕ್ರೆಬೈಲಿನ ಆನೆ ಶಿಬಿರದಲ್ಲಿ ಆರೈಕೆ
ಶಿವಮೊಗ್ಗ, ಅಕ್ಟೋಬರ್ 5: ಶಿವಮೊಗ್ಗದ ಸಕ್ರೆಬೈಲಿನಲ್ಲಿರುವ ಆನೆ ಬಿಡಾರಕ್ಕೆ ಮರಿ ಆನೆಯ ಆಗಮನವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿಯ ಕಾಫಿ ತೋಟದಲ್ಲಿ ತಾಯಿ ಆನೆಯಿಂದ ಬೇರೆಯಾಗಿದ್ದ 6 ದಿನದ ಮರಿಯಾನೆಯನ್ನು ಶನಿವಾರ ರಾತ್ರಿ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.
ಮಳಲಿಯ ಅನಿಲ್ ಎಂಬುವರ ಕಾಫಿ ತೋಟದಲ್ಲಿ ಗಾಯಗೊಂಡು ಕೆಸರಿನಲ್ಲಿ ಸಿಲುಕಿ ನರಳುತ್ತಿದ್ದ ಮರಿಯಾನೆಗೆ ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಸಕ್ರೆಬೈಲು ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ. ಮರಿಯಾನೆ ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ನ್ಯೂರೋಲಾಜಿಕಲ್ ಸಮಸ್ಯೆಯಿಂದ ಬಳಲುತ್ತಿರುವ ಮರಿಯಾನೆಯ ಹಿಂಭಾಗದ ಕಾಲು ಊನವಾಗಿದೆ.

ಅಲ್ಲದೆ, ಮುಂಭಾಗದ ಎಡಗಾಲಿನಲ್ಲೂ ತೊಂದರೆಯಿದ್ದು, ತೀವ್ರ ನೋವು ಇರುವುದರಿಂದ ಮೇಲೇಳಲು ಮರಿಯಾನೆಗೆ ಸಾಧ್ಯವಾಗುತ್ತಿಲ್ಲ. ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಸದ್ಯಕ್ಕೆ ಮರಿಯಾನೆಗೆ ತಾಯಿ ಹಾಲು ಸಿಗದ ಕಾರಣ ನಿಶ್ಶಕ್ತವಾಗಿದೆ. ರಾಜ್ಯದ ಅತಿದೊಡ್ಡ ಆನೆ ಬಿಡಾರ ಎಂಬ ಹೆಗ್ಗಳಿಕೆ ಸಕ್ರೆಬೈಲಿಗೆ ಇದ್ದು, ಈ ಮರಿಯಾನೆ ಆಗಮನದಿಂದ ಬಿಡಾರದಲ್ಲಿ ಒಟ್ಟಾರೆ ಆನೆಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಅದರಲ್ಲಿ ಐದನೇ ಮರಿಯಾನೆ ಇದಾಗಿದೆ.












Click it and Unblock the Notifications