ಶಿವಮೊಗ್ಗ: ಬೀಡಾ ಅಂಗಡಿಗೆ ನುಗ್ಗಿ ಹಲ್ಲೆಗೈದವನಿಗೆ 4 ವರ್ಷ ಜೈಲು
ಶಿವಮೊಗ್ಗ, ಸೆಪ್ಟೆಂಬರ್ 28: ಬೀಡಾ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕಳ ಮೇಲೆ ಹಲ್ಲೆ ನಡೆಸಿ ಅಂಗಡಿಯನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸೊರಬ ತಾಲ್ಲೂಕಿನ ಆನವಟ್ಟಿಯ ತಿಮ್ಮಾಪುರದಲ್ಲಿ ಜನವರಿ 24, 2015 ರಲ್ಲಿ ಬೀಡಾ ಅಂಗಡಿಯೊಂದರ ಮಾಲೀಕಳು ಬಾಕಿ ಹಣ ಕೇಳಿದ್ದಕ್ಕೆ ಅದೇ ಗ್ರಾಮದ ಚೌಡಪ್ಪ (25) ಎಂಬಾತ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಮಾತ್ರವಲ್ಲದೆ ಅಶ್ಲೀಲ ಪದಗಳಿಂದ ನಿಂದಿಸಿ, ಜನವರಿ 26 ರಂದು ಮತ್ತೆ ಅಂಗಡಿಗೆ ನುಗ್ಗಿ ಬೆಂಕಿ ಹಚ್ಚಿ ಅಂಗಡಿಯನ್ನು ಸುಟ್ಟು ಹಾಕಿದ್ದ.

ಈ ಸಂಬಂಧ ಆನವಟ್ಟಿ ಪೊಲೀಸರು ಕೇಸು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರಾದ ಆರ್.ಬಿ ಧರ್ಮೇಗೌಡರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಚೌಡಪ್ಪನಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ಮತ್ತು ಹಾನಿಗೊಳಗಾದ ಮಹಿಳೆಗೆ 15 ಸಾವಿರ ರೂ.ಗಳ ಪರಿಹಾರ ನೀಡುವಂತೆ ತೀರ್ಪು ನೀಡಿದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವಿ.ಜಿ ಯಳಗೇರಿ ಅವರು ವಾದಿಸಿದ್ದರು.












Click it and Unblock the Notifications