Shivajinagara Elections: ಶಿವಾಜಿನಗರ ಕ್ಷೇತ್ರ ಪರಿಚಯ: ಅಧಿಪತ್ಯಕ್ಕೆ ಬೇಗ್-ಕಟ್ಟಾ-ರಿಜ್ವಾನ್ ಕಾದಾಟ
ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಶಿವಾಜಿನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2019ರ ಕಳೆದ ಉಪ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಎಂ ಸರವಣ 13521 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಶಿವಾಜಿನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಶಿವಾಜಿನಗರದ ಹೆಸರನ್ನು ಕೇಳದೇ ಇರೋರಿಲ್ಲ. ಸದಾ ಜನಜಂಗುಳಿಯಿಂದ ತುಂಬಿರುವ ಕರ್ಮರ್ಷಿಯಲ್ ಸ್ಟ್ರೀಟ್ ಶಾಪಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಆದ್ರೆ ಅಲ್ಲಿನ ಕಿರಿದಾದ ರಸ್ತೆ, ಓಡಾಡಲೂ ಜಾಗವಿಲ್ಲದಂತೆ ಎಲ್ಲಿ ನೋಡಿದ್ರೂ ಪಾರ್ಕ್ ಮಾಡಿರುವ ವೆಹಿಕಲ್ ಗಳು, ರಸೆಲ್ ಮಾರುಕಟ್ಟೆಯ ಅವ್ಯವಸ್ಥೆ, ಚರಂಡಿ ವಾಸನೆ ಜನರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಅನ್ನೋದು ಅಷ್ಟೇ ಸತ್ಯ.

ಶಿವಾಜಿ ನಗರ ಬ್ರಾಡ್ವೇ ರಸ್ತೆ, ರಿಚರ್ಡ್ ಸ್ಕ್ವೇರ್ ಮತ್ತು ಮೀನಾಕ್ಷಿ ಕೊಯಿಲ್ ರಸ್ತೆಯ ಮಾಂಸ ಮಾರುಕಟ್ಟೆ, ಐಕಾನಿಕ್ ರಸೆಲ್ ಮಾರುಕಟ್ಟೆ ಮತ್ತು ಸೆಂಟ್ ಮೇರಿ ಚರ್ಚ್ ಎದುರು ಶತಮಾನಗಳಷ್ಟು ಹಳೆಯದಾದ ಬಾವಿ (ರಾಬು ಕಿ ಬೌಡಿ) ಹೊಂದಿದೆ. ಸದ್ಯ ಶಿವಾಜಿನಗರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಕಳೆದ ಮೂರು ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್ ಗೆಲುವು ಸಾಧಿಸುತ್ತಾ ಬಂದಿರುವ ಶಿವಾಜಿನಗರದಲ್ಲಿ ಕಮಲ ಅರಳಲು ಸಜ್ಜಾಗುತ್ತಿದೆ.
ಕೈ ವಿರುದ್ಧ ರೋಷನ್ ಬೇಗ್ ಬಂಡಾಯ
ಕಾಂಗ್ರೆಸ್ ನ ನಿಷ್ಠಾವಂತ ನಾಯಕ ರೋಷನ್ ಬೇಗ್ ಇದ್ದಕ್ಕಿದ್ದಂತೆ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನಂತರ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅನರ್ಹತೆಯ ಶಿಕ್ಷೆಗೊಳಗಾಗಿದ್ದು ಹಳೇ ವಿಷಯ. ಬೆಂಗಳೂರಿನ ಶಿವಾಜಿನಗರವನ್ನು ಕಾಂಗ್ರೆಸ್ಸಿನ ಭದ್ರಕೋಟೆಯನ್ನಾಗಿ ಮಾಡಿದ್ದ ರೋಷನ್ ಬೇಗ್, ಈ ಬಾರಿ ಚುನಾವಣೆಗೆ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಅನರ್ಹರಿಗೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು ಎಂದು ಈಗಾಗಲೇ ಚುನಾವಣಾ ಆಯೋಗ ಹೇಳಿದೆ. ಈ ಕುರಿತು ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರಾದರೂ ರೋಷನ್ ಬೇಗ್ ಅವರ ಸ್ಪರ್ಧೆ ಸಾಧ್ಯವಿಲ್ಲ ಎಂದಾದರೆ ಈ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಸೃಷ್ಟಿಸಿದೆ.
ಕೈ ಬಿಟ್ಟು ಕಮಲದತ್ತ ರೋಷಣ್ ಬೇಗ್?
ಆರ್ ರೋಷನ್ ಬೇಗ್ ಅವರು ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಲು ತೀರ್ಮಾನಿಸಿರುವ ರೋಷನ್ ಬೇಗ್ ಮುಂದಿನ ವಾರ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಯಾವಾಗ ಬೇಗಾದರೂ ಅವರು ಪಕ್ಷಕ್ಕೆ ಸೇರ್ಪಡೆಯಾಗಬಹದು ಎಂದು ಮೂಲಗಳು ತಿಳಿಸಿವೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಶಿವಾಜಿನಗರದಿಂದ ಸ್ಪರ್ಧಿಸಬಹುದು.

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿದ್ದ ರೋಷನ್ ಬೇಗ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವರಿಷ್ಠರು ಕೂಡ ಸಮ್ಮತಿಸಿದ್ದು, ಅವಕಾಶ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಿಳಿಸಿದ್ದಾರೆ. ಬಿಜೆಪಿಗೆ ಶಿವಾಜಿನಗರದಲ್ಲಿ ಪ್ರಬಲವಾದ ಅಭ್ಯರ್ಥಿಗಳ ಕೊರತೆ ಇರುವುದರಿಂದ ರೋಷನ್ ಬೇಗ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ.
ಕೆಲವರ ಪ್ರಕಾರ ರೋಷನ್ ಬೇಗ್ ಅವರಿಗೆ ತಮ್ಮ ಕ್ಷೇತ್ರದಲ್ಲಿ 15 ವರ್ಷಗಳಿಂದ ಸಹಾಯ ಮಾಡುತ್ತಿರುವ ತಮ್ಮ ಪುತ್ರ ರುಮಾನ್ ಬೇಗ್ ಅವರನ್ನು ಶಿವಾಜಿನಗರದಿಂದ ಕಣಕ್ಕಿಳಿಸಲು ಉತ್ಸಾಹವಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ರೋಷನ್ ಬೇಗ್ ವಿರುದ್ಧದ ಆರೋಪಗಳನ್ನು ತೆರವುಗೊಳಿಸಲಾಗಿದೆ. ಬಿಜೆಪಿಯಲ್ಲಿ ಹೊಸ ಆರಂಭವನ್ನು ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಬೆಂಬಲಿಗರು ಹೇಳಿದ್ದಾರೆ.
ರಾಜಕೀಯ ಇತಿಹಾಸ
ಕ್ಷೇತ್ರದ ರಾಜಕೀಯ ಇತಿಹಾಸ ಕೆದಕುವುದಕ್ಕೆ ಹೋದರೆ, ಶಿವಾಜಿನಗರ ಕ್ಷೇತ್ರದಲ್ಲಿ ಈವರೆಗೆ ನಡೆದ 11 ಚುನಾವಣೆಯಲ್ಲಿ 5 ಬಾರಿ ಕಾಂಗ್ರೆಸ್, ಎರಡು ಬಾರಿ ಬಿಜೆಪಿ ಹಾಗೂ ಜನತಾದಳ ಮತ್ತು ಒಂದು ಬಾರಿ ಜನತಾಪಕ್ಷ ಗೆಲುವು ಸಾಧಿಸಿವೆ. 2008, 2013 ಮತ್ತು 2018 ರಲ್ಲಿ ಸತತವಾಗಿ ಮೂರು ಬಾರಿ ಈ ಕ್ಷೇತ್ರದಿಂದ ರೋಶನ್ ಬೇಗ್ ಗೆದ್ದಿದ್ದರು. ರೋಷನ್ ಬೇಗ್ ಮುಂತಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಹೊರಬಂದ ಹದಿನೇಳು ಶಾಸಕರಿಗೂ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆಯನ್ನು ಆಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀಡಿದ್ದರು.
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2019 | ಆರ್ ರೋಷನ್ ಬೇಗ್ (ಕಾಂಗ್ರೆಸ್) | 49,890 | ಎಂ ಸರವಣ(ಬಿಜೆಪಿ) | 36,369 |
| 2018 | ಆರ್ ರೋಷನ್ ಬೇಗ್ (ಕಾಂಗ್ರೆಸ್) | 59,742 | ಕಟ್ಟಾ ಸುಬ್ರಮಣ್ಯ ನಾಯ್ಡು(ಬಿಜೆಪಿ) | 44,702 |
| 2013 | ಆರ್ ರೋಷನ್ ಬೇಗ್ (ಕಾಂಗ್ರೆಸ್) | 49,649 | ನಿರ್ಮಲ್ ಸುರಾನಾ(ಬಿಜೆಪಿ) | 28,794 |
| 2008 | ಆರ್ ರೋಷನ್ ಬೇಗ್ (ಕಾಂಗ್ರೆಸ್) | 43,013 | ನಿರ್ಮಲ್ ಸುರಾನಾ(ಬಿಜೆಪಿ) | 32,617 |
ಆದರೆ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎಂ ಸರವಣ ಅವರಿಗೆ ಟಿಕೆಟ್ ನೀಡಿತು. ಆದರೆ ಅವರು ಐಎನ್ಸಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ ಸೋಲನ್ನು ಅನುಭವಿಸಿದರು.

ಈ ಬಾರಿ ಟಿಕೆಟ್ ಯಾರಿಗೆ?
ಈ ಬಾರಿ ವಿಧಾನಸಭಾ ಚುನಾವಣೆಗೆ ಯಾವ ಪಕ್ಷಗಳು ಯಾರಿಗೆ ಟಿಕೆಟ್ ನೀಡುತ್ತವೆ ಎನ್ನುವ ಕುತೂಹಲ ಮೂಡಿದೆ. ಶಿವಾಜಿನಗರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೂ ಬಿ ಎಸ್ ಯಡಿಯೂರಪ್ಪನವರಿಗೆ ಆಪ್ತರು. ಅಕಸ್ಮಾತ್ ಅನರ್ಹರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದಾದರೆ ತಮ್ಮ ಪುತ್ರನಿಗಾದರೂ ಟಿಕೆಟ್ ನೀಡಬೇಕು ಎಂಬುದು ಬೇಗ್ ಒತ್ತಾಯ. ಕಾಂಗ್ರೆಸ್ ನಿಂದ ವಿಧಾನ ಪರಿಷತ್ ಸದಸಯರಾದ ರಿಜ್ವಾನ್ ಅರ್ಷದ್, ಸಿಎಂ ಇಬ್ರಾಹಿಂ ಮುಂತಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಕಳೆದ ಬಾರಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರಿಜ್ವಾನ್ ಅರ್ಷದ್ ಗೆ ಕಾಂಗ್ರೆಸ್ ಮಣೆ ಹಾಕಿದೆ. ಆದರೆ ಬಿಜೆಪಿ ಮಾತ್ರ ಶಿವಜಿ ನಗರ ಅಭ್ಯರ್ಥಿ ಯಾರೆಂದು ಇನ್ನೂ ಖಚಿತಪಡಿಸಿಲ್ಲ. ಒಟ್ಟಿನಲ್ಲಿ ಶಿವಾಜಿನಗರ ಫಲಿತಾಂಶಕ್ಕಿಂತ ಅಭ್ಯರ್ಥಿ ಯಾರಾಗುತ್ತಾರೆ ಎಂಬುದೇ ಕುತೂಹಲ ಕೆರಳಿಸಿದೆ.
ಶಿವಜಿನಗರ ಸಮಸ್ಯೆಗಳು
ರಾಮಸ್ವಾಮಿ ಪಾಳ್ಯ, ಜಯಮಹಲ್, ಹಲಸೂರು, ಭಾರತಿ ನಗರ, ಶಿವಾಜಿ ನಗರ, ವಸಂತ ನಗರ, ಸಂಪಂಗಿರಾಮ ನಗರ ವಾರ್ಡ್ ಗಳು ಈ ಕ್ಷೇತ್ರದ ಅಡಿಯಲ್ಲಿ ಬರುತ್ತವೆ. ಬೆಂಗಳೂರಿನ ಹಲವು ಪ್ರದೇಶಗಳಂತೆ ಶಿವಾಜಿನಗರ ಸಹ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ. ಜೊತೆಗೆ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ದೂರುಗಳು ಆಗಾಗ ಕೇಳಿಬರುತ್ತವೆ.

ಮತದಾರರ ಸಂಖ್ಯೆ
ಈ ಕ್ಷೇತ್ರದಲ್ಲಿ ಒಟ್ಟು 191528 ಮತದಾರರಿದ್ದು, ಅವರಲ್ಲಿ ಮಹಿಳೆಯರು 94085, ಪುರುಷರು 97441. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ 59742 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 44702 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದರು.












Click it and Unblock the Notifications